ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಆಟಗಾರರು ಕೊನೆಯ ಹಂತದ ಸಿದ್ಧತೆಗಳನ್ನು ಬೆಂಗಳೂರುನ ಎನ್ಸಿಎನಲ್ಲಿ ನಡೆಸುತ್ತಿದ್ದಾರೆ. ಭಾರತದ ಮೊದಲ ಪಂದ್ಯ ಸೆಪ್ಟೆಂಬರ್ 2ರಂದು ಪಾಕಿಸ್ತಾನದ ವಿರುದ್ಧ ನಡೆಯಲಿರುವ ಕಾರಣ ಆ ಪಂದ್ಯಕ್ಕೆ ಭಾರತೀಯ ಆಟಗಾರರು ಭರದ ಸಿದ್ಧತೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ 17 ಆಟಗಾರರ ಬಳಗದಲ್ಲಿ ಓರ್ವ ಆಟಗಾರನಿಗೆ ಅವಕಾಶ ದೊರೆಯದ್ದಕ್ಕೆ ತನಗೆ ಬೇಸರವಾಗಿದೆ ಎಂದಿದ್ದಾರೆ ಆರ್ಸಿಬಿ ತಂಡದ ಮಾಜಿ ಆಟಗಾರ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್.
ಎಬಿ ಡಿಲಿಯರ್ಸ್ ಉಲ್ಲೇಖಿಸಿದ ಆಟಗಾರ ಬೇರೆ ಯಾರೂ ಅಲ್ಲ ಆರ್ಸಿಬಿಯಲ್ಲಿ ತಂಡದ ಸಹ ಆಟಗಾರನಾಗಿದ್ದ ಭಾರತದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಬಗ್ಗೆ. ಈ ಬಾರಿಯ ಏಷ್ಯಾಕೊ್ ಟೂರ್ನಿಗೆ ಪ್ರಕಟಿಸಿರುವ ತಂಡದಲ್ಲಿ ಯುಜುವೇಂದ್ರ ಚಾಹಲ್ಗೆ ಅವಕಾಶ ಇಲ್ಲದಿರುವುದನ್ನು ನೋಡಿ ಸಾಕಷ್ಟು ಮಾಜಿ ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ ಇದಕ್ಕೆ ತಮ್ಮದೇ ಆದ ಕಾರಣವನ್ನು ನೀಡಿದ್ದರು ನಾಯಕ ರೋಹಿತ್ ಶರ್ಮಾ. ಜೊತೆಗೆ ವಿಶ್ವಕಪ್ ತಂಡದಲ್ಲಿ ಚಾಹಲ್ ಸೇರಿದಂತೆ ಕೆಲ ಆಟಗಾರರಿಗೆ ಅವಕಾಶವಿನ್ನೂ ತೆರೆದೇ ಇದೆ ಎನ್ನುವುದನ್ನು ಕೂಡ ಬಹಿರಂಗಪಡಿಸಿದ್ದರು.

ಚಾಹಲ್ ಅವರನ್ನು ಕೈಬಿಡಲಾಗಿದೆ. ಯಾರನ್ನು ಆಯ್ಕೆ ಮಾಡಬೇಕು ಎನ್ನುವ ವಿಚಾರವಾಗಿ ಆಯ್ಕೆಗಾರರು ಸ್ಪಷ್ಟತೆಯನ್ನು ಹೊಂದಿದ್ದರು. ಆದರೆ ಚಾಹಲ್ ಅವರನ್ನು ಹೊರಗಿಟ್ಟಿದ್ದು ನನಗೆ ಸ್ವಲ್ಪ ಬೇಸರವಾಗಿದೆ. ಯುಜಿ ಯಾವಾಗಲೂ ಪರಿಣಾಮಕಾರಿಯಾಗಿರುವ ಬೌಲರ್ ಆಗಿದ್ದು ತಂಡದಲ್ಲಿ ಆತನಂತಾ ಲೆಗ್ ಸ್ಪಿನ್ನರ್ನನ್ನು ಹೊಂದುವುದು ಅತ್ಯುತ್ತಮ ಅಂಶ. ಆತ ಎಷ್ಟು ಕೌಶಲ್ಯಯುತ ಬೌಲರ್ ಎನ್ನುವುದು ನಮಗೆ ತಿಳಿದಿದೆ" ಎಂದಿದ್ದಾರೆ ಎಬಿ ಡಿವಿಲಿಯರ್ಸ್.
ಇನ್ನು ತಂಡದ ಆಯ್ಕೆಯ ಬಗ್ಗೆ ನಾಯಕ ರೋಹಿತ್ ಶರ್ಮಾ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ಸ್ಪಷ್ಟನೆ ನೀಡಿದ್ದರು. "ನಾವು ಆಫ್ ಸ್ಪಿನ್ನರ್ ಬಗ್ಗೆ ಸಾಕಷ್ಟು ಚರ್ಚೆಗಳನ್ನು ನಡೆಸಿದೆವು. ಜೊತೆಗೆ ಲೆಗ್ ಸ್ಪಿನ್ನರ್ ಬಗ್ಗೆ ಕೂಡ. ಹೆಚ್ಚು ಹಿನ್ನಡೆಯುಂಟು ಮಾಡುವುದು ಎಲ್ಲಿ ಎಂದಾಗ 8 ಹಾಗೂ 9ನೇ ಕ್ರಮಾಂಕದಲ್ಲಿ. ಆ ಸ್ಥಾನದಲ್ಲಿ ಬ್ಯಾಟಿಂಗ್ ಕೂಡ ನಡೆಸಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರನನ್ನು ಬಯಸಿದ್ದೆವು. ಹಾಗಾಗಿ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಿದ್ದು ಅವರು ಈ ವರ್ಷ ವೈಟ್ಬಾಲ್ ಕ್ರಿಕೆಟ್ನಲ್ಲಿ ಬ್ಯಾಟಿಂಗ್ನಲ್ಲಿಯೂ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ" ಎಂದಿದ್ದರು ರೋಹಿತ್ ಶರ್ಮಾ.
"ನಾವು ಆಫ್ ಸ್ಪಿನ್ನರ್ ಬಗ್ಗೆಯೂ ಯೋಚಿಸಿದ್ದೆವು. ಆರ್ ಅಶ್ವಿನ್ ಅಥವಾ ವಾಶಿಂಗ್ಟನ್ ಸುಂದರ್. ಆದರೆ 17 ಆಟಗಾರರು ಮಾತ್ರವೇ ಸಾಧ್ಯವಿರುವ ಕಾರಣ ಚಾಹಲ್ ಹೊರಗುಳಿಯುವುದು ಅನಿವಾರ್ಯವಾಯಿತು. ಅವರು ತಂಡದೊಳಗೆ ಬರಲು ಒಂದೇ ದಾರಿಯೆಂದರೆ ಓರ್ವ ವೇಗಿ ಹೊರಗುಳಿಯಬೇಕಾಗಿತ್ತು. ಆದರೆ ನಾವು ಅದನ್ನು ಮಾಡಲು ಸಾಧ್ಯವಿಲ್ಲ ಯಾಕೆಂದರೆ ಮುಂದಿನ ಎರಡು ತಂಡಗಳ ಕಾಲ ಸಾಕಷ್ಟು ಕ್ರಿಕೆಟ್ ಇರುವ ಕಾರಣ ವೇಗಿಗಳ ಪಾತ್ರ ಮಹತ್ವದ್ದಾಗಿರಲಿದೆ. ಕೆಲ ಆಟಗಾರರು ಸುದೀರ್ಘ ಕಾಲದ ಬಳಿಕ ಆಡುತ್ತಿರುವ ಕಾರಣ ಅವರಿಗೆ ಉತ್ತಮ ಅವಕಾಶ ನೀಡಿ ಅವರಿಂದ ಬರುವ ಪ್ರದರ್ಶನವನ್ನು ಎದುರುನೋಡುತ್ತಿದ್ದೇವೆ" ಎಂದಿದ್ದಾರೆ ರೋಹಿತ್ ಶರ್ಮಾ.
"ಈ ಹಂತದಲ್ಲಿ ಯಾರಿಗೂ ಕೂಡ ಅವಕಾಶ ಮುಚ್ಚಿಲ್ಲ. ಯಾರು ಯಾವಾಗ ಬೇಕಾದರೂ ಅವಕಾಶ ಗಿಟ್ಟಿಸಿಕೊಳ್ಳಬಹುದು. ಚಾಹಲ್ ಸಾಕಷ್ಟು ವೈಟ್ ಬಾಲ್ ಕ್ರಿಕೆಟ್ ಆಡಿರುವ ಆಟಗಾರ. ವಿಶ್ವಕಪ್ಗೆ ಅವರ ಅಗತ್ಯ ನಮಗಿದೆ ಎಂದು ಅನಿಸಿದರೆ ಅವರನ್ನು ತಂಡದೊಳಗೆ ಸೇರಿಸಿಕೊಳ್ಳುವ ಪ್ರಯತ್ನ ನಡೆಸುತ್ತೇವೆ. ಇದು ಅಶ್ವಿನ್ ಹಾಗೂ ವಾಶಿಂಗ್ಟನ್ ಸುಂದರ್ ವಿಚಾರದಲ್ಲಿಯೂ ಆಗುತ್ತದೆ" ಎಂದಿದ್ದಾರೆ ರೋಹಿತ್ ಶರ್ಮಾ.