ಏಷ್ಯಾಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನೇಪಾಳದ ವಿರುದ್ಧ ಅಮೋಘ ಗೆಲುವು ಸಾಧಿಸಿರುವ ಪಾಕಿಸ್ತಾನ ಮುಂದಿನ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ. ಹೀಗಾಗಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಟೀಮ್ ಇಂಡಿಯಾವನ್ನು ಎದುರಿಸಲು ಶ್ರೀಲಂಕಾಗೆ ಬಂದಿಳಿದಿದೆ. ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ನಡೆಯಲಿರುವ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಈ ರಣರೋಚಕ ಕದನ ನಡೆಯಲಿದ್ದು ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾದುಕುಳಿತಿದ್ದಾರೆ.
ಈ ಟೂರ್ನಿಯ ಉದ್ಘಾಟನಾ ಪಂದ್ಯ ಪಾಕಿಸ್ತಾನದ ಮುಲ್ತಾನ್ನಲ್ಲಿ ಆಯೋಜನೆಯಾಗಿತ್ತು. ಈ ಪಂದ್ಯದಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿತ್ತು. ಮೊದಲಿಗೆ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ಪಾಕಿಸ್ತಾನ ನಾಯಕ ಬಾಬರ್ ಅಜಂ ಹಾಗೂ ಅಫ್ತಿಕಾರ್ ಅಹ್ಮದ್ ಅವರ ಅಮೋಘ ಶತಕದ ನೆರವಿನಿಂದಾಗಿ 342/6 ರನ್ಗಳನ್ನು ಕಲೆಹಾಕಿತ್ತು.

ನಂತರ ಬೌಲಿಂಗ್ನಲ್ಲಿಯೂ ಪಾಕಿಸ್ತಾನ ತಂಡ ಮಿಂಚಿನ ಪ್ರದರ್ಶನ ನೀಡುವ ಮೂಲಕ ಗಮನಸೆಳೆಯಿತು. ಬೌಲಿಂಗ್ನಲ್ಲಿ ಶದಬ್ ಖಾನ್ ಭರ್ಜರಿ ನಾಲ್ಕು ವಿಕೆಟ್ ಪಡೆಯುವ ಮಿಂಚಿದರೆ ಶಾಹೀನ್ ಅಫ್ರಿದಿ ಹಾಗೂ ಹ್ಯಾರಿಸ್ ರೌಫ್ ತಲಾ ಎರಡು ವಿಕೆಟ್ ಕಬಳಿಸಿದರು. ಹೀಗಾಗಿ ಪಾಕಿಸ್ತಾನ ತಂಡ ನೇಪಾಳವನ್ನು 104 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಆರಂಭಿಕ ಪಂದ್ಯದಲ್ಲಿ ಪಾಕ್ 238 ರನ್ಗಳ ಅಂತರದಿಂದ ಗೆದ್ದು ಬೀಗಿತ್ತು.
ಮುಲ್ತಾನ್ನಲ್ಲಿ ನೇಪಾಳ ವಿರುದ್ಧದ ಪಂದ್ಯವನ್ನು ಗೆದ್ದುಕೊಂಡ ಬಳಿಕ ಪಾಕಿಸ್ತಾನ ಗುರುವಾರ ಮಧ್ಯಾಹ್ನ ಮುಲ್ತಾನ್ನಿಂದ ಪ್ರಯಾಣ ಬೆಳೆಸಿದ್ದು ಶ್ರೀಲಂಕಾದ ಕ್ಯಾಂಡಿಗೆ ತಲುಪಿದೆ. ಶಯಕ್ರವಾರ ಭಾರತದ ವಿರುದ್ಧದ ಪಂದ್ಯಕ್ಕೆ ಅಭ್ಯಾಸವನ್ನು ನಡೆಸಲಿದ್ದು ಶನಿವಾರ ಟೂರ್ನಿಯ ರೋಚಕ ಪಂದ್ಯ ಆಯೋಜನೆಯಾಗಲಿದೆ.