ಏಷ್ಯಾಕಪ್ ಟೂರ್ನಿಯ ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ನೀರಸವಾಗಿ ಅಂತ್ಯ ಕಾಣುವಂತಾಗಿದೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಮುಕ್ತಾಯದ ಬಳಿಕ ಆಗಮಿಸಿದ ಮಳೆ ಪಂದ್ಯ ಮುಂದುವರಿಯಲು ಅವಕಾಶವನ್ನೇ ನೀಡಲಿಲ್ಲ. ಹೀಗಾಗಿ ಪಂದ್ಯವನ್ನು ಫಲಿತಾಂಶವಿಲ್ಲದೆ ರದ್ದುಗೊಳಿಸಲಾಗಿದೆ.
ಎರಡನೇ ಇನ್ನಿಂಗ್ಸ್ನ ಆರಂಭಕ್ಕೆ ಒಂದೆರಡು ಬಾರಿ ಅವಕಾಶ ನೀಡುವ ಸೂಚನೆ ದೊರೆಯಿತು. ಆದರೆ ಮತ್ತೆ ಮಳೆ ಜೋರಾಗಿ ಸುರಿದ ಕಾರಣದಿಂದಾಗಿ ಪಂದ್ಯ ಮುಂದುವರಿಯುವ ಯಾವುದೇ ಅವಕಾಶ ದೊರೆಯಲಿಲ್ಲ. ಹೀಗಾಗಿ ಈ ಪಂದ್ಯದ ವೀಕ್ಷಣೆಗೆ ಕಾಯುತ್ತಿದ್ದ ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಇನ್ನು ಈ ಪಂದ್ಯ ಮಳೆಯಿಂದಾಗಿ ರದ್ದಾಗಿರುವ ಕಾರಣ ಭಾರತ ಹಾಗೂ ಪಾಕಿಸ್ಥಾನ ತಂಡಗಳು ಅಂಕಗಳನ್ನು ಹಂಚಿಕೊಂಡಿದೆ. ಈ ಮೂಲಕ ಪಾಕಿಸ್ತಾನ ತಂಡ ನೇರವಾಗಿ ಸೂಪರ್ 4 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ನೇಪಾಳದ ವಿರುದ್ಧ ಸೋಮವಾರ ಆಡಲಿದ್ದು ಆ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್ಗೆ ಪ್ರವೇಶ ಖಚಿತಪಡಿಸಿಕೊಳ್ಳಬೇಕಿದೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಸವಾಲಿನ ಗುರಿ ನೀಡಲು ಯಶಸ್ವಿಯಾಗಿತ್ತು. ಆರಂಭದಲ್ಲಿ ಭಾರೀ ಹಿನ್ನಡೆ ಕಂಡು ಸಂಕಷ್ಟಕ್ಕೆ ಒಳಗಾಗಿದ್ದರೂ ನಂತರ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ಟೀಮ್ ಇಂಡಿಯಾ ಉತ್ತಮ ಮೊತ್ತವನ್ನು ಗಳಿಸಲು ಸಾಧ್ಯವಾಯಿತು.
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸುವ ನಿರ್ಧಾರ ತೆಗೆದುಕೊಂಡ ನಾಯಕ ರೋಹಿತ್ ಶರ್ಮಾ ಅದನ್ನು ಸಮರ್ಥಿಸುವ ರೀತಿಯ ಆರಂಭವನ್ನು ನೀಡಲು ವಿಫಲವಾದರು. 11 ರನ್ಗಳಿಸಿ ರೋಹಿತ್ ಔಟಾದರೆ ಅದಾದ ಬಳಿಕ ಬಂದ ವಿರಾಟ್ ಕೊಹ್ಲಿ ಕೇವಲ 4 ರನ್ಗಳನ್ನು ಗಳಿಸಲು ಮಾತ್ರವೇ ಶಕ್ತವಾದರು. ನಂತರ ಶ್ರೇಯಸ್ ಐಯ್ಯರ್ 14 ರನ್ಗಳಿಸಿ ಔಟಾಗುವ ಮೂಲಕ ಭಾರತ 48 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಇನ್ನು ನಂತರ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಶುಬ್ಮನ್ ಗಿಲ್ ಕೂಡ 10 ರನ್ಗಳನ್ನು ಮಾತ್ರವೇ ಗಳಿಸಲು ಶಕ್ತವಾದರು. ಈ ಸಂದರ್ಭದಲ್ಲಿ ಭಾರತ ತಂಡ 66 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
66 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾಗಿದ್ದು ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ. ಇವರಿಬ್ಬರು ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಜವಾಬ್ಧಾರಿಯನ್ನು ವಹಿಸಿಕೊಂಡರು. ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಿದ ಈ ಜೋಡಿ 5ನೇ ವಿಕೆಟ್ ನಿಡಿದ್ದು 138 ರನ್ಗಳ ಭರ್ಜರಿ ಜೊತೆಯಾಟ. ಇಶಾನ್ ಕಿಶನ್ 83 ರನ್ಗಳಿಸಿ ಔಟಾಗುವ ಮೂಲಕ ಈ ಜೊತೆಯಾಟ ಬೇರ್ಪಟ್ಟಿತ್ತು. ಆದರೆ ಹಾರ್ದಿಕ್ ಪಾಂಡ್ಯ ತಮ್ಮ ಆಟವನ್ನು ವಿಸ್ತರಿಸಿದರು. 87 ರನ್ಗಳಿಸಿದ್ದಾಗ ಹಾರ್ದಿಕ್ ಪಾಂಡ್ಯ ಕೂಡ ತಮ್ಮ ವಿಕೆಟ್ ಕಳೆದುಕೊಂಡರು.
ಹಾರ್ದಿಕ್ ಔಟಾದ ಬಳಿಕ ಮತ್ತೆ ಕುಸಿತವನ್ನು ಕಂಡಿತು ಭಾರತ. ಹಾರ್ದಿಕ್ ಔಟಾಗುತ್ತಿದ್ದಂತೆಯೇ ರವೀಂದ್ರ ಜಡೇಜಾ ಕೂಡ ವಿಕೆಟ್ ಕಳೆದುಕೊಂಡರೆ ಶಾರ್ದೂಲ್ ಠಾಕೂರ್ ಕೂಡ ಅಲ್ಪ ಮೊತ್ತಕ್ಕೆ ಔಟಾದರು. ಆದರೆ ಜಸ್ಪ್ರೀತ್ ಬೂಮ್ರಾ ಕೊನೆಯಲ್ಲಿ 16 ರನ್ಗಳಿಸಿದ್ದು ಭಾರತ 266 ರನ್ಗಳನ್ನು ಗಳಿಸಲು ಸಾಧ್ಯವಾಯಿತು.