ಏಷ್ಯಾಕಪ್ನಲ್ಲಿ ಭಾಗಿಯಾಗಿರುವ ಟೀಮ್ ಇಂಡಿಯಾ ಸ್ಕ್ವಾಡ್ ಎರಡನೇ ಪಂದ್ಯದಲ್ಲಿ ನೇಪಾಳ ತಂಡವನ್ನು ಎದುರಿಸಲು ಸಜ್ಜಾಗುತ್ತಿದೆ. ಆದರೆ ಈ ಸಂದರ್ಭದಲ್ಲಿ ಟೀಮ್ ಇಂಡಿಯಾದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಶ್ರೀಲಂಕಾದಲ್ಲಿ ಭಾರತ ತಂಡವನ್ನು ತೊರೆದು ಮುಂಬೈಗೆ ಪ್ರಯಾಣಿಸಿದ್ದಾರೆ ಎನ್ನಯವ ಮಾಹಿತಿ ಲಭ್ಯವಾಗಿದೆ.
ಗಾಯದಿಂದ ಇತ್ತೀಚೆಗಷ್ಟೇ ಕಮ್ಬ್ಯಾಕ್ ಮಾಡಿರುವ ಬೂಮ್ರಾ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಆದರೆ ಮಳೆಯಿಂದಾಗಿ ಪಂದ್ಯ ರದ್ದಾಗಿದ್ದ ಕಾರಣ ಬೌಲಿಂಗ್ ನಡೆಸಲು ಅವಕಾಶ ದೊರೆತಿರಲಿಲ್ಲ. ಹೀಗಾಗಿ ನೇಪಾಳ ವಿರುದ್ಧದ ಪಂದ್ಯದಲ್ಲಿ ಬೂಮ್ರಾ ಮೇಲೆ ಸಾಕಷ್ಟು ನಿರೀಕ್ಷೆಯಿತ್ತು. ಆದರೆ ನೇಪಾಳ ವಿರುದ್ಧದ ಪಂದ್ಯಕ್ಕೆ ಬೂಮ್ರಾ ಅಲಭ್ತವಾಗುವುದು ಬಹುತೇಕ ಖಚಿತವಾಗಿದೆ.

ಜಸ್ಪ್ರೀತ್ ಬೂಮ್ರಾ ಟೀಮ್ ಇಂಡಿಯಾ ಸ್ಕ್ವಾಡ್ ತೊರೆದು ಮುಂಬೈಗೆ ಪ್ರಯಾಣಿಸಲು ಸ್ಪಷ್ಟ ಕಾರಣ ಬಹಿರಂಗವಾಗಿಲ್ಲ. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಬೂಮ್ರಾ ಮುಂಬೈಗೆ ವಾಪಾಸಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ನೇಪಾಳ ತಂಡದ ವಿರುದ್ಧ ಸೋಮವಾರ ನಡೆಯಲಿರುವ ಪಂದ್ಯಕ್ಕೆ ಜಸ್ಸಪ್ರೀತ್ ಬೂಮ್ರಾ ಅಲಭ್ತವಾಗುವುದು ಖಚಿತವಾಗಿದೆ.
ಭಾರತಕ್ಕೆ ಗೆಲುವು ಅನಿವಾರ್ಯ
ಪಾಕಿಸ್ತಾನದ ವಿರುದ್ಧದ ಮೊದಲ ಲೀಗ್ ಪಂದ್ಯ ಮಳೆಗೆ ಆಹುತಿಯಾಗಿರುವ ಕಾರಣದಿಂದಾಗಿ ಭಾರತಕ್ಕೆ ನೇಪಾಳ ವಿರುದ್ಧದ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಆದರೆ ಇದೇ ಮೊದಲ ಬಾರಿಗೆ ಏಷ್ಯಾಕಪ್ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದೆ. ಭಾರತದ ಗುಣಮಟ್ಟದ ಆಟಕ್ಕೆ ದಿಟ್ಟವಾಗಿ ಪ್ರತಿಕ್ರಿಯೆ ನೀಡುವುದು ಕಷ್ಟ ಸಾಧ್ಯ. ಹಾಗಿದ್ದರೂ ಕ್ರಿಕೆಟ್ನಲ್ಲಿ ಏನು ಬೇಕಾದರೂ ಸಾಧ್ಯವಿರುವ ಕಾರಣದಿಂದಾಗಿ ನಿರ್ಲಕ್ಷ್ಯವಹಿಸಲು ಸಾಧ್ಯವಿಲ್ಲ.
ಮಳೆಯ ಆತಂಕ
ಇನ್ನು ಪಾಕಿಸ್ತಾನದ ವಿರುದ್ಧದ ಪಂದ್ಯ ನಡೆದ ಕ್ಯಾಂಡಿಯ ಪಲ್ಲೆಕೆಲೆ ಕ್ರೀಡಾಂಗಣದಲ್ಲಿಯೇ ನೇಪಾಳ ವಿರುದ್ಧ ಪಂದ್ಯವೂ ಆಯೋಜನೆಯಾಗಲಿದೆ. ಆದರೆ ಈ ಪಂದ್ಯಕ್ಕೂ ಮಳೆ ಅಡ್ಡಿಯುಂಟು ಮಾಡುವ ಆತಂಕವಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ನೇಪಾಳ ವಿರುದ್ಧದ ಪಂದ್ಯವೂ ನಡೆಯುವುದು ಬಹುತೇಕ ಕಷ್ಟ ಎನ್ನಲಾಗಿದೆ. ಒಂದು ವೇಳೆ ಈ ಪಂದ್ಯವೂ ಆಯೋಜನೆಯಾಗದಿದ್ದಲ್ಲಿ ಮತ್ತೆ ಅಂಕಗಳನ್ನು ಹಂಚಲಾಗುತ್ತದೆ. ಹಾಗಾಗಿ ಭಾರತ ಎರಡು ಅಂಕಗಳೊಂದಿಗೆ ಸೂಪರ್ 4 ಹಂತಕ್ಕೆ ಪ್ರವೇಶಿಸಲಿದೆ.