ಟೀಮ್ ಇಂಡಿಯಾದಲ್ಲಿ ಬಹುದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗೆ ದ್ವೀಪರಾಷ್ಟ್ರದಲ್ಲಿ ಉತ್ತರ ಸಿಕ್ಕಂತೆ ಆಗಿದೆ. ಕೋಲಂಬದ ಆರ್. ಪ್ರೇಮದಾಸ್ ಕ್ರೀಡಾಂಗಣದಲ್ಲಿ ಪಾಕ್ ವಿರುದ್ಧ ಭಾರತ ಸೊಗಸಾದ ಪ್ರದರ್ಶನ ನೀಡಿದೆ. ಈ ಮೂಲಕ ವಿಶ್ವಕಪ್ಗೆ ಮುನ್ನ ತಾನು ಎಲ್ಲ ಸ್ಥರದಲ್ಲೂ ಸಿದ್ಧರಾಗಿರುವುದಾಗಿ ಸಾರಿ ಹೇಳಿದೆ.
ಕಳೆದ ಎರಡು ಮೂರು ವರ್ಷಗಳಿಂದ ಟೀಮ್ ಇಂಡಿಯಾ ನಾಲ್ಕನೇ ಸ್ಥಾನದಲ್ಲಿ ಆಡುವುದು ಯಾರು ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿತ್ತು. ಈ ಪ್ರಶ್ನೆಗೆ ಸೋಮವಾರ ಉತ್ತರ ಲಭಿಸಿದೆ. ಏಷ್ಯಾಕಪ್ನ ಆರಂಭಿಕ ಪಂದ್ಯಗಳಲ್ಲಿ ಹೊರಗುಳಿದಿದ್ದ ಕೆ.ಎಲ್ ರಾಹುಲ್ ತಂಡಕ್ಕೆ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದ್ದಾರೆ. ಏಷ್ಯಾ ಕಪ್ನ ಸೂಪರ್ 4ರ ಕಾದಾಟದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಕೆ.ಎಲ್ ತಂಡ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

ಪಾಕಿಸ್ತಾನ ವಿರುದ್ಧದ ಸೂಪರ್ 4 ಪಂದ್ಯ ಭಾನುವಾರ ಮಳೆಯಿಂದಾಗಿ ರದ್ದಾಗಿತ್ತು. ಮೀಸಲು ದಿನವಾದ ಸೋಮವಾರ ಪಂದ್ಯ ಆರಂಭವಾದಾಗ, ಎಲ್ಲಿಂದ ಆಟ ಬಿಟ್ಟಿದ್ದರೋ ಅಲ್ಲಿಂದಲೇ ಕೆ.ಎಲ್ ರಾಹುಲ್ ಆಟ ಮುಂದುವರಿಸಿದರು. ಭಾನುವಾರ ರಾಹುಲ್ ಆಡಿದ ದಾಟಿಯನ್ನು ನೋಡಿದವರಿಗೆ ಬಿಗ್ ಇನ್ನಿಂಗ್ಸ್ ಸೂಚನೆ ಸಿಕ್ಕಿತ್ತು. ಭಾನುವಾರವೇ ರಾಹುಲ್ ಆಕರ್ಷಕ ಫುಟ್ ವರ್ಕ್ ತೋರಿಸಿದ್ದರು. ಇವರ ಆಟವನ್ನು ನೋಡಲು ಅಭಿಮಾನಿಗಳು ಸಹ ತುದಿಗಾಲಿನಲ್ಲಿ ನಿಂತಿದ್ದರು.
ಐಪಿಎಲ್ನಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಕ್ಕೆ ತುತ್ತಾಗಿ ರಾಹುಲ್, ಬಹುದಿನಗಳ ಬಳಿಕ ಮೈದಾನಕ್ಕೆ ಎಂಟ್ರಿ ನೀಡಿದರು. ಸೂಪರ್ ಫೋರ್ ಹಂತದ ಪಂದ್ಯದಲ್ಲಿ ರಾಹುಲ್ಗೆ ಸ್ಥಾನ ಸಿಗುವುದೇ ಡೌಟ್ ಎಂದು ಹೇಳಲಾಗುತ್ತಿತ್ತು. ಆದರೆ, ಶ್ರೇಯಸ್ ಅಯ್ಯರ್ ಬೆನ್ನು ನೋವಿಗೆ ತುತ್ತಾದ ಬಳಿಕ, ರಾಹುಲ್ ಅವರ ಮೇಲೆ ಅಪಾರ ನಂಬಿಕೆ ಇಟ್ಟು ಮ್ಯಾನೇಜ್ಮೆಂಟ್ ತಂಡದಲ್ಲಿ ಸ್ಥಾನ ನೀಡಿತು.
ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಬ್ಯಾಟ್ ಮಾಡಿದ ರಾಹುಲ್, ತಮ್ಮ ನೈಜ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದರು. ಸ್ಪಿನ್ ಬೌಲರ್ ಹಾಗೂ ವೇಗದ ಬೌಲರ್ ಗಳ ವಿರುದ್ಧ ಸಲೀಸಾಗಿ ರನ್ ಕಲೆ ಹಾಕಿದ ರಾಹುಲ್, ಶತಕ ಗಳಿಸಿ ಸಂಭ್ರಮಿಸಿದರು. ನಸೀಮ್ ಶಾ ಎಸೆತದಲ್ಲಿ ರಾಹುಲ್ ವೈಡ್ ಲಾಂಗ್ ಆನ್ಗೆ ಚೆಂಡನ್ನು ಅಟ್ಟಿ ಎರಡು ರನ್ ಕದಿಯುವ ಮೂಲಕ ಶತಕ ಬಾರಿಸಿ ಸಂಭ್ರಮಿಸಿದರು.
106 ಎಸೆತಗಳನ್ನು ಎದುರಿಸಿದ ಕೆ.ಎಲ್ 12 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 111 ರನ್ ಸಿಡಿಸಿದರು. ರಾಹುಲ್ ಒಟ್ಟಾರೆ 141 ನಿಮಿಷಗಳ ಕಾಲ ಕ್ರೀಸ್ನಲ್ಲಿದ್ದರು. ರಾಹುಲ್ ಅವರ ಮೋಡಿಯ ಬ್ಯಾಟಿಂಗ್ನಿಂದ ಟೀಮ್ ಇಂಡಿಯಾ ಸಮಾಧಾನದ ನಿಟ್ಟುಸಿರು ಬಿಟ್ಟಿದೆ.
ವಿಶ್ವಕಪ್ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಲು ನಾನು ರೆಡಿ ಎಂಬುದನ್ನು ಶ್ರೀಲಂಕಾದಲ್ಲಿ ಸಾರಿ ಹೇಳಿದ್ದಾರೆ. ರಾಹುಲ್ ಅವರ ಧಮಾಕೆದಾರ್ ಬ್ಯಾಟಿಂಗ್ನಿಂದ ಶ್ರೇಯಸ್ ಅಯ್ಯರ್ ಗೆ ಮುಂದಿನ ಪಂದ್ಯಗಳಲ್ಲಿ ಆಡಲು ಅವಕಾಶ ಲಭಿಸುತ್ತದಾ ಎಂಬ ಪ್ರಶ್ನೆಗಳು ಎದ್ದಿವೆ. ಪಾಕ್ ವಿರುದ್ಧ ಮನಮೋಹಕ ಬ್ಯಾಟಿಂಗ್ ನಡೆಸಿದ ರಾಹುಲ್ ಅಭಿಮಾನಿಗಳಿಗೆ ಮನ ಗೆದ್ದಿದ್ದಾರೆ.