ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೂಪರ್ 4 ಹಂತದಲ್ಲಿ ತನ್ನ ಹೋರಾಟವನ್ನು ಕೊನೆಗೊಳಿಸಿದೆ. ಹೀಗಾಗಿ ಪಾಕಿಸ್ತಾನ ತಮಡ ಈಗ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಮಾಜಿ ಕ್ರಿಕೆಟಿಗರು ಕ್ರಿಕೆಟ್ ವಿಶ್ಲೇಷಕರು ತಂಡ ಎಡವಿದ್ದೆಲ್ಲಿ ಎನ್ನುವ ವಿಶ್ಲೇಷಣೆಗಳನ್ನು ನಡೆಸುತ್ತಿದ್ದಾರೆ. ಇತ್ತ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಂಡದ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಯನ್ನು ನಡೆಸುತ್ತಿದ್ದಾರೆ.
ಈ ಮಧ್ಯೆ ಪಾಕಿಸ್ತಾನದ ಯುವ ವೇಗದ ಬೌಲರ್ ಶಹ್ನವಾಜ್ ದಹಾನಿ ತನ್ನದಲ್ಲದ ತಪ್ಪಿಗೆ ತಗೆಪಾಟಲಿಗೀಡಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗಳಿಗೆ ಆಹಾರವಾಗಿದ್ದಾರೆ. ವಿಪರ್ಯಾಸವೆಂದರೆ ಇಲ್ಲಿ ಶಹ್ನವಾಜ್ ದಹಾನಿ ಅವರಿಂದ ಯಾವುದೇ ಎಡವಟ್ಟುಗಳಾಗಿಲ್ಲ. ಹಾಗಿದ್ದರೂ ಪಾಕ್ ವೇಗಿ ಮೀಮ್ಸ್ಗಳಿಗೆ ಆಹಾರವಾಗಿದ್ದು ಯಾಕೆ? ಇಲ್ಲಿದೆ ಮಾಹಿತಿ.

ಪಾಕಿಸ್ತಾನ ತಂಡದ ಇಬ್ಬರು ಪ್ರಮುಖ ವೇಗದ ಬೌಲರ್ಗಳಾದ ನಸೀಮ್ ಶಾ ಹಾಗೂ ಹ್ಯಾರಿಸ್ ರೌಪ್ ಭಾರತದ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಇಬ್ಬರು ಪ್ರಮುಖ ವೇಗಿಗಳು ಗಾಯಕ್ಕೆ ತುತ್ತಾದ ಕಾರಣ ಪಾಕಿಸ್ತಾನ ಬದಲಿ ಆಟಗಾರರನ್ನು ತಂಡಕ್ಕೆ ಸೇರಿಕೊಳ್ಳಲು ನಿರ್ಧರಿಸಿತ್ತು. ಹೀಗಾಗಿ ಶಹ್ನವಾಜ್ ದಹಾನಿಯನ್ನು ಬದಲಿ ಆಟಗಾರನನ್ನಾಗಿ ಹೆಸರಿಸಿತ್ತು. ಆದರೆ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ತಂಡವನ್ನು ಕೂಡಿಕೊಳ್ಳಲು ಸಾಧ್ಯವಾಗದ ಕಾರಣ ತಡವಾಗಿ ಆಗಮಿಸಿದ್ದರು ಶಹ್ನವಾಜ್ ದಹಾನಿ.
ಇನ್ನು ಬದಲಿ ಆಟಗಾರನಾಗಿ ಪಾಕಿಸ್ತಾನ ತಂಡವನ್ನು ಸೇರಿಕೊಳ್ಳಲು ವೇಗದ ಬೌಲರ್ ಶಹ್ನವಾಜ್ ದಹಾನಿ ಶ್ರೀಲಂಕಾಗೆ ಆಗಮಿಸಿದ್ದರು. ಶುಕ್ರವಾರ ರಾತ್ರಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವಿನ ನಿರ್ಣಾಯಕ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿಯೇ ದಹಾನಿ ಶ್ರೀಲಂಕಾವನ್ನು ತಲುಪಿದ್ದರು. ಆದರೆ ದಹಾನಿ ಶ್ರೀಲಂಕಾಗೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯವನ್ನು ಸೋತು ಟೂರ್ನಿಯಿಂದ ಹೊರಬಿದ್ದಿತ್ತು.
ಶಹ್ನವಾಜ್ ದಹಾನಿ ಶ್ರೀಲಂಕಾಗೆ ಬಂದಿಳಿದಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿತ್ತು. ಆದರೆ ಆ ಪೋಸ್ಟ್ ಆದ 37 ನಿಮಿಷಗಳಲ್ಲಿ ಪಾಕಿಸ್ತಾನ ತಂಡ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಕ್ರಿಕೆಟ್ ಪಾಕಿಸ್ತಾನ ಹಂಚಿಕೊಂಡಿರುವ ಟ್ವೀಟ್ ಈಗ ನೆಟ್ಟಿಗರಿಗೆ ಆಹಾರವಾಗಿದ್ದು ಟ್ರೋಲ್ ಮಾಡಲಾಗುತ್ತಿದೆ.
ಮಳೆಯಿಂದ ಅಡಚಣೆಗೊಳಗಾದ ಪಂದ್ಯವನ್ನು 42 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 7 ವಿಕೆಟ್ ಕಳೆದುಕೊಂಡು 252 ರನ್ಗಳನ್ನು ಕಲೆಹಾಕಿತು. ಹೀಗಾಗಿ ಶ್ರೀಲಂಕಾ ಮುಂದೆ ಸವಾಲಿನ ಮೊತ್ತವನ್ನು ನಿಗದಿಪಡಿಸುವಲ್ಲಿ ಪಾಕಿಸ್ತಾನ ಪಡೆ ಯಶಸ್ವಿಯಾಗಿತ್ತು. ಆರಂಭದಲ್ಲಿ ಬ್ಯಾಟಿಂಗ್ನಲ್ಲಿ ಭಾತರೀ ಹಿನ್ನಡೆ ಅನುಭವಿಸಿದ್ದರೂ ಮೊಹಮ್ಮದ್ ರಿಜ್ವಾನ್ ಹಾಗೂ ಇಫ್ತಿಕಾರ್ ಅಹ್ಮದ್ ಅವರ ಅಮೋಘ ಆಟ ಪಾಕ್ ಬ್ಯಾಟಿಂಗ್ಗೆ ಭಾರೀ ದೊಡ್ಡ ಚೇತರಿಕೆ ನೀಡುವಲ್ಲಿ ಯಶಸ್ವಿಯಾಗಿತ್ತು.
ಇದನ್ನು ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಕುಸಾಲ್ ಮೆಂಡಿಸ್, ಸುದೀರ ಸಮರವಿಕ್ರಮ ಚರಿತ್ ಅಸಲಂಕಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಭರ್ಜರಿಯಾಗಿ ಗುರಿ ಬೆನ್ನಟ್ಟಲು ಕಾರಣವಾದರು. ಕುಸಾಲ್ ಮೆಂಡಿಸ್ 91 ರನ್ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರೆ ಸಮರವಿಕ್ರಮ 48 ರನ್ಗಳನ್ನು ಕಲೆಹಾಕಿದರು. ಈ ಜೋಡಿ ನೀಡಿದ 100 ರನ್ಗಳ ಜೊತೆಯಾಟ ಲಂಕಾ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಇನ್ನು ಚರಿತ ಅಸಲಂಕಾ ಕೊನೆಯವರೆಗೂ ನಿಂತು ತಂಡವನ್ನು ಗೆಲುವಿನ ದಡ ಸೇರಿಸಿದ್ದಲ್ಲದೆ ಶ್ರೀಲಂಕಾ ಫೈನಲ್ಗೆ ಪ್ರವೇಶಿಸಲು ಕಾರಣವಾದರು.