ಯುಜುವೇಂದ್ರ ಚಾಹಲ್ ಅವರ ಹೆಸರು ಏಷ್ಯಾಕಪ್ಗೆ ಆಯ್ಕೆ ಮಾಡಿರುವ ತಂಡದಲ್ಲಿ ಇಲ್ಲದಿರುವುದು ಬಹುತೇಕರಿಗೆ ಅಚ್ಚರಿಯುಂಟು ಮಾಡಿದೆ. ಅನುಭವಿ ಸ್ಪಿನ್ನರ್ ವೈಟ್ಬಾಲ್ ಮಾದರಿಯಲ್ಲಿ ಭಾರತ ತಂಡಕ್ಕೆ ಯಾವಾಗಲೂ ಬಲ ನೀಡಬಲ್ಲ ಕ್ರಿಕೆಟಿಗ. ಹಾಗಿದ್ದರೂ ಏಷ್ಯಾಕಪ್ನಲ್ಲಿ ಯಾವ ಕಾರಣಕ್ಕಾಗಿ ಚಾಹಲ್ಗೆ ಅವಕಾಶವಿಲ್ಲ ಎಂಬುದರ ಬಗ್ಗೆ ನಾಯಕ ರೋಹಿತ್ ಶರ್ಮಾ ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತ ಈ ಬಾರಿಯ ಏಷ್ಯಾಕಪ್ನ ಎಲ್ಲಾ ಪಂದ್ಯಗಳನ್ನು ಕೂಡ ಶ್ರೀಲಂಕಾದಲ್ಲಿ ಆಡಲಿದೆ. ಆದರೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಮಂಡಳಿ ಮೂವರು ಸ್ಪಿನ್ನರ್ಗಳನ್ನು ಮಾತ್ರವೇ ತಂಡದಲ್ಲಿ ಹೆಸರಿಸಿದ್ದಾರೆ. ಕುಲ್ದೀಪ್ ಯಾದವ್ ಮಾತ್ರವೇ ಪೂರ್ಣಕಾಲಿಕ ಸ್ಪಿನ್ನರ್ ಆಗಿದ್ದು ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಆಲ್ರೌಂಡರ್ಗಳಾಗಿ ತಂಡದಲ್ಲಿದ್ದಾರೆ.

2019ರ ವಿಶ್ವಕಪ್ನ ಅಂತ್ಯದ ಬಳಿಕ ಯುಜ್ವೇಂದ್ರ ಚಾಹಲ್ 23 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಸಮದರ್ಭದಲ್ಲಿ ಅವರು 3 ಬಾರಿ ನಾಲ್ಕು ವಿಕೆಟ್ಗಳ ಗೊಂಚಲು ಸೇರಿದಂತೆ 37 ವಿಕೆಟ್ಗಳನ್ನು ಪಡೆದಿದ್ದಾರೆ. ಆದರೆ ಕಳೆದ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಬೆಂಚ್ ಕಾದಿದ್ದು ಕುಲ್ದೀಪ್ ಯಾದವ್ ಅವಕಾಶ ಗಿಟ್ಟಿಸಿಕೊಂಡು ಮಿಂಚಿದ್ದರು. ಹೀಗಾಗಿ ಚಾಹಲ್ ಮೊದಲ ಆಯ್ಕೆಯ ಸ್ಪಿನ್ನರ್ ಅಲ್ಲ ಎನ್ನುವುದು ಬಹುತೇಕ ಖಾತ್ರಿಯಾಗಿತ್ತು.
ಇದೀಗ ತಂಡದ ಆಯ್ಕೆಯ ಬಗ್ಗೆ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ. "ನಾವು ಆಫ್ ಸ್ಪಿನ್ನರ್ ಬಗ್ಗೆ ಸಾಕಷ್ಟು ಚರ್ಚೆಗಳನ್ನು ನಡೆಸಿದೆವು. ಜೊತೆಗೆ ಲೆಗ್ ಸ್ಪಿನ್ನರ್ ಬಗ್ಗೆ ಕೂಡ. ಹೆಚ್ಚು ಹಿನ್ನಡೆಯುಂಟು ಮಾಡುವುದು ಎಲ್ಲಿ ಎಂದಾಗ 8 ಹಾಗೂ 9ನೇ ಕ್ರಮಾಂಕದಲ್ಲಿ. ಆ ಸ್ಥಾನದಲ್ಲಿ ಬ್ಯಾಟಿಂಗ್ ಕೂಡ ನಡೆಸಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರನನ್ನು ಬಯಸಿದ್ದೆವು. ಹಾಗಾಗಿ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಿದ್ದು ಅವರು ಈ ವರ್ಷ ವಯಟ್ಬಾಲ್ ಕ್ರಿಕೆಟ್ನಲ್ಲಿ ಬ್ಯಾಟಿಂಗ್ನಲ್ಲಿಯೂ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ" ಎಂದಿದ್ದಾರೆ ರೋಹಿತ್ ಶರ್ಮಾ.
"ನಾವು ಆಫ್ ಸ್ಪಿನ್ನರ್ ಬಗ್ಎಯೂ ಯೋಚಿಸಿದ್ದೆವು. ಆರ್ ಅಶ್ವಿನ್ ಅಥವಾ ವಾಶಿಂಗ್ಟನ್ ಸುಂದರ್. ಆದರೆ 17 ಆಟಗಾರರು ಮಾತ್ರವೇ ಸಾಧ್ಯವಿರುವ ಕಾರಣ ಚಾಹಲ್ ಹೊರಗುಳಿಯುವುದು ಅನಿವಾರ್ಯವಾಯಿತು. ಅವರು ತಂಡದೊಳಗೆ ಬರಲು ಒಂದೇ ದಾರಿಯೆಂದರೆ ಓರ್ವ ವೇಗಿ ಹೊರಗುಳಿಯಬೇಕಾಗಿತ್ತು. ಆದರೆ ನಾವು ಅದನ್ನು ಮಾಡಲು ಸಾಧ್ಯವಿಲ್ಲ ಯಾಕೆಂದರೆ ಮುಂದಿನ ಎರಡು ತಂಡಗಳ ಕಾಲ ಸಾಕಷ್ಟು ಕ್ರಿಕೆಟ್ ಇರುವ ಕಾರಣ ವೇಗಿಗಳ ಪಾತ್ರ ಮಹತ್ವದ್ದಾಗಿರಲಿದೆ. ಕೆಲ ಆಟಗಾರರು ಸುದೀರ್ಘ ಕಾಲದ ಬಳಿಕ ಆಡುತ್ತಿರುವ ಕಾರಣ ಅವರಿಗೆ ಉತ್ತಮ ಅವಕಾಶ ನೀಡಿ ಅವರಿಂದ ಬರುವ ಪ್ರದರ್ಶನವನ್ನು ಎದುರುನೋಡುತ್ತಿದ್ದೇವೆ" ಎಂದಿದ್ದಾರೆ ರೋಹಿತ್ ಶರ್ಮಾ.
ಇನ್ನು ಇದೇ ಸಂದರ್ಭದಲ್ಲಿ ರೋಹಿತ್ ಶರ್ಮಾ ವಿಶ್ವಕಪ್ ತಂಡದಲ್ಲಿ ಬದಲಾವಣೆಗೆ ಇನ್ನೂ ಅವಕಾಶವಿದೆ ಎನ್ನುವುದನ್ನು ಒತ್ತಿ ಹೇಳಿದ್ದಾರೆ. ಏಷ್ಯಾಕಪ್ನಲ್ಲಿ ನೀಡುವ ಪ್ರದರ್ಶನಗಳನ್ನು ಆಧರಿಸಿ ಮುಂದೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ ರೋಹಿತ್ ಶರ್ಮಾ.
"ಈ ಹಂತದಲ್ಲಿ ಯಾರಿಗೂ ಕೂಡ ಅವಕಾಶ ಮುಚ್ಚಿಲ್ಲ. ಯಾರು ಯಾವಾಗ ಬೇಕಾದರೂ ಅವಕಾಶ ಗಿಟ್ಟಿಸಿಕೊಳ್ಳಬಹುದು. ಚಾಹಲ್ ಸಾಕಷ್ಟು ವೈಟ್ ಬಾಲ್ ಕ್ರಿಕೆಟ್ ಆಡಿರುವ ಆಟಗಾರ. ವಿಶ್ವಕಪ್ಗೆ ಅವರ ಅಗತ್ಯ ನಮಗಿದೆ ಎಂದು ಅನಿಸಿದರೆ ಅವರನ್ನು ತಂಡದೊಳಗೆ ಸೇರಿಸಿಕೊಳ್ಳುವ ಪ್ರಯತ್ನ ನಡೆಸುತ್ತೇವೆ. ಇದು ಅಶ್ವಿನ್ ಹಾಗೂ ವಾಶಿಂಗ್ಟನ್ ಸುಂದರ್ ವಿಚಾರದಲ್ಲಿಯೂ ಆಗುತ್ತದೆ" ಎಂದಿದ್ದಾರೆ ರೋಹಿತ್ ಶರ್ಮಾ.