ಭಾರತ ಈ ಬಾರಿ ಏಷ್ಯಾ ಕಪ್ ಟಿ20 ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಭಾನುವಾರ ದುಬೈ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಭಾರತ 5 ವಿಕೆಟ್ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ, ದಾಖಲೆಯ 9ನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿ ಸಂಭ್ರಮಿಸಿದೆ. ಈ ಮೂಲಕ ಟೀಮ್ ಇಂಡಿಯಾ ಸರಣಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಸೂರ್ಯ ಪಡೆಯ ಸಂಘಟಿತ ಆಟಕ್ಕೆ ಈ ಗೆಲುವು ದಕ್ಕಿದೆ. ಈ ಭರ್ಜರಿ ಗೆಲುವು ಟೀಮ್ ಇಂಡಿಯಾ ಅಭಿಮಾನಿಗಳಿಗೆ ಅಪಾರ ಖುಷಿ ನೀಡಿದೆ.
ದುಬೈನಲ್ಲಿ ಪಾಕಿಸ್ತಾನ ತಂಡವನ್ನು ರೋಚಕ ಪಂದ್ಯದಲ್ಲಿ ಮಣಿಸಿದ ಸೂರ್ಯ ಪಡೆ ಚಾಂಪಿಯನ್ ಪಟ್ಟವನ್ನು ಅಲಂಕರಿಸುತ್ತಿದ್ದಂತೆ, ಇತ್ತ ದೇಶದ ಎಲ್ಲೆಡೆ ಅಭಿಮಾನಿಗಳು ರಸ್ತೆಗಿಳಿದು ಸಂಭ್ರಮಿಸಿದರು. ಟೀಮ್ ಇಂಡಿಯಾದ ವಿಜೇತ ಆಟಗಾರರು ಮಂಗಳವಾರ ಬೆಳಗಿನ ಜಾವ ತಾಯ್ನಾಡಿಗೆ ಮರಳಿದ್ದಾರೆ. ಈ ವೇಳೆ ಟೀಮ್ ಇಂಡಿಯಾ ಆಟಗಾರರನ್ನು ಕಣ್ಣು ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ನೆರದಿದ್ದರು. ಅಲ್ಲದೆ ಚಾಂಪಿಯನ್ ಆಟಗಾರರಿಗೆ ಹೃದಯ ಸ್ಪರ್ಷಿ ಸ್ವಾಗತವನ್ನು ನೀಡಿದರು.

ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ ಸ್ಟಾರ್ ಆಟಗಾರ ತಿಲಕ್ ವರ್ಮಾ ಅವರನ್ನು ಕಣ್ಣು ತುಂಬಿಕೊಳ್ಳಲು ಹೈದರಾಬಾದ್ನಲ್ಲಿ ಅಭಿಮಾನಿಗಳ ದಂಡೇ ನೆರೆದಿತ್ತು. ಈ ಪಂದ್ಯದಲ್ಲಿ ತಿಲಕ್ ವರ್ಮಾ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ 53 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 69 ರನ್ ಸಿಡಿಸಿ ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.
ಚಾಂಪಿಯನ್ ಪ್ಲೇಯರ್ ತಿಲಕ್ ವರ್ಮಾ ಹೈದರಾಬಾದ್ಗೆ ಬರುತ್ತಿದ್ದಂತೆ ಏರ್ಪೋರ್ಟ್ನಲ್ಲಿ ಕಿಕ್ಕಿರಿದ ಅಭಿಮಾನಿಗಳು ಅವರನ್ನು ಸ್ವಾಗತಿಸಿದರು. ಇವರನ್ನು ಬರಮಾಡಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳ ದಂಡೇ ಏರ್ಪೋರ್ಟ್ಗೆ ಆಗಮಿಸಿತ್ತು. ಅಭಿಮಾನಿಗಳಿಗೆ ತಿಲಕ್ ತಮ್ಮ ಕಾರಿನ್ ಸನ್ರೂಫ್ ಮೂಲಕ ಹೊರ ಬಂದು ಕೈ ಮಾಡಿ ಖುಷಿ ಪಟ್ಟರು. ಇವರು ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದಿದ್ದರು.
ಎಸಿಸಿ ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷರೂ ಆಗಿರುವ ಮೊಹ್ಸಿನ್ ನಖ್ವಿ ಅವರಿಂದ ಏಷ್ಯಾ ಕಪ್ ಟಿ20 ಟ್ರೋಫಿಯನ್ನು ಪಡೆಯಲು ಟೀಮ್ ಇಂಡಿಯಾ ನಿರಾಕರಿಸಿತು. ಇದೇ ವೇಳೆ ಗಂಟೆಗಟ್ಟಲೆ ಕಾಯ್ದ ನಖ್ವಿ ಪಾಕ್ ಆಟಗಾರರಿಗೆ ಬಹುಮಾನ ನೀಡಿ ವೇದಿಕೆಯಿಂದ ಇಳಿದರು. ಬಳಿಕ ಟೀಮ್ ಇಂಡಿಯಾ ಆಟಗಾರರು ಕಪ್ ಇಲ್ಲದೇ ಸಂಭ್ರಮಾಚರಣೆ ನಡೆಸಿದರು.