ಏಷ್ಯಾಕಪ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದೆ. ಚಾಂಪಿಯನ್ ಪಟ್ಟವನ್ನು ಅಲಂಕರಿಸುವವರು ಯಾರು ಎನ್ನುವ ಪ್ರಶ್ನೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಉತ್ತರ ದೊರೆಯಲಿದೆ. ಈ ಪ್ರಮುಖ ಪಂದ್ಯದಲ್ಲಿ ಎರಡು ತಂಡಗಳು ಕೂಡ ಬಲಿಷ್ಠವಾದ ಆಡುವ ಬಳಗದೊಂದಿಗೆ ಕಣಕ್ಕಿಳಿಯುತ್ತಿದೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ವಾಶಿಂಗ್ಟನ್ ಸುಂದರ್ ಸ್ಥಾನ ಗಿಟ್ಟಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.
ಶನಿವಾರದವರೆಗೂ ವಾಶಿಂಗ್ಟನ್ ಸುಂದರ್ ಏಷ್ಯಾಕಪ್ ಟೂರ್ನಿಯ ಚಿತ್ರಣದಲ್ಲಿಯೇ ಇರಲಿಲ್ಲ. ಏಷ್ಯಾಕಪ್ ಟೂರ್ನಿಯ ಸ್ಕ್ವಾಡ್ಲ್ಲಿಯೇ ಇಲ್ಲದ ಕಾರಣ ಭಾರತಲ್ಲಿಯೇ ಇದ್ದ ಸುಂದರ್ಗೆ ಶನಿವಾರ ಟೀಮ್ ಇಂಡಿಯಾದ ಕರೆ ಬಂದ ಬಳಿಕ ಶ್ರೀಲಂಕಾಗೆ ಹಾರಿದ್ದು ಭಾರತ ತಂಡವನ್ನು ಸೇರಿಕೊಂಡಿದ್ದರು. ಇದೀಗ ಶ್ರೀಲಂಕಾ ವಿರುದಧ ಆಡುತ್ತಿರುವ ಫೈನಲ್ ಪಂದ್ಯದ ಆಡುವ ಬಳಗದಲ್ಲಿಯೂ ಸುಂದರ್ ಅವಕಾಶ ಪಡೆದುಕೊಂಡಿದ್ದಾರೆ.

ಶುಕ್ರವಾರ ನಡೆದ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಟಗಾರ ಅಕ್ಷರ್ ಪಟೇಲ್ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಅಕ್ಷರ್ ಅಲಭ್ಯವಾಗುವುದು ಖಚಿತವಾಗಿತ್ತು. ಹೀಗಾಗಿ ಅಕ್ಷರ್ ಪಟೇಲ್ ಬದಲಿಗೆ ಮತ್ತೋರ್ವ ಆಲ್ರೌಂಡರ್ ವಾಶೀಂಗ್ಟನ್ ಸುಂದರ್ಗೆ ಅವಕಾಶ ದೊರತಿದೆ.
ವಾಶಿಂಗ್ಟನ್ ಸುಂದರ್ ವೃತ್ತಿ ಜೀವನದ ಆರಂಭದಲ್ಲಿಯೇ ಅದ್ಭುತ ಪ್ರದರ್ಶನ ನೀಡುವ ಮೂಲಕ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದರು. ಆದರೆ ಆಗಾಗ ಅವರಿಗೆ ಗಾಯದ ಸಮಸ್ಯೆಗಳು ಕಾಡುತ್ತಿರುವುದು ಅವರಿಗೆ ಹಿನ್ನಡೆಯುಂಟು ಮಾಡಿದೆ. ಇತ್ತೀಚೆಗೆ ಕಳೆದ ಐಪಿಎಲ್ ಟೂರ್ನಿಯಲ್ಲಿಯೂ ಅವರು ಹ್ಯಾಮ್ಸ್ಟ್ರಿಂಜ್ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರಗುಳಿಯಬೇಕಾಯಿತು. ಇದೀಗ ಮತ್ತೆ ಸಜ್ಜಾಗಿ ಟೀಮ್ ಇಂಡಿಯಾ ಪರವಾಗಿ ಕಣಕ್ಕಿಳಿದಿದ್ದಾರೆ.
ಇನ್ನು ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಟೀಮ್ ಇಂಡಿಯಾ ಆರಂಭದಲ್ಲಿ ಬೌಲಿಂಗ್ ದಾಳಿ ನಡೆಸುವ ಸವಾಲು ಪಡೆದುಕೊಂಡಿದೆ. ಇನ್ನು ಟೀಮ್ ಇಂಡಿಯಾದಲ್ಲಿ ವಾಶಿಂಗ್ಟನ್ ಸುಂದರ್ ಆಡುವ ಬಳಗಕ್ಕೆ ಸೇರ್ಪಡೆಯ ಜೊತೆಗೆ ಕಳೆದ ಪಂದ್ಯದಲ್ಲಿ ಹೊರಗೂಳಿದಿದ್ದ ಎಲ್ಲಾ ಸ್ಟಾರ್ ಆಟಗಾರರು ಕೂಡ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ.
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್
ಬೆಂಚ್: ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾ
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಗೆ, ದುಶನ್ ಹೇಮಂತ, ಪ್ರಮೋದ್ ಮದುಶನ್, ಮತೀಶ ಪತಿರಣ
ಬೆಂಚ್: ಕಸುನ್ ರಜಿತಾ, ಬಿನೂರ ಫೆರ್ನಾಂಡೋ, ದಿಮುತ್ ಕರುಣಾರತ್ನೆ, ಸಹನ್ ಅರಚ್ಚಿಗೆ