ದುಬೈನಲ್ಲಿ ಸೆಪ್ಟಂಬರ್ 28 ರಂದು ಏಷ್ಯಾ ಕಪ್ ಟಿ20 ಟೂರ್ನಿಯ ಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್ಗಳಿಂದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಪಂದ್ಯ ಮುಗಿದು ಇಲ್ಲಿಗೆ ಸುಮಾರು ಒಂದು ತಿಂಗಳು ಕಳೆದಿವೆ. ಆದರೆ ಇನ್ನು ವರೆಗೂ ಚಾಂಪಿಯನ್ ಟೀಮ್ ಇಂಡಿಯಾದ ಕೈಗೆ ಏಷ್ಯಾ ಕಪ್ ಟ್ರೋಫಿ ಸಿಕ್ಕಿಲ್ಲ. ಈ ಬಗ್ಗೆ ಬಿಸಿಸಿಐ ಸಹ ಕಾನೂನು ಹೋರಾಟವನ್ನು ನಡೆಸುವ ಸೂಚನೆ ನೀಡಿದೆ.
ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ತಂಡಗಳು ಮೂರು ಬಾರಿ ಮುಖಾಮುಖಿ ಆದವು. ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾದ ಬಳಿಕ ಇದೇ ಮೊದಲ ಬಾರಿಗೆ ಉಭಯ ತಂಡಗಳು ಕಾದಾಟವನ್ನು ನಡೆಸಿದವು. ಹೀಗಾಗಿ ಟೀಮ ಇಂಡಿಯಾ, ಪಾಕ್ ವಿರುದ್ಧ ಆಡಬೇಕೋ, ಬೇಡವೋ ಎಂಬ ಚರ್ಚೆಗಳೇ ನಡೆದವು. ಇದರ ನಡುವೆಯೂ ಭಾರತ ಹಾಗೂ ಪಾಕ್ ತಂಡಗಳು ಕಾದಾಟ ನಡೆಸಿದವು. ಆದರೆ ಭಾರತ ಪಂದ್ಯದ ಟಾಸ್ ವೇಳೆ ಹಾಗೂ ಪಂದ್ಯದ ಬಳಿಕ ಹ್ಯಾಂಡ್ ಶೇಕ್ ಮಾಡಲಿಲ್ಲ.

ಏಷ್ಯಾ ಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಬಳಿಕ ಭಾರತ, ಪ್ರಶಸ್ತಿ ಸಮಾರೋಪ ಸಮಾರಂಭವನ್ನು ಬಹಿಷ್ಕರಿಸಿತ್ತು. ಪಿಸಿಬಿ ಹಾಗೂ ಎಸಿಸಿ ಚೇರ್ಮನ್ ಇದ್ದ ಮೊಹ್ಸಿನ್ ನಖ್ವಿ ಅವರಿದ್ದ ವೇದಿಕೆಯನ್ನು ಭಾರತ ಏರುವುದಿಲ್ಲ. ಅಲ್ಲದೆ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿತ್ತು. ಇದಾದ ಬಳಿಕ ನಖ್ವಿ ಅವರು ಟ್ರೋಫಿಯನ್ನು ಪಾಕ್ಗೆ ತೆಗೆದುಕೊಂಡು ಹೋದರು.
ನಖ್ವಿ ಟ್ರೋಫಿಯನ್ನು ಪಾಕ್ಗೆ ತೆಗೆದುಕೊಂಡು ಹೋಗಿದ್ದು ವಿವಾದ ಸೃಷ್ಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ನಖ್ವಿ ಟ್ರೋಫಿಯನ್ನು ತಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕಟ್ಟದಲ್ಲಿ ಇಟ್ಟಿದ್ದರು. ಆದರೆ ಈಗ ಬರುತ್ತಿರುವ ಸುದ್ದಿ ನಿಜಕ್ಕೂ ಮೊಹ್ಸಿನ್ ನಖ್ವಿ ಅವರು ಮತ್ತೊಮ್ಮೆ ತಮ್ಮ ಕೆಟ್ಟ ಬುದ್ಧಿಯನ್ನು ಪ್ರದರ್ಶಿಸಿದ್ದಾರೆ.
ಮೊಹ್ಸಿನ್ ನಖ್ವಿ ಅವರು ಏಷ್ಯಾ ಕಪ್ ಟ್ರೋಫಿಯನ್ನು ಎಸಿಸಿ ಪ್ರಧಾನ ಕಚೇರಿಯಿಂದ ತೆಗೆದು ಅಬುಧಾಬಿಯ ಅಜ್ಞಾತ ಸ್ಥಳದಲ್ಲಿ ಮರೆಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಈಗ ಕೆಲ ದಿನಗಳ ಹಿಂದೆ ಟ್ರೋಫಿಯ ಬಗ್ಗೆ ವಿಚಾರಿಸಿದಾಗ, ಟ್ರೋಫಿಯನ್ನು ಮೊಹ್ಸಿನ್ ನಖ್ವಿ ಅವರು ಅಜ್ಞಾತ ಸ್ಥಳದಲ್ಲಿ ಇಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಬಿಸಿಸಿಐ ಏಷ್ಯಾ ಕಪ್ ಟ್ರೋಫಿಯನ್ನು ತಮಗೆ ನೀಡುವಂತೆ ಈ ಹಿಂದೆ ಎಸಿಸಿಗೆ ಇ-ಮೇಲ್ ಮಾಡಿತ್ತು. ಆದರೆ ಇದಕ್ಕೆ ಉತ್ತರ ಸಿಗದ ಹಿನ್ನೆಲೆಯಲ್ಲಿ ಬಿಸಿಸಿಐ ಈ ವಿಷಯವನ್ನು ಐಸಿಸಿ ಸಭೆಯಲ್ಲಿ ಪ್ರಸ್ತಾಪಿಸಲು ಚಿಂತನೆ ನಡೆಸಿದೆ. ಅಲ್ಲದೆ ಕಾನೂನು ಹೋರಾಟದ ಎಚ್ಚರಿಕೆಯನ್ನು ಸಹ ನೀಡಿದೆ. ಟ್ರೋಫಿ ಗೆದ್ದು ಇಷ್ಟು ದಿನಗಳಾದರೂ ಭಾರತದ ಕೈಗೆ ಇನ್ನು ಟ್ರೋಫಿ ಸಿಗದಕ್ಕೆ ಅಭಿಮಾನಿಗಳು ಸಹ ಬೇಸರಗೊಂಡಿದ್ದಾರೆ.