ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಹಲವು ವಿವಾದಗಳನ್ನು ಹುಟ್ಟು ಹಾಕಿದೆ. ಏಷ್ಯಾ ಕಪ್ನಲ್ಲಿ ಉಭಯ ತಂಡಗಳು ಮೈದಾನ ಪ್ರವೇಶಿಸಿದ್ದಾಗ ಹ್ಯಾಂಡ್ ಶೇಕ್ ಮಾಡದೇ ಇರುವುದು, ಹಾಗೂ ಏಷ್ಯಾ ಕಪ್ ಗೆದ್ದ ಬಳಿಕ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿದ್ದ ವೇದಿಕೆಯನ್ನು ನಾವು ಏರುವುದಿಲ್ಲ ಎಂದು ಭಾರತ ಬಹಿಷ್ಕರಿಸಿತ್ತು. ಈ ಎರಡು ಘಟನೆಗಳು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈಗ ಈ ಎಲ್ಲದರ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ಅಥರ್ಟನ್ ತಮ್ಮ ಅಭಿಪ್ರಾಯವನ್ನು ಲೇಖನದಲ್ಲಿ ತಿಳಿಸಿದ್ದಾರೆ.
ಭಾರತ ಹಾಗೂ ಪಾಕ್ ನಡುವಣ ಪಂದ್ಯಗಳು ಸಾಕಷ್ಟು ವಿವಾದವನ್ನು ಸೃಷ್ಟಿಸಿವೆ ಎಂದು ಮೈಕೆಲ್ ಅಥರ್ಟನ್ ಅಭಿಪ್ರಾಯ ಪಟ್ಟಿದ್ದಾರೆ. ಎರಡೂ ತಂಡಗಳು ಮೈದಾನಕ್ಕೆ ಇಳಿದಾಗಲೆಲ್ಲಾ ಅಭಿಮಾನಿಗಳ ನಡುವೆ ಘರ್ಷಣೆ ಸಂಭವಿಸುತ್ತದೆ. ಈ ಘಟನೆಗಳು ವಿಶ್ವದಲ್ಲೇ ಭಾರೀ ಚರ್ಚೆಗೆ ಕಾರಣವಾಗಿದ್ದವು. ಹೀಗಾಗಿ ಎರಡೂ ದೇಶಗಳ ಬಗ್ಗೆ ಟೀಕೆಗಳು ಸಹ ಕೇಳಿ ಬಂದಿತ್ತು. ಹೀಗಾಗಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಗಳನ್ನು ನಡೆಸುವುದನ್ನು ಮರು ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.

ಉಭಯ ದೇಶಗಳ ನಡುವಣ ಸಂಬಂಧ ಹದಗೆಟ್ಟಿದ್ದರಿಂದಾಗಿ ಈ ಸಮಸ್ಯೆ ಉದ್ಭವಿಸಿದೆ. ಇದರಿಂದಾಗಿಯೇ ಆಟಗಾರರು ಹ್ಯಾಂಡ್ ಶೇಕ್ ಮಾಡದೇ ಇರುವುದು. ಪ್ರಚೋದನಕಾರಿ ಸನ್ನೆಗಳನ್ನು ಮಾಡುವುದು, ಸಮಾರೋಪ ಸಮಾರಂಭವನ್ನು ಬಹಿಷ್ಕರಿಸುವುದು ಈ ಎಲ್ಲ ಘಟನೆಗಳು ನಡೆದಿವೆ. ಕ್ರಿಕೆಟ್ ರಾಜತಾಂತ್ರಿಕತೆಗೆ ಮಾರ್ಗವಲ್ಲ. ಆದರೆ ಉದ್ವಿಗ್ನತೆಗಳಿಗೆ ಮಾರ್ಗವಾಗಿದೆ ಎಂದು ಅಥರ್ಟನ್ ಬರೆದಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಗಳನ್ನು ನಿಗದಿಪಡಿಸಲು ಆರ್ಥಿಕ ಹಾಗೂ ರಾಜತಾಂತ್ರಿಕ ಕಾರಣಗಳು ಇರಬಹುದು. ಆದರೆ ಈ ಪದ್ಧತಿಯನ್ನು ಕೊನೆಗೊಳಿಸಬೇಕಿದೆ. ಉದ್ದೇಶಪೂರ್ವಕವಾಗಿ ಅಂತಹ ಪಂದ್ಯಗಳನ್ನು ಏರ್ಪಡಿಸುವುದು ಸರಿಯಲ್ಲ ಎಂದು ಇಂಗ್ಲೆಂಡ್ ಮಾಜಿ ನಾಯಕ ಅಭಿಪ್ರಾಯ ಪಟ್ಟಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಇದೇ ಮೊದಲ ಬಾರಿಗೆ ಉಭಯ ತಂಡಗಳು ಮೈದಾನದಲ್ಲಿ ಮುಖಾಮುಖಿ ಆಗಿದ್ದವು. ಸೆ.14 ರಂದು ನಡೆದ ಪಂದ್ಯದಲ್ಲಿ ಆಟಗಾರರ ಪ್ರದರ್ಶನಕ್ಕಿಂತ ಹೆಚ್ಚಾಗಿ ಹ್ಯಾಂಡ್ ಶೇಕ್ ಮಾಡದೇ ಇರುವುದೇ ದೊಡ್ಡ ವಿವಾದವಾಯಿತು. ಸೂಪರ್ 4 ಹಂತದ ಪಂದ್ಯದಲ್ಲಿ ಹ್ಯಾರೀಸ್ ರೌಫ್, ಫಹೀಮ್ ಅಶ್ರಫ್ ಮತ್ತ ಸಾಹಿಬ್ಜಾದಾ ಫರ್ಹಾನ್ ಚೋದನಕಾರಿ ಸನ್ನೆಗಳನ್ನು ಪ್ರದರ್ಶಿಸಿದರು.
ಇನ್ನು ಉಭಯ ತಂಡಗಳ ನಡುವೆಯೇ ಏಷ್ಯಾ ಕಪ್ ಟಿ20 ಟೂರ್ನಿಯ ಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಭಾರತ ಗೆದ್ದು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ವೇಳೆ ಪಿಸಿಬಿ ಹಾಗೂ ಎಸಿಸಿ ಅಧ್ಯಕ್ಷರೂ ಆಗಿರುವ ಮೊಹ್ಸಿನ್ ನಖ್ವಿ ಟ್ರೋಫಿ ನೀಡಲು ವೇದಿಕೆಗೆ ಬಂದಿದ್ದರು. ಆದರೆ ಭಾರತೀಯ ಆಟಗಾರರು ಅವರು ಇದ್ದ ವೇದಿಕೆಯ ಮೇಲೆ ನಾವು ಹೋಗುವುದಿಲ್ಲ. ಹಾಗೂ ಅವರಿಂದ ಟ್ರೋಫಿ ಸ್ವೀಕರಿಸುವುದಿಲ್ಲ ಎಂದು ಘೋಷಿಸಿದರು. ಆ ಬಳಿಕ ಟ್ರೋಫಿಯನ್ನು ನಖ್ವಿ ತಮ್ಮಂದಿಗೆ ತೆಗೆದುಕೊಂಡು ಹೋದರು. ಇದು ವಿವಾದವಾಯಿತು.