
ಕ್ಯಾನ್ಬೆರಾ: ಭಾರತದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರ ಮ್ಯಾಜಿಕ್ ಬೌಲಿಂಗ್ನಿಂದಾಗಿ ಕ್ಯಾನ್ಬೆರಾದಲ್ಲಿ ಶುಕ್ರವಾರ (ಡಿಸೆಂಬರ್ 4) ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ 11 ರನ್ ಜಯ ದಾಖಲಿಸಿದೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ನ (ಐಸಿಸಿ) ಹೊಸ ಕನ್ಕಶನ್ ಸಬ್ಸ್ಟಿಟ್ಯೂಟ್ ನಿಯಮವೂ ಭಾರತದ ಗೆಲುವಿಗೆ ಕಾರಣವಾಗಿದೆ.
ಕ್ಯಾನ್ಬೆರಾದ ಮನುಕಾ ಓವಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ, ಕೆಎಲ್ ರಾಹುಲ್ 51, ವಿರಾಟ್ ಕೊಹ್ಲಿ 9, ಸಂಜು ಸ್ಯಾಮ್ಸನ್ 23, ಹಾರ್ದಿಕ್ ಪಾಂಡ್ಯ 16, ರವೀಂದ್ರ ಜಡೇಜಾ 44 (23 ಎಸೆತ) ರನ್ನೊಂದಿಗೆ 20 ಓವರ್ಗೆ 7 ವಿಕೆಟ್ ಕಳೆದು 161 ರನ್ ಗಳಿಸಿತ್ತು.
ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಡಿ ಆರ್ಸಿ ಶಾರ್ಟ್ 34, ಆ್ಯರನ್ ಫಿಂಚ್ 35, ಸ್ಟೀವ್ ಸ್ಮಿತ್ 12, ಮೋಯ್ಸಸ್ ಹೆನ್ರಿಕ್ಸ್ 30, ಸೀನ್ ಬಟಾಟ್ 12, ಮಿಚೆಲ್ ಸ್ವೆಪ್ಸನ್ 12 ರನ್ನೊಂದಿಗೆ 20 ಓವರ್ಗೆ7 ವಿಕೆಟ್ ಕಳೆದು 150 ರನ್ ಬಾರಿಸಿ ಶರಣಾಯಿತು. ಭಾರತದ ಇನ್ನಿಂಗ್ಸ್ನಲ್ಲಿ ಗಾಯಗೊಂಡ ಜಡೇಜಾ ಅವರನ್ನು ಬದಲಿಸಿ ಚಾಹಲ್ ಅವರನ್ನು ಮೈದಾನಕ್ಕಿಳಿಸಿದ್ದು ಪಂದ್ಯದ ತಿರುವಿಗೆ ಕಾರಣವಾಯ್ತು.
ಭಾರತದ ಇನ್ನಿಂಗ್ಸ್ನ ಕೊನೇ ಕ್ಷಣದಲ್ಲಿ ರವೀಂದ್ರ ಜಡೇಜಾ ತಲೆಗೆ ಚೆಂಡು ಬಡಿದು ಗಾಯಗೊಂಡಿದ್ದರಿಂದ ಆಸ್ಟ್ರೇಲಿಯಾ ಇನ್ನಿಂಗ್ಸ್ನಲ್ಲಿ ಕನ್ಕಶನ್ ಸಬ್ಸ್ಟಿಟ್ಯೂಟ್ ನಿಯಮದ ಪ್ರಕಾರ ಚಾಹಲ್ ಅವರನ್ನು ಮೈದಾನಕ್ಕಿಳಿಸಲಾಗಿತ್ತು. ಚಾಹಲ್ 25 ರನ್ಗೆ 3 ವಿಕೆಟ್ ಪಡೆದರು. ವೇಗಿ ಟಿ ನಟರಾಜನ್ಗೂ 3 ವಿಕೆಟ್ ಲಭಿಸಿತು. ಚಾಹಲ್ ಪಂದ್ಯಶ್ರೇಷ್ಠರೆನಿಸಿದರು.