ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ಪಾರಮ್ಯ ಅಧ್ಯಾಯ ಮುಗಿಯಿತೇ?

ಬೆಂಗಳೂರು, ಜೂನ್ 20: ಹ್ಯಾಟ್ರಿಕ್ ಗೆಲುವು ಸೇರಿದಂತೆ ಒಟ್ಟು ಐದು ಏಕದಿನ ವಿಶ್ವಕಪ್ ಟ್ರೋಫಿಗಳನ್ನು ಗೆದ್ದು ಪಾರಮ್ಯ ಮೆರೆದಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮನೋಸ್ಥೈರ್ಯ ಕುಸಿದಿದೆಯೇ?
ಚೆಂಡು ವಿರೂಪ ಪ್ರಕರಣದ ಅವಮಾನದ ಬಳಿಕದ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪ್ರದರ್ಶನ ಈ ಅನುಮಾನ ಬಲಗೊಳ್ಳಲು ಕಾರಣವಾಗುತ್ತಿದೆ.
ಒಂದು ಕಾಲದಲ್ಲಿ ಅತ್ಯಂತ ಪ್ರತಿಭಾವಂತ ಆಟಗಾರರ ಜತೆ ಎದುರಾಳಿಗಳಲ್ಲಿ ನಡುಕ ಹುಟ್ಟಿಸುವ ಆಕ್ರಮಣಕಾರಿ ಮನೋಭಾವ ಹೊಂದಿದ್ದ ಆಸ್ಟ್ರೇಲಿಯಾ ತಂಡ ಸತತ ಸೋಲುಗಳ ನಡುವೆ ಕಂಗೆಟ್ಟಿದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಸೋತು ಸುಣ್ಣವಾಗಿದೆ. ಅಲ್ಲದೆ, ಮಂಗಳವಾರ ನಡೆದ ಪಂದ್ಯದಲ್ಲಿ 50 ಓವರ್ಗಳಲ್ಲಿ 481 ರನ್ ಬಿಟ್ಟುಕೊಡುವ ಮೂಲಕ ತನ್ನದು ತೀರಾ ದುರ್ಬಲ ಬೌಲಿಂಗ್ ಪಡೆ ಎಂಬುದನ್ನು ತೋರಿಸಿಕೊಟ್ಟಿದೆ.

ಆಟಗಾರರಲ್ಲಿ ಸ್ಥಿರತೆಯ ಕೊರತೆ
ಈಗಲೂ ತಂಡದಲ್ಲಿ ಉತ್ತಮ ಪ್ರತಿಭಾವಂತ ಆಟಗಾರರಿಗೇನೂ ಕೊರತೆಯಿಲ್ಲ. ಆದರೆ, ಅವರ ಆಟದಲ್ಲಿ ಸ್ಥಿರತೆ ಕಾಣಿಸುತ್ತಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಆಸ್ಟ್ರೇಲಿಯಾದ ಆಟಗಾರರಲ್ಲಿದ್ದ ಗತ್ತು, ಗರ್ವ, ಎದುರಾಳಿಗಳನ್ನು ಹೆಣೆಯಲು ಒಂದೆಡೆ ಬಿರುಸಿನ ದಾಳಿ, ಇನ್ನೊಂದೆಡೆ ಮಾತಿನ ದಾಳಿ ನಡೆಸುವ ವರ್ತನೆಗಳು ಈಗ ಕಾಣಿಸುತ್ತಿಲ್ಲ.
ಆರಂಭಿಕ ಆಟಗಾರರಿಂದ ಹಿಡಿದು ಪ್ರಮುಖ ಬೌಲರ್ಗಳವರೆಗೂ ಯಾರಲ್ಲೂ ಸ್ಥಿರ ಪ್ರದರ್ಶನ ಕಂಡುಬರುತ್ತಿಲ್ಲ. ಯಾವ ಆಟಗಾರರೂ ತಂಡದಲ್ಲಿ ಉಳಿದುಕೊಳ್ಳುತ್ತಿಲ್ಲ. ಪದೇ ಪದೇ ತಂಡ ಬದಲಾಗುತ್ತಿದೆ. ಬೌಲರ್ ಮಿಚೆಲ್ ಸ್ಟಾರ್ಕ್ ಸದಾ ಗಾಯದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ಮಾನಸಿಕ ಆಘಾತ
ಭಾರತದಂತಹ ತಂಡಗಳು ಉತ್ತಮ ಆಟ ಪ್ರದರ್ಶಿಸುವ ಜತೆಗೆ ಮೈದಾನದಲ್ಲಿ ಆಸ್ಟ್ರೇಲಿಯಾ ಆಟಗಾರರ ಕುಹಕಕ್ಕೆ ತಿರುಗೇಟು ನೀಡಲು ಆರಂಭಿಸಿದಾಗ ಎದುರಾಳಿಗಳು ಕೊಂಚ ತಣ್ಣಗಾಗತೊಡಗಿದರು. ಅಲ್ಲದೆ, ಈ ವೇಳೆ ರಿಕಿ ಪಾಂಟಿಂಗ್, ಆಂಡ್ರೂ ಸೈಮಂಡ್ಸ್, ಮ್ಯಾಥ್ಯೂ ಹೇಡನ್ ಮುಂತಾದ ದೈತ್ಯರು ಕ್ರಿಕೆಟ್ ಜಗತ್ತಿನಿಂದ ದೂರವಾದರು.
ಅವರ ನಂತರ ಬಂದ ಕ್ರಿಕೆಟಿಗರಲ್ಲಿ ಆಟದಲ್ಲಿ ಆಕ್ರಮಣಶೀಲತೆ ಇದ್ದರೂ ಮೈದಾನದಲ್ಲಿನ ವರ್ತನೆ ಕೊಂಚ ಕಡಿವಾಣ ಬಿದ್ದಿತ್ತು.
ಆಸ್ಟ್ರೇಲಿಯಾ ತಂಡವನ್ನು ಮುಖ್ಯವಾಗಿ ಬಾಧಿಸುತ್ತಿರುವುದು ಗಾಯದ ಸಮಸ್ಯೆ ಅಥವಾ ಪ್ರತಿಭಾವಂತ ಆಟಗಾರರ ಕೊರತೆಯಲ್ಲ. ಬದಲಾಗಿ ತಂಡದ ಆಟಗಾರರಿನ್ನೂ ಮಾನಸಿಕ ಆಘಾತದಿಂದ ಹೊರಬಂದಿಲ್ಲ.

ಚೆಂಡು ವಿರೂಪ ಪ್ರಕರಣದ ಹೊಡೆತ
ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಮತ್ತು ಹೊಸ ಆಟಗಾರ ಬ್ಯಾಂಕ್ರಾಫ್ಟ್ ದಕ್ಷಿಣ ಆಫ್ರಿಕಾದ ವಿರುದ್ಧದ ಟೆಸ್ಟ್ ಸರಣಿ ವೇಳೆ ಚೆಂಡನ್ನು ವಿರೂಪಗೊಳಿಸಿ ಸಿಕ್ಕಿಬಿದ್ದ ಪ್ರಕರಣ, ಇಡೀ ಆಸ್ಟ್ರೇಲಿಯಾ ಜಗತ್ತಿನೆದುರು ತಲೆ ತಗ್ಗಿಸುವಂತೆ ಮಾಡಿತ್ತು.
ಇಷ್ಟು ವರ್ಷ ಆಸ್ಟ್ರೇಲಿಯಾ ತನ್ನ ಆಟದ ಮೂಲಕ ಪಡೆದುಕೊಂಡ ಗಳಿಸಿದ ಗೌರವ, ಘನತೆಯನ್ನು ರಾತ್ರಿ ಬೆಳಗಾಗುವುದರೊಳಗೆ ಕಳೆದುಕೊಂಡಿತ್ತು.
ಈ ಮೂವರು ಆಟಗಾರರು ನಿಷೇಧಕ್ಕೆ ಒಳಗಾಗಿದ್ದು, ಕೋಚ್ ಡೆರೆನ್ ಲೆಹ್ಮನ್ ಸ್ಥಾನದಿಂದ ಕೆಳಕ್ಕಿಳಿಯುವಂತೆ ಆಗಿದ್ದು ತಂಡದ ಮೇಲೆ ತೀವ್ರ ಪರಿಣಾಮ ಬೀರಿದೆ.

ಸತತ ಸೋಲಿನ ಬರೆ
ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 4-0ಯಲ್ಲಿ ಗೆದ್ದ ಬಳಿಕ ಆಸ್ಟ್ರೇಲಿಯಾ ಸತತವಾಗಿ ಸೋಲುಗಳನ್ನು ಕಾಣುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಂತೂ ಹೀನಾಯ ಸೋಲು ಅನುಭವಿಸಿತ್ತು.
ಅದರ ನಡುವೆಯೇ ಚೆಂಡು ವಿರೂಪ ಪ್ರಕರಣ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಈಗ ಆ ಗಾಯ ಮತ್ತು ಬರೆಯ ನೋವಿಗೆ ಮತ್ತಷ್ಟು ಉಪ್ಪು ಸವರಿದಂತೆ ಸೋಲಿನ ನೋವು ತಂಡವನ್ನು ಕಾಡುತ್ತಿದೆ.
2007ರ ವಿಶ್ವಕಪ್ ಬಳಿಕ ಆಸ್ಟ್ರೇಲಿಯಾ ತಂಡದ ಪಾರಮ್ಯ ನಿಧಾನವಾಗಿ ಕಡಿಮೆಯಾಗತೊಡಗಿತ್ತು. ಆದರೆ, ಕೆಲವೊಂದು ಸರಣಿಗಳಲ್ಲಿ ತಂಡ ಮತ್ತೆ ತನ್ನ ಹಿಂದಿನ ಸಾಮರ್ಥ್ಯ ಪ್ರದರ್ಶಿಸುತ್ತಿತ್ತು.
2015ರ ಏಕದಿನ ವಿಶ್ವಕಪ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದು ತಂಡ ಮತ್ತೆ ಪ್ರಾಬಲ್ಯ ಸಾಧಿಸಿತು ಎಂಬ ಅಭಿಪ್ರಾಯ ಮೂಡಿಸಿತ್ತು. ಆದರೆ, ಬಳಿಕ ಸತತ ಏರಿಳಿತಗಳನ್ನು ತಂಡ ಎದುರಿಸಿದೆ. ಆದರೆ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧದ ಸೋಲುಗಳು ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದ ಅತಿ ಹೀನಾಯ ಸೋಲುಗಳೆಂದು ಪರಿಗಣಿಸಲಾಗಿದೆ.

ರಾಂಕಿಂಗ್ನಲ್ಲಿ ಕುಸಿತ
ಏಕದಿನ ಪಂದ್ಯಗಳಲ್ಲಿ ಭಾರಿ ಅಂತರದ ಸೋಲುಗಳಿಂದ ತತ್ತರಿಸಿರುವ ಆಸ್ಟ್ರೇಲಿಯಾ ತಂಡ 34 ವರ್ಷದಲ್ಲಿಯೇ ಐಸಿಸಿ ರಾಂಕಿಂಗ್ನಲ್ಲಿ ಕೆಳಮಟ್ಟದ ಸ್ಥಾನಕ್ಕೆ ಇಳಿದಿದೆ. 6 ನೇ ಸ್ಥಾನಕ್ಕೆ ಕುಸಿದಿರುವ ತಂಡ, 1984ರಲ್ಲಿ ಹಿಂದೆ ಒಮ್ಮೆ ಈ ಸ್ಥಾನ ಪಡೆದಿತ್ತು.
ಸ್ಟೀವ್ ಸ್ಮಿತ್ ಅವರಿಂದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ಟಿಮ್ ಪೈನ್ ಅವರಿಗೆ ತಂಡವನ್ನು ಮತ್ತೆ ಅಷ್ಟು ಶಕ್ತಿಯುತವಾಗಿ ಕಟ್ಟಿ ಮುನ್ನಡೆಸಲು ಸಾಧ್ಯವಾಗಿಲ್ಲ.

ಮತ್ತೆ ಪುಟಿದೇಳಬಹುದು
ಆದರೆ, ಆಸ್ಟ್ರೇಲಿಯಾ ತಂಡದಲ್ಲಿ ಅತ್ಯುತ್ತಮ ಆಟಗಾರರಿದ್ದಾರೆ. ತಂಡದಲ್ಲಿ ಸ್ಥಿರತೆ ಮೂಡಿದರೆ ಯಾವ ತಂಡವನ್ನಾದರೂ ಸುಲಭವಾಗಿ ಮಣಿಸುವ ಸಾಮರ್ಥ್ಯವಿದೆ.
ನಿಷೇಧ ಪೂರ್ಣಗೊಂಡ ಬಳಿಕ ತಂಡವನ್ನು ಮರಳಿ ಸೇರಿಕೊಳ್ಳಲಿರುವ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ತಮ್ಮ ಹಳೆಯ ಕೌಶಲವನ್ನು ಪುನರಾವರ್ತಿಸಿ ಉಳಿದ ಆಟಗಾರರಲ್ಲಿ ಹುರುಪು ತುಂಬಿದರೆ ಆಸ್ಟ್ರೇಲಿಯಾದ ಪ್ರಾಬಲ್ಯ ಮರಳುವುದರಲ್ಲಿ ಅನುಮಾನವಿಲ್ಲ.
ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ತಂಡಗಳು ವಿಶ್ವ ಕ್ರಿಕೆಟ್ನಲ್ಲಿ ಹೆಚ್ಚು ಶಕ್ತಿಯುತವಾಗಿವೆ. ಇವುಗಳು ಇದೇ ರೀತಿಯ ಗುಣಮಟ್ಟದ ಆಟವನ್ನು ಮುಂದುವರಿಸಿದರೆ ಆಸ್ಟ್ರೇಲಿಯಾ ಇನ್ನಷ್ಟು ವರ್ಷ ಹೀಗೆಯೇ ಸೋಲುಗಳ ಹೊಡೆತಕ್ಕೆ ತುತ್ತಾಗಬೇಕಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications