
ಟಿ20 ವಿಶ್ವಕಪ್ ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಾಗಿದ್ದು ಟೂರ್ನಿಯಲ್ಲಿ ಮೇಲುಗೈ ಸಾಧಿಸಿದೆ. ಇದೀಗ ಭಾರತ ತನ್ನ ಮುಂದಿನ ಪಂದ್ಯವನ್ನು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಆಡಲಿದ್ದು ಭಾನುವಾರ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯದ ಮೇಲೆ ಈಗ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ.
ಈ ಕುತೂಹಲಕಾರಿ ಪಂದ್ಯಕ್ಕೂ ಮುನ್ನ ಭಾರತ ತಂಡದ ಆಲ್ರೌಂಡರ್ ಅಕ್ಷರ್ ಪಟೇಲ್ ಪ್ರತಿಕ್ರಿಯೆ ನೀಡಿದ್ದು ದಕ್ಷಿಣ ಆಫ್ರಿಕಾ ತಂಡಕ್ಕೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ಕಗಿಸೋ ರಬಡಾ, ಅನ್ರಿಕ್ ನಾರ್ಕಿಯಾ ಅವರಂತಾ ಬೌಲರ್ಗಳು ಇದ್ದರೆ ಭಾರತ ತಂಡದಲ್ಲಿ ಫಾರ್ಮ್ಗೆ ಮರಳಿರುವ ವಿರಾಟ್ ಕೊಹ್ಲಿ ಇದ್ದಾರೆ ಎಂದಿದ್ದಾರೆ ಅಕ್ಷರ್ ಪಟೇಲ್. ಈ ಮೂಲಕ ಅಕ್ಷರ್ ಎದುರಾಳಿ ದಕ್ಷಿಣ ಆಫ್ರಿಕಾಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ನೆದರ್ಲೆಂಡ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಮೂವರು ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಭರ್ಜರಿ ಅರ್ಧ ಶತಕ ಬಾರಿಸಿ ಮಿಂಚಿದ್ದರು. ಬಳಿಕ ಬೌಲರ್ಗಳು ಕೂಈಡ ಅದ್ಭುತ ಪ್ರದರ್ಶನ ನೀಡಿದ ಪರಿಣಾಮವಾಗಿ ಟೀಮ್ ಇಂಡಿಯಾ ಈ ಪಂದ್ಯವನ್ನು 56 ರನ್ಗಳ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.
ಈ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಅಕ್ಷರ್ ಪಟೇಲ್ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯ ಅತ್ಯಂತ ಮಹತ್ವದ ಪಂದ್ಯವಾಗಿದೆ ಎಂದಿದ್ದಾರೆ. "ನಾವು ಈ ಪಂದ್ಯಕ್ಕೆ ಯೋಜನೆಗಳನ್ನು ಸಿದ್ಧಪಡಿಸಲಿದ್ದೇವೆ. ಬೌನ್ಸಿ ಪಿಚ್ಗಳ ಬಗ್ಗೆ ಆತಂಕ ಪಡದೆ, ಅವರಲ್ಲಿ ಕಗಿಸೋ ರಬಾಡಾ, ಅನ್ರಿಕ್ ನಾರ್ಕಿಯಾ ಅವರಂತಾ ವೇಗಿಗಳು ಇರುವ ಹೊರತಾಗಿಯೂ ನಾವು ಸಹಜ ಆಟದ ಶೈಲಿಯಲ್ಲಿ ಆಟವನ್ನಾಡಲಿದ್ದೇವೆ. ಯಾಕೆಂದರೆ ನಮ್ಮಲ್ಲಿ ಫಾರ್ಮ್ಗೆ ಬಂದಿರುವ ವಿರಾಟ್ ಕೊಹ್ಲಿ ಇದ್ದಾರೆ" ಎಂದು ಆತ್ಮವಿಶ್ವಾಸಿದಂದ ಅಕ್ಷರ್ ಪಟೇಲ್ ಹೇಳಿಕೆ ನೀಡಿದ್ದಾರೆ.
ಇನ್ನು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 180 ರನ್ಗಳ ಸವಾಲಿನ ಗುರಿಯನ್ನು ನೆದರ್ಲೆಂಡ್ಸ್ ತಂಡಕ್ಕೆ ನೀಡಿತ್ತು. ಇದನ್ನು ಬೆನ್ನಟ್ಟಿದ ಡಚ್ ಪಡೆ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 123 ರನ್ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಭಾರತ ತಂಡ 56 ರನ್ಗಳ ಬೃಹತ್ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿದ್ದು ವಿಶ್ವಕಪ್ನಲ್ಲಿ ಸತತ ಎರಡನೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೂ ಮುನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ರೋಚಕವಾಗಿ ಮಣಿಸಿತ್ತು.
ಇಂಗ್ಲೆಂಡ್ ವಿರುದ್ಧದ ಗೆಲುವು ರೋಮಾಂಚನಕಾರಿ ಅನುಭವ ಎಂದ ಐರ್ಲೆಂಡ್ ನಾಯಕ
ಇತ್ತಂಡಗಳ ಆಡುವ ಬಳಗ
ಭಾರತ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಶ್ದೀಪ್ ಸಿಂಗ್
ನೆದರ್ಲ್ಯಾಂಡ್ಸ್: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಬಾಸ್ ಡಿ ಲೀಡ್, ಕಾಲಿನ್ ಅಕರ್ಮನ್, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್ (ನಾಯಕ/ವಿಕೆಟ್ ಕೀಪರ್), ಟಿಮ್ ಪ್ರಿಂಗಲ್, ಲೋಗನ್ ವ್ಯಾನ್ ಬೀಕ್, ಶರೀಜ್ ಅಹ್ಮದ್, ಫ್ರೆಡ್ ಕ್ಲಾಸೆನ್, ಪಾಲ್ ವ್ಯಾನ್ ಮೀಕೆರೆನ್