ಆರ್ಸಿಬಿ ತಂಡ ಸತತ ಎರಡನೇ ಬಾರಿಗೆ ಎಂ ಚಿನಸ್ವಾಮಿ ಅಂಗಳದಲ್ಲಿ ಸೋಲುವು ಹಂತದಲ್ಲಿದ್ದ ಪಂದ್ಯವನ್ನು ಗೆದ್ದಿದೆ. ಅಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಜೋಶ್ ಹ್ಯಾಜಲ್ವುಡ್ 19ನೇ ಓವರ್ನಲ್ಲಿ ಮ್ಯಾಜಿಕ್ ಮಾಡಿದರೆ, ಶನಿವಾರ 20ನೇ ಓವರ್ನಲ್ಲಿ ಯಶ್ ದಯಾಳ್ ಮ್ಯಾಜಿಕ್ ಮಾಡಿದ್ದಾರೆ. ಕೊನೆಯ ಓವರ್ನಲ್ಲಿ ಯಶ್ 15 ರನ್ ಡಿಫೆಂಡ್ ಮಾಡಿಕೊಳ್ಳುವ ಮೂಲಕ ಪಂದ್ಯದ ಹೀರೋ ಆದರು.
ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಆರ್ಸಿಬಿ ಮೊದಲು ಬ್ಯಾಟ್ ಮಾಡಿತು. ಈ ವೇಳೆ ಆರ್ಸಿಬಿ ಪರ ಆರಂಭಿಕರಾದ ಜಾಕಬ್ ಬೇತೆಲ್ (55) ಹಾಗೂ ವಿರಾಟ್ ಕೊಹ್ಲಿ (62) ಉತ್ತಮ ಕಾಣಿಕೆ ನೀಡಿದರು. ಇನ್ನು ಡೆತ್ ಓವರ್ಗಳಲ್ಲಂತೂ ರೊಮಾರಿಯೋ ಶೆಫರ್ಡ್ ಧಮಾಕೆ ಮಾಡಿದ್ರು. ಇವರು ಕೇವಲ 14 ಎಸೆತಗಳಲ್ಲಿ 53 ರನ್ ಸಿಡಿಸಿದರು. ಒಂದು ವೇಳೆ ಆರ್ಸಿಬಿ ದೊಡ್ಡ ಮಾರ್ಜಿನ್ನಿಂದ ಜಯ ಸಾಧಿಸಿದ್ದರೆ, ಇದುವೇ ಗೆಲುವಿನ ಟರ್ನಿಂಗ್ ಪಾಯಿಂಟ್ ಆಗುತ್ತಿತ್ತು. ಆದರೆ ಈಗ 2 ರನ್ ಗೆದ್ದ ಬಳಿಕ ಟರ್ನಿಂಗ್ ಪಾಯಿಂಟ್ ಬೆರೆಯದ್ದೇ ಇದೆ.

ಗುರಿಯನ್ನು ಬೆನ್ನಟ್ಟಿದ ಚೆನ್ನೈ ಪವರ್ ಪ್ಲೇನಲ್ಲಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆಗೆ ಮೂರನೇ ವಿಕೆಟ್ಗೆ ರವೀಂದ್ರ ಜಡೇಜಾ ಹಾಗೂ ಆರಂಭಿಕ ಆಯುಷ್ ಮಾತ್ರೆ ಅಮೋಘ ಜೊತೆಯಾಟದ ಕಾಣಿಕೆ ನೀಡಿ ಗೆಲುವಿನ ಆಸೆಯನ್ನು ಚಿಗುರಿಸಿದರು. ಆದರೆ ಮಾತ್ರೆ 16.2 ಓವರ್ಗಳಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಡೇವಲ್ಡ್ ಬ್ರೇವಿಸ್ ಮೊದಲ ಎಸೆತದಲ್ಲಿ ಔಟ್ ಆದ್ರು. ಆದರೆ ಡಿಆರ್ಎಸ್ ತೆಗೆದುಕೊಳ್ಳಲು ಕೊಂಚ ಹೆಚ್ಚಿನ ಸಮಯವನ್ನು ತೆಗೆದುಕೊಂಡಿದ್ದರಿಂದ, ಇವರನ್ನು ಫೀಲ್ಡ್ ಅಂಪೈರ್ ಮೈದಾನದ ಹೊರಗೆ ಕಳಿಸಿದರು.
ಇನ್ನು ಮಹೇಂದ್ರ ಸಿಂಗ್ ಧೋನಿ ಯಶ್ ದಯಾಳ್ ಅವರಿಗೆ ಕೊನೆಯ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಸಾಮಾನ್ಯವಾಗಿ ಆರ್ಸಿಬಿ ಗೆಲುವಿನ ಆಸೆ ಚಿಗುರಿದ್ದೇ ಆಗ. ಆದರೆ ಅಸಲಿಗೆ ಪಂದ್ಯದ ಚಿತ್ರಣವನ್ನೇ ಬುಡಮೇಲು ಮಾಡಿದ್ದೇ ಆ ಯುವ ಆಟಗಾರನ ವಿಕೆಟ್. ಆಯುಷ್ ಮಾತ್ರೆ ನಿಜಕ್ಕೂ ಮೈಚಳಿ ಬಿಟ್ಟು ಬ್ಯಾಟ್ ಮಾಡ್ತಾ ಇದ್ದರು. ಇವರ ಅಮೋಘ ಇನಿಂಗ್ಸ್ನಲ್ಲಿ 9 ಬೌಂಡರಿ, 5 ಸಿಕ್ಸರ್ಗಳು ಸೇರಿವೆ. ಇವರು 48 ಎಸೆತಗಳಲ್ಲಿ 94 ರನ್ ಬಾರಿಸಿ ಔಟ್ ಆದರು. ಇವರ ಬಿರುಸಿನ ಬ್ಯಾಟಿಂಗ್ ನೋಡಿದ್ದ ಆರ್ಸಿಬಿ ಅಭಿಮಾನಿಗಳು ಡವ ಡವ ಆರಂಭವಾಗಿತ್ತು.
ಆರ್ಸಿಬಿ ತಂಡದ ಅನುಭವಿ ಬೌಲರ್ಗಳನ್ನು ಟಾರ್ಗೆಟ್ ಮಾಡಿದ ಇವರು ಬೌಂಡರಿ, ಸಿಕ್ಸರ್ಗಳ ಸುರಿಮಳೆ ಗೈದರು. ಅಗತ್ಯ ರನ್ ರೇಟ್ ಕಲೆ ಹಾಕುತ್ತಲೇ ಸಾಗಿದ ಇವರು, ಸಿಎಸ್ಕೆ ಪಾಳಯದಲ್ಲಿ ಮಂದಹಾಸ ಮೂಡಿಸಿದ್ದರು. ಆದರೆ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್ಗಿಡಿ ಎಸೆತದಲ್ಲಿ ಡಿಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಲು ಹೋಗಿ ಕೃನಾಲ್ ಪಾಂಡ್ಯಗೆ ಕ್ಯಾಚ್ ನೀಡಿದರು. ಚಿನ್ನಸ್ವಾಮಿ ಅಂಗಳದಲ್ಲಿ ಅಭಿಮಾನಿಗಳ ಖುಷಿ ಮುಗಿಲು ಮುಟ್ಟಿತ್ತು. ನಿಜಕ್ಕೂ ಆರ್ಸಿಬಿ ಪಂದ್ಯವನ್ನು ಗೆಲ್ಲುವಲ್ಲಿ ಈ ವಿಕೆಟ್ ದೊಡ್ಡ ಕೊಡುಗೆ ನೀಡಿದೆ.