ಬೆಂಗಳೂರು, ಆಗಸ್ಟ್ 3: ಉತ್ತಮ ಸ್ಲಿಪ್ ಫೀಲ್ಡರ್ಸ್ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ಭಾರತ ತಂಡದಲ್ಲಿ ಸ್ಲಿಪ್ ಫೀಲ್ಡರ್ ಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡುವ ಅಗತ್ಯವಿದೆ ಎಂದು ಹೇಳಿದರು.
ಇಂಗ್ಲೆಂಡ್ ಎದುರು ಕುಸಿದಿದ್ದ ಭಾರತಕ್ಕೆ ಕೊಹ್ಲಿ ಭರ್ಜರಿ ಶತಕದ ಆಸರೆ
ಬೆಂಗಳೂರಿನಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಅಂಗವಾಗಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತ, 'ಆಟದಲ್ಲಿ ಸ್ಲಿಪ್ ಫೀಲ್ಡಿಂಗ್ ಪ್ರಭಾವ ಬೀರಬಲ್ಲ ಪ್ರಮುಖ ಅಂಶ. ಹಾಗಾಗಿ ಈಗಿರುವ ಆಟಗಾರರಲ್ಲಿ ಉತ್ತಮ ಸ್ಲಿಪ್ ಫೀಲ್ಡರ್ ಗಳನ್ನು ಗುರುತಿಸಿ ಅವರಿಗೆ ಇನ್ನಷ್ಟು ತರಬೇತಿ ನೀಡಬೇಕಿದೆ' ಎಂದು ಅಜರುದ್ದೀನ್ ಅಭಿಪ್ರಾಯಪಟ್ಟರು.
'ಸ್ಲಿಪ್ ಫೀಲ್ಡಿಂಗ್ ಆಟಗಾರರನ್ನು ಖಂಡಿತ ಭಾರತ ಹೆಕ್ಕಿ ತೆಗೆಯಬೇಕಿದೆ. ಅವರನ್ನು ಸ್ಲಿಪ್ ಫೀಲ್ಡಿಂಗ್ ನತ್ತ ತಯಾರುಗೊಳಿಸಬೇಕಿದೆ. ಸ್ಲಿಪ್ ಫೀಲ್ಡಿಂಗ್ ಸುಲಭವಲ್ಲ. ಸರಿಯಾದ ಜಾಗದಲ್ಲಿ ನಿಂತು ಏಕಾಗ್ರತೆಯಿಂದ ಅವಕಾಶಕ್ಕಾಗಿ ಕಾಯುತ್ತಿರಬೇಕಾಗುತ್ತದೆ. ಬಹಳಷ್ಟು ಹೊತ್ತೂ ಕಾಯಬೇಕಾಗಿ ಬರಬಹುದು' ಎಂದು ಅವರು ತಿಳಿಸಿದರು.
ಸ್ಲಿಪ್ ಕೌಶಲವನ್ನು ವಿವರಿಸುತ್ತ 55ರ ಹರೆಯದ ಅಜರುದ್ದೀನ್, 'ಸ್ಲಿಪ್ ಪೊಸಿಷನ್ ನಲ್ಲಿ ನಿಂತಿರುವ ಆಟಗಾರರು ಸಂದರ್ಭಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಬೇಕಾದ ಅಗತ್ಯವಿರುತ್ತದೆ. ಹಾಗಾಗಿ ಕೊಂಚ ಬಾಗಿ ನಿಂತರೆ ಲೋ ಮತ್ತು ಹೈ ಎರಡೂ ಕ್ಯಾಚ್ ಗಳನ್ನು ಪಡೆಯಬಹುದು' ಎಂದರು.
ಅಜರುದ್ದೀನ್ ಬರೀ 26 ಪಂದ್ಯಗಳಲ್ಲಿ 108 ಕ್ಯಾಚ್ ಗಳ ದಾಖಲೆ ಹೊಂದಿದ್ದಾರೆ. ಉಳಿದಂತೆ ರಾಹುಲ್ ದ್ರಾವಿಡ್ 209, ವಿವಿಎಸ್ ಲಕ್ಷ್ಮಣ್ 135, ಸಚಿನ್ ತೆಂಡೂಲ್ಕರ್ 115 ಮತ್ತು ಸುನಿಲ್ ಗವಾಸ್ಕರ್ 108 ಕ್ಯಾಚ್ ಪಡೆದಿದ್ದಾರೆ.
'ಕ್ರಿಕೆಟ್ ಯಾವತ್ತಿಗೂ ಏಕಾಗ್ರತೆ ಮತ್ತು ಪರಿಶ್ರಮವನ್ನು ಬೇಡುತ್ತದೆ. ಪಂದ್ಯ ಗೆಲ್ಲಲು ಇದೇ ಜೀವಾಳ. ಸೋಲು-ಗೆಲುವು ಆಟದ ಭಾಗವೆ. ಆದರೆ ಗೆಲುವಿನ ಸಂಬಂಧಿಸಿ ಆಟಗಾರರ ಮನಸ್ಥಿತಿಯೂ ಪರಿಣಾಮಕಾರಿ. ಸಂದರ್ಭಕ್ಕೆ ತಕ್ಕಂತೆ ಆಟಗಾರ ಹೊಂದಾಣಿಕೆ ಮಾಡಿಕೊಂಡು ಆಡಬೇಕು' ಎಂದು ಕೆಪಿಎಲ್ ನಲ್ಲಿ ಬಿಜಾಪುರ್ ಬುಲ್ಸ್ ತಂಡದ ರಾಯಭಾರಿಯಾಗಿರುವ ಅಜರುದ್ದೀನ್ ತಿಳಿಸಿದರು.
ಬಿಜಾಪುರ್ ಬುಲ್ಸ್ ತಂಡದ ನಾಯಕ ಭರತ್ ಚಿಪ್ಲಿ ಸೇರಿದಂತೆ ಎಲ್ಲಾ ಆಟಗಾರರು, ತಂಡದ ಮಾಲಕ ಕಿರಣ್ ಕಟ್ಟಿಮನಿ, ತರಬೇತುದಾರ ದೀಪಕ್ ಚೌಗುಲೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.