ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ 1 ತಂಡವಾಗಿ ಎಷ್ಯಾಕಪ್ ಟೂರ್ನಿಗೆ ಕಣಕ್ಕಿಳಿದಿದ್ದ ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಫೈನಲ್ಗೆ ಪ್ರವೇಶಿಸಲು ವಿಫಲವಾಗಿ ಮುಖಭಂಗ ಅನುಭವಿಸಿದೆ. ಈ ಮೂಲಕ ವಿಶ್ವಕಪ್ನ ಸಿದ್ಧತೆಯಲ್ಲಿ ಪಾಕಿಸ್ತಾನ ತಂಡ ಭಾರೀ ದೊಡ್ಡ ಹಿನ್ನಡೆ ಕಂಡಂತಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ತಂಡಕ್ಕೆ ವಿಶ್ವಕಪ್ನಲ್ಲಿ ಮತ್ತೊಂದು ದೊಡ್ಡ ಆಘಾತ ಎದುರಾಗುವ ಸುಳಿವು ನೀಡಿದ್ದಾರೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ.
ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನದ ಪ್ರಮುಖ ಇಬ್ಬರು ವೇಗದ ಬೌಲರ್ಗಳು ಗಾಯದ ಕಾರಣದಿಂದಾಗಿ ಅಲಭ್ಯವಾಗಿದ್ದರು. ಈ ನಿರ್ಣಾಯಕ ಪಂದ್ಯಕ್ಕೆ ಪಾಕಿಸ್ತಾನ ಒಟ್ಟು ಐದು ಬದಲಾವಣೆಯೊಂದಿಗೆ ಕಣಕ್ಕಿಳಿದಿತ್ತು. ಅದರಲ್ಲಿ ವೇಗದ ಬೌಲರ್ಗಳಾದ ನಸೀಮ್ ಶಾ ಹಾಗೂ ಹ್ಯಾರಿಸ್ ರೌಫ್ ಕೂಡ ಇದ್ದು ಗಾಯದ ಕಾರಣದಿಂದಾಗಿ ಕೊನೆಯ ಪಂದ್ಯದಿಂದ ಹೊರಗುಳಿಯುವ ಅನಿವಾರ್ಯತೆಗೆ ಸಿಲುಕಿದ್ದರು. ಇದೀಗ ಈ ಇಬ್ಬರು ಆಟಗಾರರ ಫಿಟ್ನೆಸ್ ಬಗ್ಗೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಸುಳಿವು ನೀಡಿದ್ದಾರೆ.

ಹ್ಯಾರಿಸ್ ರೌಫ್ ಹಾಗೂ ನಸೀಮ್ ಶಾ ಇಬ್ಬರು ಕೂಡ ಭಾರತದ ವಿರುದ್ಧದ ಸೂಪರ್ 4 ಪಂದ್ಯದ ಸಂದರ್ಭದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಇವರಿಬ್ಬರು ಕೂಡ ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಿಂದ ಅನಿವಾರ್ಯವಾಗಿ ಹೊರಗುಳಿಯಬೇಕಾಯಿತು. ಇವರ ಪೈಕಿ ಹ್ಯಾರಿಸ್ ರೌಫ್ ಉತ್ತಮವಾಗಿ ಚೇತರಿಕೆ ಕಾಣುತ್ತಿದ್ದಾರೆ ಎಂದು ಬಾಬರ್ ಅಜಮ ಹೇಳಿಕೆ ನೀಡಿದ್ದಾರೆ. ಆದರೆ ನಸೀಮ್ ಶಾ ವಿಚಾರವಾಗಿ ಬಾಬರ್ ನೀಡಿರುವ ಸುಳಿವು ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಆಘಾತ ನೀಡುವಂತಿದೆ.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಬಾಬರ್ ಅಜಂ ತಂಡದ ಇಬ್ಬರು ವೇಗಿಗಳ ಚೇತರಿಕೆಯ ವಿಚಾರವಾಗಿ ಆಶಾವಾದ ವ್ಯಕ್ತಪಡಿಸಿದ್ದಾರೆ. ಆದರೆ ಪ್ಲ್ಯಾನ್ ಬಿ ಏನಿದೆ? ಎನ್ನುವ ಪ್ರಶ್ನೆಗೆ "ನಂತರ ಹೇಳುತ್ತೇನೆ" ಎಂದು ಹೇಳಿಕೆ ನೀಡಿದ್ದಾರೆ.
"ನಮ್ಮ ಪ್ಲ್ಯಾನ್ ಬಿ ಏನು ಎನ್ನುವುದನ್ನು ನಾನು ಈಗ ಬಿಟ್ಟುಕೊಡುವುದಿಲ್ಲ. ಆದರೆ ಖಂಡಿತವಾಗಿಯೂ ಹ್ಯಾರಿಸ್ ಚೇತರಿಕೆ ಕಾಣುತ್ತಿದ್ದಾರೆ. ಅವರ ಸಣ್ಣ ಪ್ರಮಾಣದ ನೋವಷ್ಟೇ ಇದೆ. ಆದರೆ ಅವರು ವಿಶ್ವಕಪ್ಗಿಂತ ಮುನ್ನ ಸಿದ್ಧವಾಗಲಿದ್ದಾರೆ. ನಸೀಮ್ ಶಾ ಕೂಡ.. ಅವರು ಕೆಲ ಪಂದ್ಯಗಳಿಂದ ಹೊರಗುಳಿಯಬೇಕಾಗಬಹುದು. ಎಷ್ಟು ಸಮಯ ತೆಗೆದುಕೊಳ್ಳಲಿದೆ ಎನ್ನುವುದು ಗೊತ್ತಿಲ್ಲ. ನನ್ನ ಅಭಿಪ್ರಾಯದ ಪ್ರಕಾರ ತಡವಾಗಿಯಾದರೂ ನಸೀಮ್ ಶಾ ವಿಶ್ವಕಪ್ ತಂಡದಲ್ಲಿ ಇರಲಿದ್ದಾರೆ. ಏನಾಗಲಿದೆ ಮುಂದೆ ನೋಡೋಣ.." ಎಂದಿದ್ದಾರೆ ಬಾಬರ್ ಅಜಂ
ಬಾಬರ್ ಅಜಂ ಅವರ ಈ ಹೇಳಿಕೆಯಿಂದಾಗಿ ಪಾಕ್ ಯುವ ವೇಗದ ಬೌಲರ್ ನಸೀಮ್ ಶಾ ವಿಶ್ವಕಪ್ನಲ್ಲಿ ಕಣಕ್ಕಿಳಿಯುವುದು ಸಂಪೂರ್ಣವಾಗಿ ಸ್ಪಷ್ಟವಿಲ್ಲ ಎನ್ನುವುದು ದೃಢವಾಗಿದೆ. ಇಂಥಾ ಗಾಯದ ಸಮಸ್ಯೆಯ ಮಧ್ಯೆ ಪಾಕಿಸ್ತಾನ ಯುವ ವೇಗಿಯನ್ನು ವಿಶ್ವಕಪ್ನಂಥಾ ಟೂರ್ನಿಗೆ ಕಳುಹಿಸಲಿದೆಯಾ ಎನ್ನುವುದು ಕೂಡ ಈಗಿನ ಪ್ರಶ್ನೆ. ಹೀಗಾಗಿ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಗೆ ಇದು ಭಾರೀ ನಿರಾಸೆ ಮಾಡುವುದು ನಿಶ್ಚಿತ.
ಏಷ್ಯಾಕಪ್ನಿಂದ ಹೊರಬಿದ್ದ ಪಾಕಿಸ್ತಾನ
ಇತ್ತ ಪಾಕಿಸ್ತಾನ ತಂಡ ಏಷ್ಯಾಕಪ್ ಟೂರ್ನಿಯಲ್ಲಿ ಸೂಪರ್ 4 ಹಂತದಿಂದ ಹೊರಬಿದ್ದಿದೆ. ಶ್ರೀಲಂಕಾ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಗೆಲುವು ಅಗತ್ಯವಾಗಿತ್ತು. ಗೆದ್ದರೆ ಮಾತ್ರವೇ ಫೈನಲ್ ಪ್ರವೇಶ ಸಾಧ್ಯವಿತ್ತು. ಆದರೆ ಈ ಸವಾಲಿನಲ್ಲಿ ಪಾಕಿಸ್ತಾನ ಸೋಲು ಕಂಡಿದ್ದು ರೋಚಕ ಸೆಣೆಸಾಟದಲ್ಲಿ ಕೊನೆಯ ಎಸೆತದಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ.