ಭಾನುವಾರ, ಸೆಪ್ಟೆಂಬರ್ 10ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು 2023ರ ಏಷ್ಯಾ ಕಪ್ ಪಂದ್ಯಾವಳಿಯ ರೋಚಕ ಸೂಪರ್ 4 ಪಂದ್ಯದಲ್ಲಿ ಸೆಣಡಾಲಿವೆ.
ಈ ಪಂದ್ಯಾವಳಿಯ ಗುಂಪು ಹಂತದ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ 267 ರನ್ಗಳ ಗುರಿಯನ್ನು ನೀಡಿತ್ತು. ಆದರೆ, ಮಳೆ ಬಂದ ಕಾರಣ ಪಾಕಿಸ್ತಾನ ಒಂದೇ ಎಸೆತವನ್ನು ಎದುರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂದ್ಯವನ್ನು ರದ್ದುಪಡಿಸಬೇಕಾಯಿತು. ಇದೀಗ ಮತ್ತೆ ಉಭಯ ತಂಡಗಳು ಹೈ-ವೋಲ್ಟೇಜ್ ಪಂದ್ಯದಲ್ಲಿ ಹೋರಾಡಲಿವೆ.

ಇನ್ನು ಏಷ್ಯಾ ಕಪ್ 2023ರ ಸೂಪರ್ 4 ಪಂದ್ಯದಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ಗಳ ಮೇಲೆ ಭಾರತದ ಬೌಲರ್ಗಳು ಒತ್ತಡವನ್ನು ಹಾಕಬೇಕೆಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ""ಪಾಕಿಸ್ತಾನದ ಅಗ್ರ ಕ್ರಮಾಂಕದ ಬ್ಯಾಟರ್ಗಳಾದ ಬಾಬರ್ ಅಜಂ, ಫಖರ್ ಜಮಾನ್ ಮತ್ತು ಇಮಾಮ್-ಉಲ್-ಹಕ್ ಮೇಲೆ ಒತ್ತಡ ಹೇರುವಂತೆ ಭಾರತೀಯ ಬೌಲಿಂಗ್ ಪಡೆಗೆ ಒತ್ತಾಯಿಸಿದರು.

"ಹೀಗಾಗಿ ನೀವು ಯಾರೊಬ್ಬರ ವಿರುದ್ಧ ಮೇಲುಗೈ ಸಾಧಿಸಿದ್ದರೆ, ಅದನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ವಿಶ್ವದ ನಂಬರ್ 1 ಬ್ಯಾಟರ್ ಬಾಬರ್ ಅಜಂ ಅವರು ಏಕದಿನ ಕ್ರಿಕೆಟ್ನಲ್ಲಿ ಭಾರತದ ವಿರುದ್ಧ ಈವರೆಗೆ ಒಂದೇ ಒಂದು ಅರ್ಧಶತಕವನ್ನು ಗಳಿಸಿಲ್ಲ. ಅವರ ಮೇಲೆ ಒತ್ತಡವನ್ನು ಕಾಪಾಡಿಕೊಳ್ಳಿ," ಎಂದು ಆಕಾಶ್ ಚೋಪ್ರಾ ಸಲಹೆ ನೀಡಿದರು.
"ಇಮಾಮ್-ಉಲ್-ಹಕ್ ಮೇಲೆ ಒತ್ತಡ ಹೇರಿ, ನೀವು ಅವರಿಗೆ ಆರಂಭದಲ್ಲೇ ಒತ್ತಡ ಹಾಕಿದರೆ, ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್ ಮತ್ತು ಅಘಾ ಸಲ್ಮಾನ್ ಅವರಂತಹವರು ಒತ್ತಡದಲ್ಲಿ ಕುಸಿಯಬಹುದು," ಎಂದು ಅಭಿಪ್ರಾಯಪಟ್ಟರು.

ಬಾಬರ್ ಅಜಂ ಈವರೆಗೆ ಭಾರತದ ವಿರುದ್ಧದ ಐದು ಏಕದಿನ ಇನ್ನಿಂಗ್ಸ್ಗಳಲ್ಲಿ 31.60ರ ಸರಾಸರಿಯಲ್ಲಿ 158 ರನ್ಗಳನ್ನು ಗಳಿಸಿದ್ದಾರೆ. 50-ಓವರ್ ಮಾದರಿಯಲ್ಲಿ ಅವರು ಒಂದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿರುವ ಎಲ್ಲಾ ತಂಡಗಳಲ್ಲಿ ಇದು ಅವರ ಕೆಟ್ಟ ಸರಾಸರಿಯಾಗಿದೆ.
ಪಾಕಿಸ್ತಾನ ತಂಡವು ಉತ್ತಮ ವೇಗದ ದಾಳಿಯನ್ನು ಹೊಂದಿದೆ ಎಂದು ಒಪ್ಪಿಕೊಂಡಿರುವ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಭಾರತೀಯ ವೇಗಿಗಳು ಕೆಲವು ಆರಂಭಿಕ ವಿಕೆಟ್ಗಳನ್ನು ಪಡೆಯಲು ಸಮರ್ಥರಾಗಿದ್ದಾರೆ ಎಂದು ಹೇಳಿದರು.
ಭಾನುವಾರದ ಪ್ರಮುಖ ಪಂದ್ಯಕ್ಕೆ ಮಳೆ ಅಡ್ಡಿಪಡಿಸದಿದ್ದರೆ, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಿಕಟ ಪೈಪೋಟಿಯನ್ನು ನಿರೀಕ್ಷೆ ಮಾಟಲಾಗಿದೆ. ಪಂದ್ಯವು ಮೀಸಲು ದಿನಕ್ಕೆ ಹೋಗುವುದಿಲ್ಲ ಎಂದು ಆಕಾಶ್ ಚೋಪ್ರಾ ಆಶಿಸಿದರು.
ಭಾರತ ಮತ್ತು ಪಾಕಿಸ್ತಾನ ಸೂಪರ್ 4 ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸುವ ಮೊದಲು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ತಿಳಿಸಿವೆ.
ಸೆಪ್ಟೆಂಬರ್ 17ರಂದು ನಡೆಯುವ ಫೈನಲ್ ಪಂದ್ಯದ ಹೊರತಾಗಿ, ಪಂದ್ಯಾವಳಿಯಲ್ಲಿ ಮೀಸಲು ದಿನವನ್ನು ಹೊಂದಿರುವ ಏಕೈಕ ಪಂದ್ಯ ಇದಾಗಿದೆ. ಇದನ್ನು ಬಹುಶಃ ಹಣಕಾಸಿನ ಕಾರಣಗಳಿಂದ ನಿಗದಿಪಡಿಸಲಾಗಿದೆ.