
ಸೂಪರ್ 12 ಹಂತದಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಅದ್ಭುತ ಹೋರಾಟ ಪ್ರದರ್ಶಿಸಿದ ಬಳಿಕ ಬಾಂಗ್ಲಾದೇಶ ತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಬಾಂಗ್ಲಾದೇಶದ ಕೋಚ್ ಶ್ರೀಧರನ್ ಶ್ರೀರಾಮ್ ಹೇಳಿದ್ದಾರೆ. ಭಾರತದ ವಿರುದ್ಧ ನಡೆದ ಪಂದ್ಯದಲ್ಲೊ ಲಿಟನ್ ದಾಸ್ ಅವರ ಅದ್ಭುತ ಬ್ಯಾಟಿಂಗ್ನ ಕಾರಣದಿಂದಾಗಿ ಬಾಂಗ್ಲಾದೇಶ ಪಂದ್ಯವನ್ನು ಗೆಲ್ಲುವ ಸನಿಹಕ್ಕೆ ಬಂದಿತ್ತಾದರೂ ಬಳಿಕ ಐದು ರನ್ಗಳ ಅಂತರದಿಂದ ಭಾರತಕ್ಕೆ ಶರಣಾಗಿತ್ತು.
ಭಾರತದ ಮಾಜಿ ಕ್ರಿಕೆಟಿಗರೂ ಆಗಿರುವ ಶ್ರೀರಾಮ್ ಟೀಮ್ ಇಂಡಿಯಾ ಪಡೆಯನ್ನು ಸೋಲಿಸಲು ಸಾಧ್ಯವಾಗದೆ ಬಾಂಗ್ಲಾದೇಶ ತಂಡ ಆಟಗಾರರು ಹತಾಶರಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಬಾಂಗ್ಲಾ ಆಟಗಾರರು ರೋಹಿತ್ ಶರ್ಮಾ ನೇತೃತ್ವದ ತಂಡದ ವಿರುದ್ಧ ನೀಡಿದ ಪ್ರದರ್ಶನದಿಂದಾಗಿ ಸಾಕಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಕೂಡ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಬಾಂಗ್ಲಾದೇಶ ಭಾನುವಾರ ಪಾಕಿಸ್ತಾನದ ವಿರುದ್ಧ ಸೆಣೆಸಾಡಲಿದ್ದು ಎರಡು ತಂಡಗಳಿಗೂ ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.
"ಭಾರತದ ವಿರುದ್ಧದ ಪಂದ್ಯದಲ್ಲಿ ಐದು ರನ್ಗಳ ಅಂತರದಿಂದ ಸೋಲು ಅನುಭವಿಸಿದ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲರೂ ನಿರಾಶೆಗೊಂಡಿದ್ದರು. ಭಾರತದ ವಿರುದ್ಧ ಗೆಲ್ಲುವ ಎಂತಾ ಅದ್ಭುತ ಅವಕಾಶವನ್ನು ಕಲೆದುಕೊಂಡಿರುವುದು ಎಲ್ಲರಿಗೂ ಅರಿವಾಗಿದೆ. ಆದರೆ ಇದು ಅವರಿಗೆ ಉತ್ತಮ ಕಲಿಕೆಯಾಗಿದೆ. ಅಲ್ಲದೆ ತಂಡಕ್ಕೆ ಸಾಕಷ್ಟು ಆತ್ಮ ವಿಶ್ವಾಸವನ್ನು ನೀಡಿದೆ. ಭಾರತದಂತಾ ತಂಡಕ್ಕೆ ಸವಾಲೊಡ್ಡವಹುದು ಎಂದಾದರೆ ಗೆಲುವಿನಿಂದ ನಾವು ಬಹಳ ದೂರವಿಲ್ಲ ಎಂದು ಭಾವಿಸುತ್ತೇವೆ" ಎಂದಿದ್ದಾರೆ ಶ್ರೀಧರನ್ ಶ್ರೀರಾಮ್.
ಇನ್ನು ವಿಶ್ವಕಪ್ಗೂ ಮುನ್ನ ಬಾಂಗ್ಲಾದೇಶ ತಂಡ ನ್ಯೂಜಿಲೆಂಡ್ ನೆಲದಲ್ಲಿ ನಡೆದ ತ್ರೊಕೋನ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಿತ್ತು. ಆದರೆ ಬಾಂಗ್ಲಾದೇಶ ಎರಡು ಪಂದ್ಯಗಳಲ್ಲಿಯೂ ಸೋಲು ಅನುಭವಿಸಿತ್ತು. ಹೀಗಾಗಿ ತ್ರಿಕೋನ ಸರಣಿಯಲ್ಲಿ ಫೈನಲ್ ಪ್ರವೇಶಕ್ಕೆ ವಿಫಲವಾಗಿತ್ತು.
"ಪಾಕಿಸ್ತಾನ ತಂಡಕ್ಕೆ ಸದ್ಯ ಯಾವೆಲ್ಲಾ ಸವಾಲುಗಳಿದೆ ಎಂಬುದು ನಮಗೆ ಅರಿವಿದೆ. ನ್ಯೂಜಿಲೆಂಡ್ ನೆಲದಲ್ಲಿ ನಾವು ಅವರ ವಿರುದ್ಧ ಆಡಿದ್ದೆವು. ಪಂದ್ಯದ ದಿನ ನಾವು ನ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಬೇಕಿದೆ. ಅವರು ಅತ್ಯುತ್ತಮವಾದ ಆಟಗಾರರ ಪಡೆಯನ್ನು ಹೊಂದಿದ್ದಾರೆ. ನ್ಯೂಜಿಲೆಂಡ್ನಲ್ಲಿ ನಡೆದ ಎರಡು ಪಂದ್ಯಗಳಲ್ಲಿಯೂ ಗೆಲುವಿಗೆ ನಮಗೆ ಉತ್ತಮ ಅವಕಾಶಗಳಿತ್ತು. ಎರಡು ತಮಡಗಳಿಗೂ ಪರಸ್ಪರ ಬಲಾಬಲಗಳ ಅರಿವಿದೆ. ಹೀಗಾಗಿ ಭಾನುವಾರದ ಪಂದ್ಯ ಸಾಕಷ್ಟು ಕುತೂಹಲಕಾರಿಯಾಗಿರಲಿದೆ" ಎಂದಿದ್ದಾರೆ ಶ್ರೀರಾಮ್.
ಪಾಕಿಸ್ತಾನ ಸಂಭಾವ್ಯ ಆಡುವ ಬಳಗ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ.
ಬಾಂಗ್ಲಾದೇಶ ಸಂಭಾವ್ಯ ಆಡುವ ಬಳಗ: ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಯಾಸಿರ್ ಅಲಿ, ಮೊಸದ್ದೆಕ್ ಹೊಸೈನ್, ನೂರುಲ್ ಹಸನ್ (ವಿಕೆಟ್ ಕೀಪರ್), ಮುಸ್ತಫಿಜುರ್ ರಹಮಾನ್, ಹಸನ್ ಮಹಮೂದ್, ತಸ್ಕಿನ್ ಅಹ್ಮದ್ ಮತ್ತು ಶೋರಿಫುಲ್ ಇಸ್ಲಾಂ