ಬಹು ನಿರೀಕ್ಷಿತ ಏಷ್ಯಾಕಪ್ ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆಯ್ಕೆ ಸಮಿತಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ದೃಷ್ಟಿಯಿಂದ ತಂಡದ ಆಯ್ಕೆ ಮಹತ್ವ ಪಡೆದುಕೊಂಡಿತ್ತು. ಏಷ್ಯಾ ಖಂಡದಲ್ಲೇ ಏಷ್ಯಾ ಕಪ್ ಪಂದ್ಯಗಳು ನಡೆಯುತ್ತಿದ್ದು, ಸ್ಪಿನ್ ಬೌಲರ್ ಗಳನ್ನು ಕಡೆಗಣನೆ ಮಾಡಲಾಗಿದೆ ಎಂಬ ಕೂಗು ಕೇಳಿ ಬಂದಿದೆ.
ನುರಿತ ಸ್ಪಿನ್ ಬೌಲರ್ ಆಗಿ ಕುಲ್ದೀಪ್ ಯಾದವ್ ಅವರಿಗೆ ಮಾತ್ರ ಮಣೆ ಹಾಕಲಾಗಿದೆ. ಉಳಿದಂತೆ ಆಲ್ರೌಂಡರ್ ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸೊಗಸಾದ ಪ್ರದರ್ಶನ ನೀಡಿ, ಏಕದಿನ ತಂಡಕ್ಕೆ ಕಮ್ ಬ್ಯಾಕ್ ಮಾಡುವ ಕನಸಿನಲ್ಲಿದ್ದ ಅನುಭವಿ ಸ್ಪಿನ್ ಬೌಲರ್ ಆರ್. ಅಶ್ವಿನ್ ಅವರನ್ನು ಕಡೆಗಣಿಸಲಾಗಿದೆ.

ಏಕದಿನ ವಿಶ್ವಕಪ್ ಗೆ ಸ್ಥಾನ ಪಡೆಯುವ ಅಶ್ವಿನ್ ಕನಸು ಕೊಂಚ ದೂರ ಸರಿದಂತೆ ಆಗಿದೆ. ಭಾರತದಲ್ಲೇ ಈ ಬಾರಿ ವಿಶ್ವಕಪ್ ನಡೆಯುತ್ತಿದ್ದು ಅಶ್ವಿನ್ ಅವರನ್ನು ಕಡೆಗಣನೆ ಮಾಡುವಂತೆ ಇಲ್ಲ. ಏಕಂದರೆ, ಅಶ್ವಿನ್ ಅವರ ಅಂಕಿ ಅಂಶ ಭಾರತದಲ್ಲಿ ಉತ್ತಮವಾಗಿದೆ. ವರ್ಲ್ಡ್ ಕಪ್ 2023 ಭಾರತದ ನೆಲದಲ್ಲಿ ನಡೆಯಲಿದ್ದು, ಇಲ್ಲಿ ಸ್ಪಿನ್ ಬೌಲಿಂಗ್ ತುಂಬಾ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ.
ಬಹುದಿನಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಕರ್ನಾಟಕದ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರು ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ಈ ಸ್ಟಾರ್ ಪ್ಲೇಯರ್ ಗಳ ಆಗಮನದಿಂದ ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್ ಅಪ್ ಬಲಾಢ್ಯವಾಗಲಿದೆ. ಐರ್ಲೆಂಡ್ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ತಿಲಕ್ ವರ್ಮಾಗೆ ರೆಡ್ ಕಾರ್ಪೆಟ್ ಹಾಕಲಾಗಿದೆ.
ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ಮತ್ತೆ ಮಣೆ ಹಾಕಲಾಗಿದೆ. ಸತತ ವೈಫಲ್ಯದ ನಡುವೆಯೂ ಸೂರ್ಯಗೆ ಅವಕಾಶ ಲಭಿಸಿರುವುದು ಅಚ್ಚರಿ ಮೂಡಿಸಿದೆ. ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಫಿಟ್ ಆಗಿದ್ದರೂ, ಸೂರ್ಯಕುಮಾರ್ ಅವರನ್ನು ಆಯ್ಕೆ ಮಾಡಿದ್ದು ಪ್ರಶ್ನೆಗಳು ಏಳುವಂತೆ ಮಾಡಿವೆ.

ಟೀಮ್ ಇಂಡಿಯಾದ ಸ್ಪೀಡ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಉಮ್ರಾನ್ ಮಲಿಕ್ ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಲಾಗಿಲ್ಲ. ಐಪಿಎಲ್ ನಲ್ಲಿ ಅಮೋಘ ದಾಳಿಯನ್ನು ಸಂಘಟಿಸಿ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭರ್ಜರಿ ದಾಳಿ ನಿರ್ವಹಿಸಿದರೂ, ಮಲಿಕ್ ಅವರಿಗೆ ಕಡೆಗಣನೆ ಮಾಡಲಾಗಿದೆ. ಇನ್ನು ಇವರ ಸ್ಥಾನದಲ್ಲಿ ಕರ್ನಾಟಕದ ಸ್ಟಾರ್ ವೇಗಿ ಪ್ರಸಿದ್ಧ ಕೃಷ್ಣ ಅವರಿಗೆ ಅವಕಾಶ ನೀಡಲಾಗಿದೆ.
ಆಯ್ಕೆ ಸಮಿತಿ ಹಾಗೂ ನಾಯಕರ ಮನವನ್ನು ಒಲಿಸುವಲ್ಲಿ ಪ್ರಸಿದ್ಧ ಕೃಷ್ಣ ಸಫಲರಾಗಿದ್ದಾರೆ. ಟೀಮ್ ಇಂಡಿಯಾದ ಉಪನಾಯಕನ ಹೊಣೆಯನ್ನು ಮತ್ತೊಮ್ಮೆ ಹಾರ್ದಿಕ್ ಪಾಂಡ್ಯ ಮೇಲೆ ಹೊರಿಸಲಾಗಿದೆ. ಕೆಲವು ವೈಫಲ್ಯದ ಮಧ್ಯೆಯೂ ಟೀಮ್ ಮ್ಯಾನೇಜ್ಮೆಂಟ್ ಹಾರ್ದಿಕ್ ಅವರ ಮೇಲೆ ಭರವಸೆಯನ್ನು ಇಟ್ಟಿದೆ. ಉಪನಾಯಕನ ಸ್ಥಾನದಲ್ಲಿ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ಮಾತುಗಳೆಲ್ಲಾ ಸುಳ್ಳಾಗಿವೆ.
ಸೀಮಿತ ಓವರ್ ಗಳ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಇದ್ದ ಯುಜುವೇಂದ್ರ ಚಹಾಲ್ ಅವರಿಗೂ, ಸಹ ಈ ಬಾರಿ ತಂಡದಿಂದ ಕೈ ಬಿಡಲಾಗಿದೆ. ಏಷ್ಯಾ ಕಪ್ ಟೂರ್ನಿಯಲ್ಲಿ ಕೆ.ಎಲ್ ರಾಹುಲ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿರಲಿದ್ದಾರೆ. ಬ್ಯಾಕ್ ಅಪ್ ಆಗಿ ಇಶನ್ ಕಿಶನ್ ಇದ್ದು ತಂಡಕ್ಕೆ ಬಲ ತುಂಬಲಿದ್ದಾರೆ.