
ಸದ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಅರ್ಧ ಭಾಗ ಮುಗಿದಿದ್ದು, ಮೂರು ಮತ್ತು ನಾಲ್ಕನೇ ಪಂದ್ಯಗಳು ನಡೆಯಬೇಕಿದೆ. ಈಗಾಗಲೇ ಎರಡೂ ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಆತಿಥೇಯ ಭಾರತ ತಂಡ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಭಾರತ ಕ್ರಿಕೆಟ್ ತಂಡಕ್ಕೆ ಹಲವು ಪ್ರಶ್ನೆಗಳು ಎದುರಾಗಿದ್ದು, ಆಡುವ 11ರ ಬಳಗದಲ್ಲಿ ಆರಂಭಿಕ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಸ್ಥಾನವು ದೊಡ್ಡ ಪ್ರಶ್ನೆಯಾಗಿದೆ.
ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕೇವಲ 38 ರನ್ ಗಳಿಸಿದ್ದಾರೆ. ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಸೇರಿದಂತೆ ಮಾಜಿ ಆಟಗಾರರು ತನ್ನ ಕೊನೆಯ 10 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ 23 ರನ್ಗಳ ಗರಿಷ್ಠ ಸ್ಕೋರ್ ಗಳಿಸಿರುವ ಕೆಎಲ್ ರಾಹುಲ್ಗೆ ಏಕೆ ಇಷ್ಟೊಂದು ಅವಕಾಶ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಭಾರತ ತಂಡವು ಜೂನ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಸತತ ಗೆಲುವನ್ನು ಎದುರು ನೋಡುತ್ತಿದೆ. ಹೀಗಾಗಿ ಕಳಪೆ ಫಾರ್ಮ್ನಲ್ಲಿರುವ ಕೆಎಲ್ ರಾಹುಲ್ ಅವರ ಸ್ಥಾನವು ಪ್ರಶ್ನಾರ್ಹವಾಗಿದೆ.
ಇದೇ ವೇಳೆ, ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡದ ಉಪನಾಯಕನಾಗಿದ್ದ ಕೆಎಲ್ ರಾಹುಲ್, ಅಂತಿಮ ಎರಡು ಟೆಸ್ಟ್ ಪಂದ್ಯಗಳಿಂದ ಉಪನಾಯಕನ ಜವಾಬ್ದಾರಿ ಕಿತ್ತು ಹಾಕಲಾಗಿದೆ. ಹೀಗಾಗಿ ಬಿಸಿಸಿಐ ಮಾಜಿ ಆಯ್ಕೆಗಾರ ಸಬಾ ಕರೀಂ ಅವರು ಕೆಎಲ್ ರಾಹುಲ್ರನ್ನು ಉಪನಾಯಕನ ಸ್ಥಾನದಿಂದ ತೆಗೆದುಹಾಕಲು ಕಾರಣವನ್ನು ತಿಳಿಸಿದ್ದಾರೆ.
"ಇತ್ತೀಚಿನ ದಿನಗಳಲ್ಲಿ ಕೆಎಲ್ ರಾಹುಲ್ ಅವರ ಪ್ರದರ್ಶನ ಉತ್ತಮವಾಗಿಲ್ಲ. ಹೀಗಾಗಿಯೇ ಆತನನ್ನು ಉಪನಾಯಕನ ಸ್ಥಾನದಿಂದ ತೆಗೆದುಹಾಕಲಾಗಿದೆ. ಇದರರ್ಥ ರಾಹುಲ್ರನ್ನು ಆಡುವ 11ರ ಬಳಗದಲ್ಲಿ ಆಡಿಸಲಾಗುವುದಿಲ್ಲ ಎಂದಲ್ಲ. ಇದರರ್ಥ ನಿಮ್ಮ ಪ್ರದರ್ಶನ ಉತ್ತಮವಾಗಿದ್ದರೆ, ನೀವು ಉಪನಾಯಕರಾಗುತ್ತೀರಿ," ಎಂದು ಸಬಾ ಕರೀಂ ಅಭಿಪ್ರಾಯಪಟ್ಟಿದ್ದಾರೆ.

"ಒಂದು ವೇಳೆ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡ ಸೋತಿದ್ದರೆ, ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಡಲು ಯಾವುದೇ ಹಿಂಜರಿಕೆ ಇರಲಿಲ್ಲ. ಆದರೆ ತಂಡವು ಗೆಲ್ಲುತ್ತಿರುವ ಕಾರಣ ಮತ್ತು ಪಿಚ್ಗಳು ಬ್ಯಾಟಿಂಗ್ ಮಾಡಲು ಕಠಿಣವಾಗಿರುವುದರಿಂದ ಕೆಎಲ್ ರಾಹುಲ್ಗೆ ಇನ್ನೂ ಕೆಲವು ಅವಕಾಶಗಳು ಸಿಗುತ್ತಿವೆ," ಎಂದು ಸಬಾ ಕರೀಂ ಹೇಳಿದ್ದಾರೆ.
ಇದೇ ವೇಳೆ, ಭಾರತೀಯ ಟೆಸ್ಟ್ ತಂಡದ ಮುಂದಿನ ಉಪನಾಯಕ ಯಾರು ಎಂಬ ಪ್ರಶ್ನೆ ಕೇಳಿದಾಗ, "ಭಾರತ ತಂಡದ ಮುಂದಿನ ಉಪನಾಯಕನನ್ನು ಆಯ್ಕೆ ಮಾಡುವಾಗ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದರಲ್ಲಿ ವಯಸ್ಸು ಅತಿ ಮುಖ್ಯವಾಗಿರುತ್ತದೆ. ಏಕೆಂದರೆ, ಭವಿಷ್ಯದಲ್ಲಿ ಆ ವ್ಯಕ್ತಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಋತುವಿನಲ್ಲಿ ಭಾರತ ತಂಡವನ್ನು ಮುನ್ನಡೆಸಬೇಕಾಗುತ್ತದೆ," ಎಂದು ಸಬಾ ಕರೀಂ ತಿಳಿಸಿದರು.
"ಉಪನಾಯಕನ ಸ್ಥಾನಕ್ಕೆ ಭಾರತ ತಂಡದಲ್ಲಿ ಪ್ರಸ್ತುತ ಇಬ್ಬರು ಅಭ್ಯರ್ಥಿಗಳಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರೆಂದರೆ, ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್. ಆದರೆ, ರವೀಂದ್ರ ಜಡೇಜಾ ಅವರ ಮೇಲೆ ದೊಡ್ಡ ಕೆಲಸದ ಹೊರೆ ಇದೆ. ಹೀಗಾಗಿ ರಿಷಭ್ ಪಂತ್ ಚೇತರಿಸಿಕೊಂಡು ಫಿಟ್ನೆಸ್ಗೆ ಮರಳುವುದನ್ನು ಭಾರತ ತಂಡದ ಮ್ಯಾನೇಜ್ಮೆಂಟ್ ಕಾಯುತ್ತಿದೆ," ಎಂದು ಬಿಸಿಸಿಐ ಮಾಜಿ ಆಯ್ಕೆಗಾರ ಸಬಾ ಕರೀಂ ಹೇಳಿದರು.