
ಕಳೆದ ಟಿ20 ವಿಶ್ವಕಪ್ ಕಳಪೆ ಪ್ರದರ್ಶನದ ನಂತರ, ಚೇತನ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯನ್ನೇ ಬಿಸಿಸಿಐ ವಜಾಗೊಳಿಸಿತ್ತು.
ಇತ್ತೀಚಿಗೆ ಮತ್ತೆ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಆಯ್ಕೆಯಾದ ಚೇತನ್ ಶರ್ಮಾ ಇದೀಗ ದೊಡ್ಡ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೇ ಭಾರತೀಯ ಕ್ರಿಕೆಟ್ ಮುಜುಗರ ಅನುಭವಿಸುವಂತೆ ಮಾಡಿದ್ದಾರೆ.
ಖಾಸಗಿ ಸುದ್ದಿ ಚಾನೆಲ್ನ ರಹಸ್ಯ ಕುಟುಕು ಕಾರ್ಯಾಚರಣೆಯಲ್ಲಿ ಭಾರತ ಕ್ರಿಕೆಟ್ ತಂಡದ ಮತ್ತು ಬಿಸಿಸಿಐನ ಹಲವು ಆಂತರಿಕ ವಿಚಾರಗಳನ್ನು ಬಹಿರಂಗಗೊಳಿಸಿದ್ದಾರೆ. ಮುಖ್ಯವಾಗಿ ವಿರಾಟ್ ಕೊಹ್ಲಿ ನಾಯಕನಾಗಿದ್ದಾಗ ನಡೆದ ಬೆಳವಣಿಗೆಗಳು ಮತ್ತು ಭಾರತ ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರು ಬಳಸುವ ಮಾರ್ಗಗಳ ಬಗ್ಗೆ ಮಾತನಾಡಿದ್ದಾರೆ.
ಝೀ ನ್ಯೂಸ್ ನಡೆಸಿದ ರಹಸ್ಯ ಕುಟುಕು ಕಾರ್ಯಾಚರಣೆಯಲ್ಲಿ ನಾಯಕತ್ವದ ವಿಚಾರವಾಗಿ ವಿರಾಟ್ ಕೊಹ್ಲಿ ಮತ್ತು ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವಿನ ಜಗಳ, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ನಡುವಿನ ಬಿಸಿ ಚರ್ಚೆ, ಶೇ.80ರಿಂದ 85ರಷ್ಟು ಫಿಟ್ ಆಗಿದ್ದರೂ ತಂಡದಲ್ಲಿ ಸ್ಥಾನ ಪಡೆಯಲು ಬಹಳಷ್ಟು ಆಟಗಾರರು ನಕಲಿ ಫಿಟ್ನೆಸ್ಗಾಗಿ ಚುಚ್ಚುಮದ್ದು ಬಳಕೆಯಂತಹ ವಿಚಾರಗಳನ್ನು ಹೊರಹಾಕಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುವಾಗ ನಡೆದ ಘಟನೆಗಳ ಬಗ್ಗೆ ಚೇತನ್ ಶರ್ಮಾ ಮತನಾಡಿದ್ದು ರಹಸ್ಯ ಕಾರ್ಯಾಚರಣೆಯಲಲ್ಇ ಕಂಡುಬಂದಿದೆ. ಇದು ದೊಡ್ಡಮಟ್ಟದಲ್ಲಿ ಸುದ್ದಿಯಾದ ಹಿನ್ನೆಲೆ ಚೇತನ್ ಶರ್ಮಾ ವಿರುದ್ಧ ಆಂತರಿಕ ತನಿಖೆಗೆ ಬಿಸಿಸಿಐ ಮುಂದಾಗಿದೆ.
ಭಾರತ ರಾಷ್ಟ್ರೀಯ ತಂಡದ ಆಯ್ಕೆಗಾರರು ಒಪ್ಪಂದಕ್ಕೆ ಬದ್ಧರಾಗಿರುವುದರಿಂದ ಮತ್ತು ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂದು ಚೇತನ್ ಶರ್ಮಾಗೆ ಬಿಸಿಸಿಐ ತಿಳಿಸಿದೆ. ಇದೀಗ ಈ ವಿವಾದವನ್ನು ಬಿಸಿಸಿಐ ಹೇಗೆ ಬಗೆಹರಿಸಲಿದೆ ಎಂಬುದು ಕುತೂಹಲಕಾರಿಯಾಗಿದೆ.
"ಟಿ20 ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಏಕದಿನ ಮತ್ತು ಟೆಸ್ಟ್ ನಾಯಕ ರೋಹಿತ್ ಶರ್ಮಾ ಅವರ ಕ್ರಿಕೆಟ್ ಭವಿಷ್ಯದ ಮಾತನಾಡಿರುವ ಚೇತನ್ ಶರ್ಮಾ ಅವರೊಂದಿಗೆ ಭಾರತ ಭಾರತ ತಂಡದ ಆಯ್ಕೆ ಸಭೆಯಲ್ಲಿ ಕುಳಿತುಕೊಳ್ಳಲು ಬಯಸುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ," ಎಂದು ಬಿಸಿಸಿಐ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ವಿವಾದದ ಕೇಂದ್ರ ಬಿಂದು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಅವರ ಭವಿಷ್ಯ ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಕೈಯಲ್ಲಿದೆ. ಬಿಸಿಸಿಐ ಮೂಲಗಳ ಪ್ರಕಾರ, ಚೇತನ್ ಶರ್ಮಾ ಅವರನ್ನು ವಜಾಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.