
ನವದೆಹಲಿ: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ, ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಭಾರತೀಯ ಮುಖ್ಯ ಆಯ್ಕೆದಾರರಲ್ಲಿ ಮುಂಬರಲಿರುವ ಟಿ20 ವಿಶ್ವಕಪ್ಗೆ ಮಾರ್ಗ ಸೂಚಿ ತಯಾರಿಸಲು ಹೇಳಿದ್ದಾರೆ.
ಕಳೆದ ಸುಮಾರು 8 ವರ್ಷಗಳಿಂದಲೂ ಭಾರತೀಯ ತಂಡ ಯಾವುದೇ ಐಸಿಸಿ ಟೂರ್ನಿಮೆಂಟ್ಗಳಲ್ಲಿ ಗೆದ್ದಿಲ್ಲ. ಹೀಗಾಗಿ ಈ ಬಾರಿ ಟಿ20 ವಿಶ್ವಕಪ್ ಗೆಲ್ಲಲೇಬೇಕು. ಅದಕ್ಕೆ ಕಾರ್ಯತಂತ್ರಗಳು ಹೇಗಿರಬೇಕು ಎನ್ನುವ ಬಗ್ಗೆ ಯೋಚಿಸಲು ದಾದಾ ಆಯ್ಕೆ ಸಮಿತಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಮುಂಬರಲಿರುವ ಶ್ರೀಲಂಕಾ ಪ್ರವಾಸ ಸರಣಿಯಿಂದಲೇ ಯೋಜನೆಗಳನ್ನು ಹಾಕಿಕೊಳ್ಳುವಂತೆ ಗಂಗೂಲಿ ಭಾರತೀಯ ಆಯ್ಕೆ ಸಮಿತಿಗೆ ಹೇಳಿದ್ದಾರೆ. ಅಂದರೆ ಶ್ರೀಲಂಕಾ ಪ್ರವಾಸ ಸರಣಿಯಲ್ಲಿ ಯಾರು ಆಡುತ್ತಾರೆ, ಟಿ20 ವಿಶ್ವಕಪ್ಗೆ ಅನುಕೂಲ ಆಗುವ ರೀತಿಯಲ್ಲಿ ಮುಂಬರಲಿರುವ ಐಪಿಎಲ್ ಅನ್ನು ಹೇಗೆ ಬಳಸಿಕೊಳ್ಳಬೇಕು, ಆಟಗಾರರಿಗೆ ಕೆಲಸದ ಹೊರೆ ನಿರ್ವಹಣೆ, ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಗಳು ಇತ್ಯಾದಿ ಸಂಗತಿಗಳ ಬಗ್ಗೆ ಗಮನ ಹರಿಸಲು ಗಂಗೂಲಿ ಸೂಚಿಸಿದ್ದಾರೆ.
1983ರಲ್ಲಿ ವಿಶ್ವಕಪ್, 2007ರ ಟಿ20 ವಿಶ್ವಕಪ್, 2011ರ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿಗಳಲ್ಲಿ ಭಾರತ ಗೆದ್ದಿದ್ದು ಬಿಟ್ಟರೆ ಅಲ್ಲಿಂದ ಈಚೆ ಐಸಿಸಿ ಟ್ರೋಫಿಗಳಲ್ಲಿ ಗೆದ್ದಿದ್ದಿಲ್ಲ. ಆದ್ದರಿಂದ ಈ ಬಾರಿಯ ಟಿ20 ವಿಶ್ವಕಪ್ ಗೆಲ್ಲುವತ್ತ ಗಮನ ಹರಿಸುವಂತೆ ಗಂಗೂಲಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲೂ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋತಿತ್ತು.