
ಬಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರಾ?. ಬಿಜೆಪಿ ಪಕ್ಷಕ್ಕೆ ಗಂಗೂಲಿ ಸೇರ್ಪಡೆಯಾಗಲಿದ್ದಾರಾ? ಈ ಪ್ರಶ್ನೆಗಳು ಮತ್ತೊಮ್ಮೆ ಗರಿಗೆದರಿದೆ. ಇದಕ್ಕೆ ಕಾರಣ ಸೌರವ್ ಗಂಗೂಲಿಯ ಕೊಲ್ಕತ್ತಾ ನಿವಾಸಕ್ಕೆ ಅಮಿತ್ ಶಾ ಭೇಟಿ ನೀಡುತ್ತಿರುವುದು. ಈ ಹಿಂದೆ ಹಲವು ಸಂದರ್ಭದಲ್ಲಿ ಸೌರವ್ ಗಂಗೂಲಿ ರಾಜಕೀಯ ಸೇರ್ಪಡೆ ವಿಚಾರ ಚರ್ಚೆಗೆ ಬಂದಿತ್ತು. ಇದೀಗ ಮತ್ತೊಮ್ಮೆ ಅದಕ್ಕೆ ಪೂರಕ ಬೆಳವಣಿಗೆಗಳು ನಡೆಯುತ್ತಿದೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷ ಪಶ್ಚಿಮ ಬಂಗಾಳದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಸದಾ ಪ್ರಯತ್ನದಲ್ಲಿದೆ. ಪಶ್ಚಿಮ ಬಂಗಾಳದ ಅಧಿಕಾರದ ಗದ್ದುಗೆಗೇರಲು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಪ್ರಯತ್ನವನ್ನು ನಡೆಸಿ ವಿಫಲವಾಗಿತ್ತು. ತೃಣಮೂಲ ಕಾಂಗ್ರೆಸ್ ಬಂಗಾಳದಲ್ಲಿ ಭದ್ರವಾಗಿ ತಳವೂರಿದ್ದು ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅಧಿಕಾರದಲ್ಲಿದ್ದಾರೆ.
2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸೌರವ್ ಗಂಗೂಲಿ ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆ ಎಂಬ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಆದರೆ ಆಗ ಅದು ನಡೆದಿರಲಿಲ್ಲ. ಆದರೆ ಪಶ್ಚಿಮ ಬಂಗಾಳದ ಬಹುತೇಕ ರಾಜಕೀಯ ಪಕ್ಷಗಳು ಸೌರವ್ ಗಂಗೂಲಿ ತಮ್ಮ ಪಕ್ಷದ ಪರವಾಗಿ ರಾಜಕೀಯಕ್ಕೆ ಇಳಿಯಲಿ ಎಂಬುದನ್ನು ಬಯಸುತ್ತಿದೆ ಎಂಬುದು ಅತ್ಯಂತ ಸ್ಪಷ್ಟ. ಇದಕ್ಕೆ ಕಾರಣ ಪಶ್ಚಿಮ ಬಂಗಾಳದಲ್ಲಿ ಸೌರವ್ ಗಂಗೂಲಿ ಹೊಂದಿರುವ ಜನಪ್ರಿಯತೆ. ಇದನ್ನು ಬಳಸಿಕೊಳ್ಳುವ ಪ್ರಯತ್ನವನ್ನು ಬಿಜೆಪಿ ಪಕ್ಷ ಮಾಡುತ್ತಿದೆಯಾ ಎಂಬುದು ಈಗ ಕುತೂಹಲ ಮೂಡಿಸಿದೆ.
ಇನ್ನು ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಕೂಡ ಸೌರವ್ ಗಂಗೂಲಿ ಜೊತೆ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಮತಾ ಬ್ಯಾನರ್ಜೀ "ಅಮಿತ್ ಶಾ ಸೌರವ್ ಗಂಗೂಲಿ ಮನೆಗೆ ಹೋಗಲು ಬಯಸಿದ್ದರೆ ಏನಿದೆ ತಪ್ಪು. ಕಳೆದ ಬಾರಿ ಕೂಡ ಅವರು ಹಲವರ ಮನೆಗೆ ತೆರಳಿದ್ದರು. ಅವರನ್ನು ಹೋಗಲು ಬಿಡಿ. ಸೌರವ್ ಗಂಗೂಲಿಗೆ ಯಾರಾದರು ಒಂದು ಮಾತನ್ನು ಹೇಳಬೇಕು. ಅವರು ರಸಗುಲ್ಲಾ ಹಾಗೂ ಡೋಯ್(ಕೊಲ್ಕತ್ತಾದ ಜನಪ್ರಿಯ ತನಿಸುಗಳು)ಯನ್ನು ಹೆಚ್ಚುವರಿಯಾಗಿ ತೆಗೆದಿಟ್ಟುಕೊಳ್ಳಲಿ. ನಮ್ಮಲ್ಲಿ ಉತ್ತಮ ಗುಣಮಟ್ಟದ ರಸಗುಲ್ಲಾ ಹಾಗೂ ಡಾಯ್ ದೊರೆಯುತ್ತದೆ. ನಾವು ನಮ್ಮ ಅತಿಥಿಗಳನ್ನು ಈ ಸಿಹಿ ತಿನಿಸುಗಳ ಮೂಲಕ ಸ್ವಾಗತಿಸಲು ಬಯಸುತ್ತೇವೆ," ಎಂದಿದ್ದರು ಮಮತಾ ಬ್ಯಾನರ್ಜಿ.
ಗಂಗೂಲಿ ಅವರು ಮಮತಾ ಬ್ಯಾನರ್ಜಿ ಅವರನ್ನು ಅವರ ನಬನ್ನಾ ಚೇಂಬರ್ನಲ್ಲಿ ಭೇಟಿ ಮಾಡಿದ್ದರು. ಅವರು CAB ಗೆ ಮಂಜೂರು ಮಾಡಲಾದ ಕ್ರೀಡಾ ಮೈದಾನದ ಬಗ್ಗೆ ಮಾತನಾಡಿದ್ದರು, ಆದರೆ ಅದು ಪ್ರಸ್ತುತ ಬಳಕೆಯಾಗದ ಸ್ಥಿತಿಯಲ್ಲಿದೆ. ಆದರೆ ಈ ಬಾರಿ ಅಮಿತ್ ಶಾ ಭೇಟಿ ರಾಜಕೀಯ ಕಾರಣಕ್ಕಾಗಿಯೇ ನಡೆಯುತ್ತಿದೆ ಎನ್ನಲಾಗಿದೆ.
ಈ ವರ್ಷಾಂತ್ಯಕ್ಕೆ ಸೌರವ್ ಗಂಗೂಲಿ ಅವರ ಬಿಸಿಸಿಐ ಅಧ್ಯಕ್ಷ ಸ್ಥಾನದ ಅಧಿಕಾರಾವಧಿ ಅಂತ್ಯವಾಗಲಿದೆ. ಈ ಅವಧಿಯ ಬಳಿಕ ಸೌರವ್ ಗಂಗೂಲಿ ಮುಂದುವರಿಸುವ ಸಾಧ್ಯತೆ ಇಲ್ಲ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಸೌರವ್ ಗಂಗೂಲಿ ನಿವಾಸಕ್ಕೆ ಭೇಟಿ ನೀಡುತ್ತಿರುವುದು ಹೆಚ್ಚು ಕುತೂಹಲ ಮೂಡಿಸಿದೆ.