ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಪಾಕಿಸ್ತಾನ ತನ್ನ ಸಣ್ಣತನವನ್ನು ತೋರಿಸುತ್ತಿದೆ. ಕರಾಚಿಯ ಸ್ಟೇಡಿಯಂನಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ 8 ತಂಡಗಳ ಪೈಕಿ ಏಳು ತಂಡಗಳ ರಾಷ್ಟ್ರ ಧ್ವಜಗಳನ್ನು ಹಾರಿಸಲಾಗಿತ್ತು. ಆದರೆ, ಏಳು ರಾಷ್ಟ್ರಧ್ವಜಗಳ ಪೈಕಿ ಭಾರತದ ತ್ರಿವರ್ಣ ಧ್ವಜ ಕಾಣೆಯಾಗಿತ್ತು. ಇದೀಗ ಪಾಕಿಸ್ತಾನದಲ್ಲಿ ತ್ರಿವರ್ಣ ಧ್ವಜ ಹಾರಿಸದಿರುವುದನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರಶ್ನಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಕರಾಚಿಯ ಸ್ಟೇಡಿಯಂನಲ್ಲಿ ಆಯೋಜಕರು ಇತರ ಎಲ್ಲಾ ತಂಡಗಳ ಧ್ವಜಗಳ ನಡುವೆ ಭಾರತದ ತ್ರಿವರ್ಣ ಧ್ವಜವನ್ನು ಹಾಕಬೇಕಾಗಿತ್ತು ಎಂದು ರಾಜೀವ್ ಶುಕ್ಲಾಆಕ್ರೋಶ ಹೊರಹಾಕಿದ್ದಾರೆ. ಪಾಕಿಸ್ತಾನದಲ್ಲಿ ನಡೆಯಲಿರುವ ಈ ಮೆಗಾ ಟೂರ್ನಿಗೆ ಕೇವಲ ಎರಡು ದಿನಗಳು ಬಾಕಿ ಇರುವಾಗಲ್ಲೇ ಮತ್ತೊಂದು ವಿವಾದ ಭುಗಿಲೆದ್ದಿದೆ.

ಕರಾಚಿ ಸ್ಟೇಡಿಯಂನಲ್ಲಿ ಮೊದಲು ಭಾರತದ ತ್ರಿವರ್ಣ ಧ್ವಜ ಇತ್ತೋ ಇಲ್ಲವೋ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ಅದು ಅಲ್ಲಿ ಇಲ್ಲದಿದ್ದರೆ, ಅದನ್ನು ಹಾಕಬೇಕಿತ್ತು. ಭಾಗವಹಿಸುವ ಎಲ್ಲಾ ರಾಷ್ಟ್ರಗಳ ಧ್ವಜಗಳು ಅಲ್ಲಿ ಇರಬೇಕಿತ್ತು" ಎಂದು ರಾಜೀವ್ ಶುಕ್ಲಾ ಮಂಗಳವಾರ ದೆಹಲಿಯಲ್ಲಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನಿಲ್ಸ್ (ಐಸಿಸಿ) ನಿಯಮದ ಪ್ರಕಾರ, ಯಾವುದೇ ದೇಶವು ಯಾವುದೇ ಐಸಿಸಿ ಟೂರ್ನಿಯನ್ನು ಆಯೋಜಿಸಿದರೂ, ಭಾಗವಹಿಸುವ ಎಲ್ಲಾ ತಂಡಗಳ ರಾಷ್ಟ್ರಧ್ವಜವನ್ನು ಸ್ಟೇಡಿಯಂನಲ್ಲಿ ಟೂರ್ನಿ ಮುಗಿಯುವವರೆಗೆ ಹಾರಿಸಬೇಕು. ಆದೆರೆ ಪಾಕಿಸ್ತಾನ ಕರಾಚಿಯ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳ ರಾಷ್ಟ್ರಧ್ವಜವನ್ನು ಮಾತ್ರ ಹಾರಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಪಾಕಿಸ್ತಾನ ಗುರಿಯಾಗಿದೆ.
ಭದ್ರತಾ ಕಾರಣಗಳಿಂದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳಿಸಿಲ್ಲ. ಹೀಗಾಗಿ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದೆ. ಇದರಿಂದ ಪಾಕಿಸ್ತಾನ ಕರಾಚಿ ಸ್ಟೇಡಿಯಂನಲ್ಲಿ ತ್ರಿವರ್ಣ ಧ್ವಜ್ವವನ್ನು ಪಾಕಿಸ್ತಾನ ಹಾರಿಸಿಲ್ಲ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಿಡಿಕಾರಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಆಯೋಜನೆ ಸಂಬಂಧ ಬಿಸಿಸಿಐ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡುವೆ ವಿವಾದ ನಡೆಯುತ್ತಲ್ಲೇ ಇದೆ.
ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಆರಂಭವಾಗಲಿದೆ. ಆದರೆ ಭಾರತ ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಇದಾದ ನಂತರ, ಟೀಮ್ ಇಂಡಿಯಾ ಫೆಬ್ರವರಿ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮೈದಾನಕ್ಕಿಳಿಯಲಿದೆ.