
ನವದೆಹಲಿ: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮೂವರು ಕ್ರಿಕೆಟಿಗರ ಹೆಸರುಗಳನ್ನು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ 'ಅರ್ಜುನ'ಕ್ಕೆ ಶಿಫಾರಸು ಮಾಡಿದೆ. ಎಎನ್ಐ ಜೂನ್ 30ರ ಬುಧವಾರ ಈ ಸಂಗತಿ ತಿಳಿಸಿದೆ. ಮೂವರೂ ಸದ್ಯ ರಾಷ್ಟ್ರೀಯ ತಂಡಗಳ ಕರ್ತವ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಬಿಸಿಸಿಐ, ಅರ್ಜುನಕ್ಕೆ ಶಿಫಾರಸು ಮಾಡಿರುವ ಮೂವರು ಆಟಗಾರರೆಂದರೆ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್, ಆರಂಭಿಕ ಬ್ಯಾಟ್ಸ್ಮನ್, ಕನ್ನಡಿಗ ಕೆಎಲ್ ರಾಹುಲ್ ಮತ್ತು ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ. ವೈಟ್ಬಾಲ್ನಲ್ಲಿನ ಪ್ರದರ್ಶನಕ್ಕಾಗಿ ಮೂವರನ್ನು ಪ್ರಶಸ್ತಿಗೆ ಸೂಚಿಸಲಾಗಿದೆ.
ಶಿಖರ್ ಧವನ್ ತಂಡದ ನಾಯಕರಾಗಿ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಕೆಎಲ್ ರಾಹುಲ್ ಮತ್ತು ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಪ್ಲೇಯಿಂಗ್ XIನಲ್ಲಿ ಬೂಮ್ರಾ ಕಾಣಿಸಿಕೊಂಡಿದ್ದರು. ಆದರೆ ರಾಹುಲ್ ಆ ಪಂದ್ಯದಲ್ಲಿ ಬೆಂಚ್ನಲ್ಲಿದ್ದರು.
ಶ್ರೀಲಂಕಾದಲ್ಲಿರುವ ಧವನ್ಗೆ ಅಲ್ಲಿ ಜುಲೈ 13ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ. ಇಂಗ್ಲೆಂಡ್ನಲ್ಲಿರುವ ಬೂಮ್ರಾ ಮತ್ತು ರಾಹುಲ್ಗೆ ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.