
ನವದೆಹಲಿ, ಏಪ್ರಿಲ್ 27: ಅರ್ಜುನ ಪ್ರಶಸ್ತಿಗಾಗಿ ಬಿಸಿಸಿಐಯು ನಾಲ್ವರು ಕ್ರಿಕೆಟಿಗರ ಹೆಸರುಗಳನ್ನು ಶಿಫಾರಸು ಮಾಡಿದೆ. ಭಾರತ ಕ್ರಿಕೆಟ್ ತಂಡದ ವೇಗಿ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಆಲ್ ರೌಂಡರ್ ಜಡೇಜಾ ಮತ್ತು ಮಹಿಳಾ ಕ್ರಿಕೆಟರ್ ಪೂನಂ ಯಾದವ್ ಹೆಸರುಗಳು ಅರ್ಜುನ ಪ್ರಶಸ್ತಿಗೆ ಶಿಫಾರಸ್ಸಾಗಿವೆ.
ನವದೆಹಲಿಯಲ್ಲಿ ಶನಿವಾರ (ಏಪ್ರಿಲ್ 27) ನಡೆದ ಸುಪ್ರೀಮ್ ಕೋರ್ಟ್ ನೇಮಿತ ಆಡಳಿತ ಸಮಿತಿ (ಸಿಒಎ) ಸಭೆಯ ವೇಳೆ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ಅರ್ಜುನ ಪ್ರಶಸ್ತಿಗಾಗಿ ಶಿಫಾರಸು ಮಾಡಿರುವ ಪಟ್ಟಿಯಲ್ಲಿರುವ 27ರ ಹರೆಯದ ಬೂಮ್ರಾ ಸದ್ಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದು, ಮುಂಬರಲಿರುವ ವಿಶ್ವಕಪ್ನಲ್ಲೂ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಭಾರತ ತಂಡ ಬಲವಾಗಿರುವ ಮತ್ತೊಬ್ಬ ವೇಗಿ ಶಮಿ, ಸರ್ವಾಂಗಿಣ ಆಟಗಾರ ಜಡೇಜಾ ಕೂಡ ಬಿಸಿಸಿಐ ವಿಶ್ವಕಪ್ಗಾಗಿ ಪ್ರಕಟಿಸಿರುವ 15 ಜನರ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು 27ರ ಹರೆಯದ ಲೆಗ್ ಸ್ಪಿನ್ನರ್ ಪೂನಂ 41 ಏಕದಿನ ಪಂದ್ಯಗಳಲ್ಲಿ 63 ವಿಕೆಟ್ಗಳು ಮತ್ತು 54 ಟಿ20 ಪಂದ್ಯಗಳಲ್ಲಿ 74 ವಿಕೆಟ್ಗಳನ್ನು ಪಡೆದ ಸಾಧಕಿ.