ವೆಸ್ಟ್ ಇಂಡೀಸ್ ವಿರುದ್ಧದ ಇತ್ತೀಚಿನ ಸೀಮಿತ ಓವರ್ಗಳ ಸರಣಿಯಲ್ಲಿ ಭಾರತ ತಂಡದ ಕಳಪೆ ಪ್ರದರ್ಶನದ ಬಳಿಕ, ಮುಂಬರುವ 2023ರ ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಭಾರತ ತಂಡದ ಸಿದ್ಧತೆಗಳ ಬಗ್ಗೆ ಗೊಂದಲ ಎದ್ದು ಕಾಣುತ್ತಿದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಹೊರತುಪಡಿಸಿ ಬ್ಯಾಟಿಂಗ್ ಲೈನ್ ಅಪ್ ಸಂಪೂರ್ಣವಾಗಿ ಅಸ್ಥಿರವಾದಂತೆ ಕಂಡುಬಂತು. ಇದು ಮೊದಲ ಏಕದಿನ ಪಂದ್ಯದಲ್ಲಿ ಸ್ಪಷ್ಟವಾಗಿತ್ತು. ಅಲ್ಲಿ ಅಲ್ಪ 115 ರನ್ ಬೆನ್ನಟ್ಟಲು ಹೆಣಗಾಡಿತು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಕಿರಿಯ ಬ್ಯಾಟರ್ಗಳಿಗೆ ಅವಕಾಶ ಮಾಡಿಕೊಡಲು ಬ್ಯಾಟಿಂಗ್ ಕ್ರಮಾಂಕದಲ್ಲಿ ಸ್ವತಃ ಕೆಳಕ್ಕೆ ತಳ್ಳಿದರು.

ಮುಂಬರುವ ಪ್ರಮುಖ ಪಂದ್ಯಾವಳಿಗಳಿಗೆ ಭಾರತ ತಂಡದ ಸಿದ್ಧತೆಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆಯೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಮಿಯಾಮಿಯಲ್ಲಿ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಆಗಸ್ಟ್ 8ರ ಮಂಗಳವಾರದಂದು ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದ ನಂತರ ಭಾರತ ತಮಡ ಐದು ಪಂದ್ಯಗಳ ಸರಣಿಯಲ್ಲಿ 1-2ರಿಂದ ಹಿನ್ನಡೆಯಲ್ಲಿತ್ತು.
ಕ್ರಿಕ್ಬಜ್ ವರದಿಯ ಪ್ರಕಾರ, ರಾಹುಲ್ ದ್ರಾವಿಡ್ ಮತ್ತು ಜಯ್ ಶಾ ನಡುವಿನ ಮಾತುಕತೆಯು ಸುಮಾರು ಎರಡು ಗಂಟೆಗಳ ಕಾಲ ನಡೆಯಿತು. ಇಬ್ಬರ ನಡುವಿನ ಚರ್ಚೆಯ ವಿಷಯಗಳ ವಿವರಗಳು ಬಹಿರಂಗವಾಗಿಲ್ಲವಾದರೂ, 2023ರ ಏಕದಿನ ವಿಶ್ವಕಪ್ನ ಮಾರ್ಗಸೂಚಿಯನ್ನು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಅಕ್ಟೋಬರ್ 5ರಿಂದ ಭಾರತದಲ್ಲಿಯೇ ನಡೆಯಲಿರುವ ಏಕದಿನ ವಿಶ್ವಕಪ್ ಗೆಲ್ಲುವ ಬಲವಾದ ವಿಶ್ವಾಸವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವು 2-3 ಅಂತರದಿಂದ ಸೋತಿತು. ಬಳಿಕ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನವನ್ನು ಪ್ರಶ್ನಿಸುವ ಮೂಲಕ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಕೆಲವರು ಟಿ20 ಪಂದ್ಯಗಳಿಗೆ ಹೊಸ ಕೋಚ್ ನೇಮಕ ಮಾಡುವಂತೆ ಒತ್ತಾಯಿಸಿದ್ದಾರೆ.
ಇದೇ ವೇಳೆ, ಭಾರತ ತಂಡವು ಆಗಸ್ಟ್ 24ರಿಂದ ಬೆಂಗಳೂರಿನ ಆಲೂರು ಮೈದಾನದಲ್ಲಿ 2023ರ ಏಷ್ಯಾ ಕಪ್ ಪಂದ್ಯಾವಳಿಗಾಗಿ ಪೂರ್ವಸಿದ್ಧತಾ ಶಿಬಿರವನ್ನು ಪ್ರಾರಂಭಿಸಲಿದೆ. ಆದರೆ, ಏಷ್ಯಾ ಕಪ್ಗೆ ತಂಡವನ್ನು ಯಾವಾಗ ಪ್ರಕಟಿಸಲಾಗುತ್ತದೆ ಎಂಬುದರ ಕುರಿತು ಆಯ್ಕೆ ಸಮಿತಿಯು ಇನ್ನೂ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಆಗಸ್ಟ್ 18ರಂದು ಐರ್ಲೆಂಡ್ ವಿರುದ್ಧ ಭಾರತ ತಂಡ ಮೊದಲ ಟಿ20 ಪಂದ್ಯವನ್ನು ಆಡಿದ ನಂತರ ಆಯ್ಕೆ ನಡೆಯಲಿದೆ ಎಂದು ವರದಿಯು ತಿಳಿಸಿದೆ. ಇದೇ ವೇಳೆ ಅನುಭವಿ ಬೌಲರ್ ಜಸ್ಪ್ರೀತ್ ಬುಮ್ರಾ 11 ತಿಂಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲಿದ್ದಾರೆ.
ಇದಲ್ಲದೆ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಯಲ್ಲಿ ಪುನರ್ವಸತಿಗೆ ಒಳಗಾಗಿರುವ ಸ್ಟಾರ್ ಬ್ಯಾಟರ್ಗಳಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಫಿಟ್ನೆಸ್ ಕುರಿತು ಬಿಸಿಸಿಐ ಇನ್ನೂ ಯಾವುದೇ ಅಧಿಕೃತ ನವೀಕರಣ ಮಾಹಿತಿಯನ್ನು ಹಂಚಿಕೊಂಡಿಲ್ಲ.
ರಿಷಭ್ ಪಂತ್ ಅವರು ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಒಟ್ಟಿಗೆ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರಿಂದ ಇಬ್ಬರೂ ಇತ್ತೀಚೆಗೆ ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಗೊತ್ತಾಗಿದೆ. ಎನ್ಸಿಎ ಮ್ಯಾನೇಜರ್ಗಳು ಆಯ್ಕೆ ಸಮಿತಿ ಸಭೆಯ ಮೊದಲು ಬಿಸಿಸಿಐಗೆ ಇಬ್ಬರೂ ಆಟಗಾರರ ಬಗ್ಗೆ ಫಿಟ್ನೆಸ್ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.