
ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ತಂಡ ಆತಿಥೇಯರ ವಿರುದ್ಧದ ಸೀಮಿತ ಓವರ್ಗಳ ಕ್ರಿಕೆಟ್ ಸರಣಿಗಳಿಗೆ ಸಜ್ಜಾಗುತ್ತಿದೆ. ಅನುಭವಿ ಬ್ಯಾಟ್ಸ್ಮನ್ ಶಿಖರ್ ಧವನ್ ನಾಯಕತ್ವದಲ್ಲಿರುವ ಭಾರತೀಯ ತಂಡ ಶುಕ್ರವಾರ (ಜುಲೈ 2) ಮೊದಲ ದಿನದ ಅಭ್ಯಾಸ ನಡೆಸಿದೆ.
ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಭಾರತ ತಂಡ ಅಭ್ಯಾಸದಲ್ಲಿ ತೊಡಗಿರುವ ಚಿತ್ರವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಳ್ಳುವ ಮೂಲಕ ಪ್ರವಾಸದ ಬಗ್ಗೆ ಅಪ್ಡೇಟ್ ನೀಡಿದೆ. 'ಶ್ರೀಲಂಕಾದಲ್ಲಿರುವ ಟೀಮ್ ಇಂಡಿಯಾದ ಅಭ್ಯಾಸದ ವೇಳೆಯ ಚಿತ್ರಗಳು' ಎಂದು ಬಿಸಿಸಿಐ ಟ್ವಿಟರ್ನಲ್ಲಿ ಬರೆದುಕೊಂಡಿದೆ.
ಶ್ರೀಲಂಕಾದಲ್ಲಿರುವ ಭಾರತ ತಂಡದ ಪ್ರದರ್ಶನದ ಬಗ್ಗೆ ಭಾರತೀಯ ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲವಿದೆ. ಕಾರಣ, ಮೊದಲ ಬಾರಿಗೆ ರಾಷ್ಟ್ರೀಯ ತಂಡದ ನಾಯಕತ್ವ ಶಿಖರ್ ಧವನ್ಗೆ ಸಿಕ್ಕಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಭಾರತೀಯ ತಂಡಕ್ಕೆ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ತೆರಳಿದ್ದಾರೆ.
ಭಾರತ-ಶ್ರೀಲಂಕಾ ಪ್ರವಾಸ ಸರಣಿ ಜುಲೈ 13ರಿಂದ ಜುಲೈ 25ರ ವರೆಗೆ ನಡೆಯಲಿದೆ. ಪ್ರವಾಸವು 3 ಏಕದಿನ ಪಂದ್ಯಗಳು ಮತ್ತು 3 ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ. ಎಲ್ಲಾ ಪಂದ್ಯಗಳು ಕೊಲಂಬೋದಲ್ಲಿರುವ ಆರ್ ಪ್ರೇಮಾನಂದ ಸ್ಟೇಡಿಯಂನಲ್ಲಿ ನಡೆಯಲಿವೆ.