
ಸರಿ ಸುಮಾರು ಒಂದೂವರೆ ದಶಕದ ನಂತರ ಟೀಮ್ ಇಂಡಿಯಾ ಪಾಕಿಸ್ತಾನ ಪ್ರವಾಸವನ್ನು 2004ರಲ್ಲಿ ಕೈಗೊಂಡಿತ್ತು. ಕ್ರಿಕೆಟ್ ಮಾತ್ರವಲ್ಲದೆ ಎರಡು ದೇಶಗಳ ನಡುವಿನ ಸಂಬಂಧ ವೃದ್ಧಿಗೆ ಈ ಸರಣಿ ಬೆಸುಗೆಯಾಗುವ ನಿರೀಕ್ಷೆಯಿತ್ತು. ಆದರೆ ಈ ಮಹತ್ವಾಕಂಕ್ಷೆಯ ಟೂರ್ನಿಗೆ ಬಿಸಿಸಿಐ ಮನಸಿರಲಿಲ್ಲ. ಆದರೆ ಗಂಗೂಲಿಯಿಂದಾಗಿ ಈ ಟೂರ್ನಿ ಆಯೋಜನೆಯಾಗಿತ್ತು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಪಾಕಿಸ್ತಾನ ಮತ್ತು ಭಾರತದ ನಡುವಿನ ಐತಿಹಾಸಿಕ ಸರಣಿಯ ಬಗ್ಗೆ ಮಾತನಾಡಿದ್ದಾರೆ. ಆಗ ಟೀಮ್ ಇಂಡಿಯಾ ನಾಯಕ ಸೌರವ್ ಗಂಗೂಲಿ ಮನಸು ಮಾಡಿರದಿದ್ದರೆ ಆ ಸರಣಿ ನಡೆಯುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ವಿರುದ್ಧದ ಸರಣಿ ನಡೆಯಲು ಸೌರವ್ ಗಂಗೂಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಭಾರತ ಈ ಸರಣಿಗೆ ಪಾಕಿಸ್ತಾನಕ್ಕೆ ತೆರಳಲು ಬಿಸಿಸಿಐಗೆ ಇಷ್ಟವಿರಲಿಲ್ಲ. ಆದರೆ ಬಿಸಿಸಿಐ ಹಾಗೂ ಟೀಮ್ ಇಂಡಿಯಾ ಆಟಗಾರರನ್ನು ಸೌರವ್ ಗಂಗೂಲಿ ಸ್ವತಃ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪಾಕಿಸ್ತಾನ ಮಾಜಿ ವಿಕೆಟ್ ಕೀಪರ್ ರಶೀದ್ ಲತೀಫ್ ಭಾರತದ ಜೊತೆ ಪಾಕಿಸ್ತಾಮ ಮತ್ತೆ ದ್ವಿಪಕ್ಷೀಯ ಸರಣಿ ಆಯೋಜನೆ ನಡೆಸುವ ಕುರಿತು ಮಾತುಕತೆಯನ್ನು ನಡೆಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬಿಸಿಸಿಐಯನ್ನು ಸೌರವ್ ಗಂಗೂಲಿ ಮುನ್ನಡೆಸುತ್ತಿದ್ದು ಪಿಸಿಬಿ ಅಧ್ಯಕ್ಷರು ಮಾತುಕತೆಗೆ ಮುಂದಾದರೆ ಗಂಗೂಲಿ ಸಹಕಾರ ನೀಡಬಹುದು ಎಂಬ ಮಾತನ್ನೂ ಹೇಳಿದ್ದಾರೆ.
ಈ ಐತಿಹಾಸಿಕ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 3-2 ಅಂತರದಿಂದ ಗೆದ್ದು ಬೀಗಿತ್ತು. ಟೆಸ್ಟ್ ಸರಣಿಯನ್ನು 2-1 ಅಂತರದಿಂದ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಮತ್ತೆ ಪಾಕಿಸ್ತಾನ ಭಾರತದ ಮಧ್ಯೆ ಸಂಬಂಧ ಹಳಸಿದ ಬಳಿಕ ಎರಡೂ ತಂಡಗಳು ಐಸಿಸಿಯ ಟೂರ್ನಿಗಳನ್ನು ಬಿಟ್ಟರೆ ಯಾವ ಸಂದರ್ಭದಲ್ಲೂ ಮುಖಾಮುಖಿಯಾಗುತ್ತಿಲ್ಲ.