
ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ವೃದ್ದಿಮಾನ್ ಸಾಹಾ ಅವರ ಇತ್ತೀಚಿನ ಟ್ವೀಟ್ ಹಲವು ವಿವಾದಾತ್ಮಕ ಚರ್ಚೆಗೆ ಎಡೆಮಾಡಿಕೊಟ್ಟಿತು. ಈ ಹಿನ್ನಲೆಯಲ್ಲಿ ಸಾಹಾ ಟ್ವೀಟ್ಗೆ ಸಂಬಂಧಿಸಿದಂತೆ ಬಿಸಿಸಿಐ ವಿಚಾರಣೆ ನಡೆಸಲಿದ್ದು, ಶ್ರೀಘ್ರ ತನಿಖೆ ನಡೆಯಲಿದೆ ಎಂದು ಬಿಸಿಸಿಐ ಖಜಾಂಜಿ ಅರುಣ್ ಧುಮಾಲ್ ಹೇಳಿದ್ದಾರೆ.
ಅನುಭವಿ ವಿಕೆಟ್ ಕೀಪರ್ ವೃದ್ದಿಮಾನ್ ಸಾಹಾ ಹಾಗೂ ಪತ್ರಕರ್ತರೊಂದಿಗಿನ ಸಂಭಾಷಣೆಯ ಸ್ಕ್ರೀನ್ಶಾಟ್ ಅನ್ನು ಸಾಹಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಪತ್ರಕರ್ತನ ಬೆದರಿಕೆಯಿಂದ ಬೇಸರಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ರು, ಆದ್ರೆ ಆತನ ಹೆಸರನ್ನು ಮಾತ್ರ ಬಹಿರಂಗಪಡಿಸಿರಲಿಲ್ಲ. ಹೀಗಾಗಿ ಈ ಕುರಿತಾಗಿ ತುರ್ತಾಗಿ ತನಿಖೆ ನಡೆಸಬೇಕೆಂದು ಅನೇಕ ಮಾಜಿ ಕ್ರಿಕೆಟಿಗರು ಆಗ್ರಹಿಸಿದ್ದರು.
ಹೀಗಾಗಿ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುವಂತೆ ಸಾಹಾ ಅವರನ್ನು ಭಾರತೀಯ ಕ್ರಿಕೆಟ್ ಮಂಡಳಿಯು ಕೇಳಲು ಪ್ರಾರಂಭಿಸಿದೆ.
"ಹೌದು, ನಾವು ವೃದ್ಧಿಮಾನ್ ಅವರ ಟ್ವೀಟ್ ಬಗ್ಗೆ ಮತ್ತು ಸಂಭವಿಸಿದ ನೈಜ ಘಟನೆ ಏನು ಎಂದು ಕೇಳುತ್ತೇವೆ" ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಇಎಸ್ಪಿಎನ್ ಕ್ರಿಕ್ಇನ್ಫೋಗೆ ತಿಳಿಸಿದ್ದಾರೆ.
"ಅವರಿಗೆ ಬೆದರಿಕೆ ಇದೆಯೇ ಮತ್ತು ಅವರ ಟ್ವೀಟ್ನ ಹಿನ್ನೆಲೆ ಮತ್ತು ಸಂದರ್ಭವನ್ನು ನಾವು ತಿಳಿದುಕೊಳ್ಳಬೇಕು. ನಾನು ಹೆಚ್ಚಿಗೆ ಏನನ್ನೂ ಹೇಳಲಾರೆ. ಕಾರ್ಯದರ್ಶಿ (ಜಯ್ ಷಾ) ಖಂಡಿತವಾಗಿಯೂ ವೃದ್ಧಿಮಾನ್ ಅವರೊಂದಿಗೆ ಮಾತನಾಡುತ್ತಾರೆ, "ಎಂದು ಅವರು ಹೇಳಿದರು.
ಏತನ್ಮಧ್ಯೆ, ಸಹಾ ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗಲು ಮತ್ತೊಂದು ಕಾರಣವೆಂದರೆ ಅವರ ಮತ್ತು ರಾಹುಲ್ ದ್ರಾವಿಡ್ ನಡುವಿನ ಸಂಭಾಷಣೆಯನ್ನ ಬಹಿರಂಗಪಡಿಸಿರುವುದು. 37 ವರ್ಷದ ಸಾಹಾಗೆ, ರಾಷ್ಟ್ರೀಯ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನಿವೃತ್ತಿಯ ಬಗ್ಗೆ ಯೋಚಿಸುವಂತೆ ಸೂಚಿಸಿದ್ದಾರೆ ಎಂದು ಬಹಿರಂಗಪಡಿಸಿದರು. ಮತ್ತೊಂದೆಡೆ, ಕಳೆದ ವರ್ಷ ನವೆಂಬರ್ನಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ತಂಡದಲ್ಲಿ ಸ್ಥಾನ ಖಾಯಂಗೊಳಿಸುವ ಭರವಸೆ ನೀಡಿದ್ದರು.
ದ್ರಾವಿಡ್ ನಿವೃತ್ತಿ ತೆಗೆದುಕೊಳ್ಳಲು ಸಲಹೆ ನೀಡಿದ್ದರು
"ಹೌದು, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ನ ಆಯ್ಕೆ ಸಮಿತಿಯವರು ನನ್ನನ್ನು ಮುಂದಿನ ಸರಣಿಗೆ ಆಯ್ಕೆ ಮಾಡುತ್ತಿಲ್ಲ ಎಂದು ಮೊದಲೇ ಹೇಳಿದ್ದರು. ಹೀಗಾಗಿ ತಂಡ ಪ್ರಕಟವಾಗುವ ಮುನ್ನ ಈ ಬಗ್ಗೆ ನಾನು ಎಲ್ಲಿಯೂ ಮಾತನಾಡುವಂತ್ತಿರಲಿಲ್ಲ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ನನಗೆ ನಿವೃತ್ತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು. ನ್ಯೂಜಿಲೆಂಡ್ ವಿರುದ್ಧ ಕಳೆದ ನವೆಂಬರ್ನಲ್ಲಿ ನಡೆದ ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ನೋವಿನ ನಡುವೆಯೂ ಪೇಯ್ನ್ ಕಿಲ್ಲರ್ಗಳನ್ನು ತೆಗೆದುಕೊಂಡು ಬ್ಯಾಟ್ ಮಾಡಿ 61 ರನ್ ಗಳಿಸಿದ್ದಾಗ ಸೌರವ್ ಗಂಗೂಲಿ ನನಗೆ ವಾಟ್ಸ್ಆಪ್ ಮೂಲಕ ಶುಭ ಕೋರಿ ಉತ್ತಮ ಆಟ ಆಡಿದ್ದೀರಿ ಎಂದು ಪ್ರಶಂಸಿಸಿದ್ದರು. ಬಿಸಿಸಿಐನ ಪ್ರಧಾನ ಹುದ್ದೆಯಲ್ಲಿ ತಾವು ಇರುವವರೆಗೂ ಭಾರತ ತಂಡದಲ್ಲಿನ ಸ್ಥಾನದ ಬಗ್ಗೆ ಚಿಂತಿಸಬೇಡ ಎಂದಿದ್ದರು. ಬಿಸಿಸಿಐ ಅಧ್ಯಕ್ಷರಿಂದ ಈ ಮಾತುಗಳನ್ನು ಕೇಳಿ ನನ್ನ ಆತ್ಮವಿಶ್ವಾಸ ಹೆಚ್ಚಾಗಿತ್ತು. ಆದರೆ, ಇವೆಲ್ಲವೂ ಶೀಘ್ರವೇ ಬದಲಾಗಲಿದೆ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ," ಎಂದು ಸಾಹ ಹೇಳಿದ್ದರು.
ಶ್ರೀಲಂಕಾ ವಿರುದ್ಧದ ಟೆಸ್ಟ್ಗೆ ವೃದ್ದಿಮಾನ್ ಸಾಹ ಜಾಗದಲ್ಲಿ ಕೆ.ಎಸ್ ಭರತ್ ಅವರನ್ನು ಆಯ್ಕೆ ಮಾಡಲಾಗಿದೆ. 2010ರಲ್ಲೇ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ಸಹಾ, 2014ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಎಂ.ಎಸ್ ಧೋನಿ ಹಠಾತ್ ನಿವೃತ್ತಿ ಘೋಷಿಸಿದ ಬಳಿಕ ಭಾರತ ಟೆಸ್ಟ್ ತಂಡದ ಖಾಯಂ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಂಡರು.