ಭಾರತದಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್ ಕ್ರೇಜ್ ಜಾಸ್ತಿಯಾಗುತ್ತಿದೆ. ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ ಐಸಿಸಿ ಟೂರ್ನಿಗೆ ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಂದ ಟಿಕೆಟ್ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.
2023ರ ಐಸಿಸಿ ಏಕದಿನ ವಿಶ್ವಕಪ್ಗಾಗಿ ಟಿಕೆಟ್ ಕಾಯ್ದಿರಿಸುವಾಗ ಭಾರತ ತಂಡದ ಅಭಿಮಾನಿಗಳು ದೊಡ್ಡ ತೊಂದರೆಗಳನ್ನು ಎದುರಿಸಿದ ಬಳಿಕ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇದೀಗ ಸಂತಸದ ಸುದ್ದಿ ನೀಡಿದೆ.

ವಿಶ್ವಕಪ್ ಪಂದ್ಯಾವಳಿಗಾಗಿ ಬಿಸಿಸಿಐ ಒಟ್ಟು 4 ಲಕ್ಷ ಟಿಕೆಟ್ಗಳನ್ನು ಬಿಡುಗಡೆ ಮಾಡಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಸಾಧ್ಯವಾದಷ್ಟು ಹೆಚ್ಚಿನ ಅಭಿಮಾನಿಗಳಿಗೆ ಅವಕಾಶ ಕಲ್ಪಿಸುವುದು ಆದ್ಯತೆಯಾಗಿದೆ ಎಂದು ಬಿಸಿಸಿಐ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
2023ರ ಸೆಪ್ಟೆಂಬರ್ 8ರ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ವಿಶ್ವಕಪ್ಗಾಗಿ ಟಿಕೆಟ್ಗಳ ಸಾಮಾನ್ಯ ಮಾರಾಟ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಟಿಕೆಟ್ಗಳನ್ನು https://tickets.cricketworldcup.com ನಲ್ಲಿ ಖರೀದಿಸಬಹುದಾಗಿದೆ.
"ಅಭಿಮಾನಿಗಳು ಪಂದ್ಯಾವಳಿಯ ಹೃದಯ ಬಡಿತ ಎಂದು ಬಿಸಿಸಿಐ ಆಳವಾಗಿ ಒಪ್ಪಿಕೊಳ್ಳುತ್ತದೆ ಮತ್ತು ಅವರ ಅಚಲವಾದ ಉತ್ಸಾಹ, ಪಾಲ್ಗೊಳ್ಳುವಿಕೆ ಮತ್ತು ಕೊಡುಗೆಗಳು 2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಯಶಸ್ಸಿಗೆ ಪ್ರಮುಖವಾಗಿವೆ," ಎಂದು ಬಿಸಿಸಿಐ ತಿಳಿಸಿದೆ.
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ದೇಶದ 10 ತಾಣಗಳಲ್ಲಿ ನಡೆಯಲಿರುವ ಈ ಅತಿದೊಡ್ಡ ಕ್ರಿಕೆಟ್ ವಿಶ್ವಕಪ್ನಲ್ಲಿ ಒಟ್ಟು ಹತ್ತು ತಂಡಗಳು ಭಾಗವಹಿಸುತ್ತಿವೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಪಂದ್ಯಾವಳಿಯ ಉದ್ಘಾಟನಾ ಮತ್ತು ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

ಐಸಿಸಿ ಟೂರ್ನಿಯು 46 ದಿನಗಳಲ್ಲಿ 48 ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್ 5ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2019ರ ಫೈನಲಿಸ್ಟ್ ತಂಡಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಸೆಣಸಾಡುವ ಮೂಲಕ ಚಾಲನೆ ನೀಡಲಿವೆ.
ನವೆಂಬರ್ 19ರ ಭಾನುವಾರದಂದು ಅದೇ ಮೈದಾನದಲ್ಲಿ ಫೈನಲ್ ಪಂದ್ಯದ ಮೂಲಕ ಪಂದ್ಯಾವಳಿ ಕೊನೆಗೊಳ್ಳುತ್ತದೆ. ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ಭಾರತ ತಂಡ ತನ್ನ ಅಭಿಯಾನ ಪ್ರಾರಂಭಿಸಲಿದೆ.
ಇನ್ನು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ, ಅಕ್ಟೋಬರ್ 14ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಹೊರಗಡೆ ಮಾರುಕಟ್ಟೆಯಲ್ಲಿ ಒಂದು ಟಿಕೆಟ್ ಬೆಲೆ 57 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಬೆಲೆಯಿದೆ ಎಂದು ವರದಿಯಾಗಿದ್ದವು.
ಇದಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಪೋಸ್ಟ್ ಮಾಡಿ ಬಿಸಿಸಿಐ ವಿರುದ್ಧ ಕಿಡಿಕಾರಿದರು ಮತ್ತು ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿದರು.
ಭಾರತ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು ವಿಶ್ವಕಪ್ ಟಿಕೆಟ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು. ಸದ್ಯ ಇರುವ ವ್ಯವಸ್ಥೆಯನ್ನು ಟೀಕಿಸಿದ ವೆಂಕಟೇಶ್ ಪ್ರಸಾದ್, ಬಿಸಿಸಿಐ ಅಭಿಮಾನಿಗಳಿಗೆ ಸಾಧ್ಯವಾದಷ್ಟು ಟಿಕೆಟ್ಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು, ಅವರನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂದು ತಿಳಿಸಿದ್ದರು.
"ವಿಶ್ವಕಪ್ ಟಿಕೆಟ್ಗಳನ್ನು ಪಡೆಯುವುದು ಎಂದಿಗೂ ಸುಲಭವಲ್ಲ. ಆದರೆ ಈ ಬಾರಿ ಮೊದಲಿಗಿಂತ ಕಠಿಣವಾಗಿದೆ. ಉತ್ತಮವಾಗಿ ಯೋಜಿಸಬಹುದಿತ್ತು ಮತ್ತು ಟಿಕೆಟ್ಗಳನ್ನು ಪಡೆಯಲು ಹೆಚ್ಚಿನ ನಿರೀಕ್ಷೆ ಹೊಂದಿದ್ದ ಅಭಿಮಾನಿಗಳು ತಮ್ಮ ಮೌಲ್ಯವನ್ನು ಪಡೆಯುತ್ತಾರೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ಬಿಸಿಸಿಐ ಅಭಿಮಾನಿಗಳಿಗೆ ಸುಲಭವಾಗಿ ಟಿಕೆಟ್ ಸಿಗುವಂತೆ ಮಾಡಬೇಕು," ಎಂದು ವೆಂಕಟೇಶ್ ಪ್ರಸಾದ್ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದರು.