ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆಟಗಾರರ ಗಾಯದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದ ಬೆನ್ಸ್ಟೋಕ್ಸ್ ಏಪ್ರಿಲ್ 27ರವರೆಗೂ ಐಪಿಎಲ್ ಪಂದ್ಯಗಳಿಗೆ ಲಭ್ಯವಿಲ್ಲ ಎಂದು ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದಾರೆ. ಏಪ್ರಿಲ್ 17ರಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕೂ ಅವರು ಅಲಭ್ಯರಾಗಲಿದ್ದಾರೆ.
ಸದ್ಯ ಗಾಯದ ಸಮಸ್ಯೆ ಹೊಂದಿರುವ ಬೆನ್ಸ್ಟೋಕ್ಸ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಿಇಒ ಕಾಸಿ ವಿಶ್ವನಾಥನ್ ಅವರು ಉಳಿದ ಋತುವಿನಲ್ಲಿ ಸ್ಟೋಕ್ಸ್ ಲಭ್ಯತೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಬೆನ್ಸ್ಟೋಕ್ಸ್ ಕನಿಷ್ಠ ಮೂರು ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಏಪ್ರಿಲ್ 27ರಂದು ನಡೆಯುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಆಡಬಹುದು ಎಂದು ವಿಶ್ವನಾಥನ್ ಹೇಳಿದರು. ಅದನ್ನು ತಪ್ಪಿಸಿಕೊಂಡರೆ ಏಪ್ರಿಲ್ 30ರಂದು ತವರಿನಲ್ಲಿ ನಡೆಯುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಆಡುತ್ತಾರೆ ಎಂದು ಹೇಳಿದರು.

ಇಂಗ್ಲೆಂಡ್ ಟೆಸ್ಸ್ ತಂಡದ ನಾಯಕನಾಗಿರುವ ಬೆನ್ ಸ್ಟೋಕ್ಸ್ ಜೂನ್-ಜುಲೈನಲ್ಲಿ ನಡೆಯುವ ಆಶಸ್ ಸರಣಿಯಲ್ಲಿ ಫಿಟ್ ಆಗಿರುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಸಂಪೂರ್ಣವಾಗಿ ಫಿಟ್ ಆಗದ ಹೊರತು ಪಂದ್ಯವನ್ನು ಆಡುವುದಿಲ್ಲ ಎಂದು ನಿರ್ಧರಿಸಿದ್ದಾರೆ. ಆಶಸ್ ಸರಣಿಯಲ್ಲಿ ನಾಲ್ಕನೇ ವೇಗದ ಬೌಲರ್ ಆಗಿ ಆಡಬೇಕು ಎಂದು ಅವರು ನಿರ್ಧರಿಸಿದ್ದು, ಫಿಟ್ನೆಸ್ ಕಡೆ ಹೆಚ್ಚಿನ ಗಮನ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರರೇ ಗಾಯಗೊಳ್ಳುತ್ತಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ದೀಪಕ್ ಚಾಹರ್ ಮೇ ತಿಂಗಳಿನಲ್ಲಿ ಫಿಟ್ ಆಗುವ ಸಾಧ್ಯತೆ ಇದ್ದು, ಕೆಲವು ಪಂದ್ಯಗಳಲ್ಲಿ ಆಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿಸಾಂದ ಮಗಾಲ ಕೂಡ ಇನ್ನು ಎರಡು ವಾರ ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ.

ತಂಡದ ನಾಯಕ ಎಂಎಸ್ ಧೋನಿ ಕೂಡ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಬುಧವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಮೊಣಕಾಲು ನೋವಿನಿಂದ ಬಳಲಿದರು. ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ರನ್ ಓಡುವಾಗ ಕುಂಟುತ್ತಾ ಓಡುತ್ತಿದ್ದರು. ಪಂದ್ಯದ ನಂತರ ನಡೆಯುವಾಗ ಕೂಡ ಅವರು ಮೊಣಕಾಲು ನೋವಿನಿಂದ ಬಳಲುತ್ತಿದ್ದದ್ದು ಸ್ಪಷ್ಟವಾಗಿತ್ತು.
ಪಂದ್ಯದ ಬಳಿಕ ಮಾತನಾಡಿದ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಕೂಡ ಧೋನಿ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ ಎಂದು ಒಪ್ಪಿಕೊಂಡರು. ಐಪಿಎಲ್ ಆರಂಭಕ್ಕೆ ಒಂದು ತಿಂಗಳ ಮುನ್ನವೇ ಅವರು ಅಭ್ಯಾಸ ಆರಂಭಿಸಿದ್ದರು. ಅಭ್ಯಾಸ ಪಂದ್ಯದ ವೇಳೆಯೇ ಅವರು ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಆದರೂ ಧೋನಿ ಎಲ್ಲಾ ಪಂದ್ಯಗಳಲ್ಲೂ ಆಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಪಂದ್ಯವನ್ನು ಏಪ್ರಿಲ್ 17ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಈ ಪಂದ್ಯ ನಡೆಯಲಿದ್ದು, ಸಿಎಸ್ಕೆ ತಂಡದ ಪ್ರಮುಖ ಆಟಗಾರರು ಅಲಭ್ಯರಾಗಲಿದ್ದಾರೆ. ಸಿಸಾಂದ ಮಗಾಲ, ಬೆನ್ಸ್ಟೋಕ್ಸ್ ಅಲಭ್ಯರಾಗಿದ್ದು, ಧೋನಿ ಕಣಕ್ಕಿಳಿಯುವುದು ಖಚಿತ ಎನ್ನಲಾಗಿದೆ. ಐಪಿಎಲ್ ಆರಂಭಕ್ಕೆ ಮುನ್ನ ತಂಡದ ಪ್ರಮುಖ ಬೌಲರ್ ಕೈಲ್ ಜೇಮಿಸನ್ ಗಾಯದ ಕಾರಣ ಐಪಿಎಲ್ನಿಂದ ಹೊರಗುಳಿದರು.