
ಕಟಕ್, ಫೆಬ್ರವರಿ 22: ರೋಹನ್ ಕದಮ್ ಮತ್ತು ಶರತ್ ಬಿಆರ್ ಅರ್ಧಶತಕದ ನೆರವಿನಿಂದ ಕಟಕ್ನ ಡ್ರೀಮ್ಸ್ ಗ್ರೌಂಡ್ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2ನೇ ಸುತ್ತಿನ ಗ್ರೂಪ್ 'ಡಿ' ಟಿ20 ಪಂದ್ಯದಲ್ಲಿ ಬೆಂಗಾಲ್ ವಿರುದ್ಧ ಕರ್ನಾಟಕ ತಂಡ ಭರ್ಜರಿ 9 ವಿಕೆಟ್ ಗಳ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಬೆಂಗಾಲ್ ತಂಡ 19.4 ಓವರ್ಗೆ ಎಲ್ಲಾ ವಿಕೆಟ್ ಕಳೆದು 131 ರನ್ ಗಳಿಸಿತು. ಶ್ರೀವತ್ಸ ಗೋಸ್ವಾಮಿ 40, ನಾಯಕ ಮನೋಜ್ ತಿವಾರಿ 36 ರನ್ ಸೇರಿಸಿ ತಂಡವನ್ನು ತಕ್ಕ ಮಟ್ಟಿಗೆ ಬೆಂಬಲಿಸಿದರು. ಗುರಿ ಬೆನ್ನಟ್ಟಿದ ರಾಜ್ಯ ತಂಡ 15.5 ಓವರ್ಗೆ 1 ವಿಕೆಟ್ ನಷ್ಟದೊಂದಿಗೆ 134 ರನ್ ಪೇರಿಸಿ ಗೆಲುವನ್ನಾಚರಿಸಿತು.
ಕರ್ನಾಟಕದ ಗೆಲುವಿನ ರುವಾರಿಗಳಾಗಿ ರೋಹನ್, ಶರತ್ ಮಿಂಚಿದರು. ರೋಹನ್ ಅಜೇಯ 81 ರನ್ ಬಾರಿಸಿದರೆ, ಶರತ್ ಭರ್ತಿ 50 ರನ್ಗಳ ಕೊಡುಗೆ ನೀಡಿದರು. ಬೆಂಗಾಲ್ ಇನ್ನಿಂಗ್ಸ್ ವೇಳೆ ರಾಜ್ಯದ ಅಭಿಮನ್ಯು ಮಿಥುನ್ 3, ವಿನಯ್ ಕುಮಾರ್ ಮತ್ತು ಮನೋಜ್ ಎಸ್ ಭಂಡಾಜೆ ತಲಾ 2 ವಿಕೆಟ್ನೊಂದಿಗೆ ಮಿಂಚಿದರು.