
ಬೆಂಗಳೂರು, ಆಗಸ್ಟ್ 6: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎ ವಿರುದ್ಧದ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ಭಾರತ 'ಎ' ತಂಡ ಗೆಲುವಿನ ಸನಿಹ ಬಂದಿದೆ.
ಮೊದಲ ಇನ್ನಿಂಗ್ಸ್ನಲ್ಲಿ 338 ರನ್ಗಳ ಬೃಹತ್ ಮುನ್ನಡೆ ಪಡೆದ ಭಾರತ 'ಎ', ದಕ್ಷಿಣ ಆಫ್ರಿಕಾದ ಎರಡನೆಯ ಇನ್ನಿಂಗ್ಸ್ನಲ್ಲಿ 99 ರನ್ಗಳಿಗೆ 4 ವಿಕೆಟ್ ಕಬಳಿಸಿದೆ. ವೇಗಿ ಮೊಹಮ್ಮದ್ ಸಿರಾಜ್ ದಾಳಿಗೆ ಕುಸಿದಿರುವ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನೂ 239 ರನ್ ಗಳಿಸಬೇಕಿದೆ.
ಭಾರತವು ನಾಲ್ಕನೆಯ ಹಾಗೂ ಕೊನೆಯ ದಿನವಾದ ಮಂಗಳವಾರ ಉಳಿದ ಆರು ವಿಕೆಟ್ಗಳನ್ನು ಕಿತ್ತು ಜಯದ ಮಾಲೆಯನ್ನು ಕೊರಳಿಗೆ ಹಾಕಿಕೊಳ್ಳುವ ಉತ್ಸಾಹದಲ್ಲಿದೆ.
ಭಾನುವಾರ 220 ರನ್ಗಳಿಸಿ ಅಜೇಯರಾಗಿದ್ದ ಮಯಂಕ್ ಅಗರ್ವಾಲ್, ಸೋಮವಾರ ಬೆಳಿಗ್ಗೆ ಒಂದೂ ರನ್ ಸೇರಿಸದೆ ಅದೇ ಮೊತ್ತಕ್ಕೆ ಔಟಾದರು.
ಹನುಮ ವಿಹಾರಿ ಮತ್ತು ಶ್ರೀಕರ್ ಭರತ್ ಅವರ ಅರ್ಧಶತಕದ ಕಾಣಿಕೆ ನೀಡಿದರು. 584 ರನ್ಗೆ 8ನೇ ವಿಕೆಟ್ ಪತನಗೊಂಡಾಗ ನಾಯಕ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.
ಎರಡನೆಯ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಆರಂಭದಲ್ಲಿಯೇ ಆಘಾತ ಎದುರಿಸಿತು. ಸಿರಾಜ್ ದಾಳಿಗೆ ಕೇವಲ 6 ರನ್ಗೆ 3 ವಿಕೆಟ್ ಕಳೆದುಕೊಂಡು ಕಂಗೆಟ್ಟಿತು.
ಈ ಹಂತದಲ್ಲಿ ಜುಬಾಯರ್ ಹಮ್ಜಾ ಮತ್ತು ಸೆನುರನ್ ಮುತ್ತುಸಾಮಿ ಆಸರೆಯಾದರು. ತಂಡದ ಮೊತ್ತ 92 ಆಗಿದ್ದಾಗ 41 ರನ್ ಗಳಿಸಿದ್ದ ಮುತ್ತುಸ್ವಾಮಿ ವಿಕೆಟ್ ಒಪ್ಪಿಸಿದರು.
46 ರನ್ ಗಳಿಸಿರುವ ಹಮ್ಜಾ ಮತ್ತು 4 ರನ್ ಗಳಿಸಿರುವ ರೂಡಿ ಸೆಕೆಂಡ್ ಕ್ರೀಸ್ನಲ್ಲಿದ್ದಾರೆ.
ಭಾರತದ ಪರ ಎಲ್ಲ ನಾಲ್ಕು ವಿಕೆಟ್ಗಳು ಮೊಹಮ್ಮದ್ ಸಿರಾಜ್ ಪಾಲಾಗಿವೆ.