ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಡೆಯುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ.
ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಂ ಚಿನ್ನಸ್ವಾಮಿ ಸ್ಟೇಡಿಯಂ ಒಟ್ಟು ಐದು ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಪ್ರೇಕ್ಷಕರಿಗೆ ಉನ್ನತ ಮಟ್ಟದ ಕ್ರಿಕೆಟ್ ಅನುಭವ ನೀಡಲು ಅಗತ್ಯ ಸೌಲಭ್ಯಗಳನ್ನು ಸ್ಥಾಪಿಸಲಾಗುತ್ತಿದೆ.

"ಕೆಲವು ದಿನಗಳ ಹಿಂದೆ ಐಸಿಸಿ ನಿಯೋಗದ ಪರಿಶೀಲನೆ ಬಳಿಕ ಸ್ಟ್ಯಾಂಡ್ಗಳನ್ನು ನವೀಕರಿಸುವುದು, ಕೆಲವು ಹೊಸ ಆಸನಗಳನ್ನು ಸ್ಥಾಪಿಸುವುದು ಮತ್ತು ಕ್ರೀಡಾಂಗಣದಲ್ಲಿ ಶೌಚಾಲಯಗಳನ್ನು ನವೀಕರಿಸುವುದು ಮುಂತಾದ ಅಗತ್ಯ ನವೀಕರಣ ಕಾರ್ಯಗಳನ್ನು ನಾವು ಪ್ರಾರಂಭಿಸಿದ್ದೇವೆ," ಎಂದು ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್ ತಿಳಿಸಿದರು.
"ಕ್ರೀಡಾಂಗಣದಲ್ಲಿ ಸಾಧ್ಯವಾದಷ್ಟು ಉತ್ತಮವಾದ ಸೌಲಭ್ಯಗಳನ್ನು ವ್ಯವಸ್ಥೆ ಮಾಡುವುದು ನಮ್ಮ ಗುರಿಯಾಗಿದೆ. ನಾವು ಇಲ್ಲಿ ಉನ್ನತ ದರ್ಜೆಯ ಸೌಲಭ್ಯಗಳನ್ನು ಹೊಂದಿದ್ದೇವೆ," ಎಂದು ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್ ಗುರುವಾರ ಕೆಎಸ್ಸಿಎ ಮಹಾರಾಜ ಟ್ರೋಫಿ ಟಿ20 ಅನಾವರಣ ಕಾರ್ಯಕ್ರಮದ ನಂತರ ತಿಳಿಸಿದರು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ವಿಶ್ವಕಪ್ನಲ್ಲಿ ಅಕ್ಟೋಬರ್ 20ರಂದು ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯ, ಅಕ್ಟೋಬರ್ 26ರಂದು ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಪಂದ್ಯ, ನವೆಂಬರ್ 4ರಂದು ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ, ನವೆಂಬರ್ 9ರಂದು ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಮತ್ತು ನವೆಂಬರ್ 12ರಂದು ನೆದರ್ಲ್ಯಾಂಡ್ಸ್ ವಿರುದ್ಧ ಆತಿಥೇಯ ಭಾರತದ ಪಂದ್ಯ ನಡೆಯಲಿವೆ.
ಕ್ರೀಡಾಂಗಣದ ಸಿದ್ಧತೆಗಳನ್ನು ಪರಿಶೀಲಿಸಲು ಐಸಿಸಿ ಇತ್ತೀಚೆಗೆ ತಪಾಸಣಾ ತಂಡವನ್ನು ಬೆಂಗಳೂರಿಗೆ ಕಳುಹಿಸಿತ್ತು. ಮೈದಾನವು ವಿಶ್ವಕಪ್ ಪಂದ್ಯದ ಸಿದ್ಧತೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದು, ಐಸಿಸಿ ಸದಸ್ಯರು ಅಸ್ತಿತ್ವದಲ್ಲಿರುವ ಸೌಲಭ್ಯಗಳಿಗೆ ಕೆಲವು ಸಣ್ಣ ಮಾರ್ಪಾಡುಗಳನ್ನು ಸೂಚಿಸಿದ್ದಾರೆ.
ಐಸಿಸಿ ವಿಶ್ವಕಪ್ನ ಹೊರತಾಗಿ, ಮುಂಬರುವ ತಿಂಗಳುಗಳಲ್ಲಿ ಎಂ ಚಿನ್ನಸ್ವಾಮಿ ಸ್ಟೇಡಿಯಂ ತುಂಬಲಿದೆ. ಹಲವು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ತಂಡಗಳು ಆಫ್-ಸೀಸನ್ ತರಬೇತಿಗಾಗಿ ಬೆಂಗಳೂರು ನಗರಕ್ಕೆ ಬಂದಿಳಿಯಲಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ ತಂಡ ಯುಪಿ ವಾರಿಯರ್ಜ್ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒಂದು ವಾರದ ತರಬೇತಿಯನ್ನು ಪೂರ್ಣಗೊಳಿಸಿದೆ. ಬಳಿಕ ಗುಜರಾತ್, ಬರೋಡಾ ಮತ್ತು ಛತ್ತೀಸ್ಗಢ ರಾಜ್ಯ ತಂಡಗಳು ಮುಂಬರುವ ವಾರಗಳಲ್ಲಿ ಅಭ್ಯಾಸ ಪಂದ್ಯಗಳಿಗಾಗಿ ಇಲ್ಲಿಗೆ ಆಗಮಿಸಲಿವೆ.
ಏತನ್ಮಧ್ಯೆ, ಮುಂಬರುವ ಆಗಸ್ಟ್ 13ರಿಂದ ಅಗಸ್ಟ್ 29ರ ನಡುವೆ ನಡೆಯಲಿರುವ ಕೆಎಸ್ಸಿಎ ಟಿ20 ಮಹಾರಾಜ ಟ್ರೋಫಿ ಪಂದ್ಯಾವಳಿ ನಡೆಯಲಿದೆ. ಪಂದ್ಯವನ್ನು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಯು) ಮೇಲ್ವಿಚಾರಣೆ ಮಾಡುತ್ತದೆ ಎಂದು ಕೆಎಸ್ಸಿಎ ಉಪಾಧ್ಯಕ್ಷ ಸಂಪತ್ ಕುಮಾರ್ ಹೇಳಿದ್ದಾರೆ.
"ಕ್ರಿಕೆಟ್, ಪಂದ್ಯಾವಳಿ ಮತ್ತು ಕೆಎಸ್ಸಿಎ ಸಂಸ್ಥೆಗೆ ಯಾವುದೇ ಅಪಖ್ಯಾತಿ ಬರಬಾರದು ಎಂದು ನಾವು ಬಯಸುತ್ತೇವೆ," ಎಂದು ಸಂಪತ್ ಕುಮಾರ್ ತಿಳಿಸಿದರು.
ಕೆಎಸ್ಸಿಎ ಟಿ20 ಮಹಾರಾಜ ಟ್ರೋಫಿ ಪಂದ್ಯಾವಳಿಯ ಎರಡನೇ ಆವೃತ್ತಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿವೆ. ಈಗಾಗಲೇ ಹರಾಜು ಪ್ರಕ್ರಿಯೆ ಮುಗಿದದೆ.
1. ಬೆಂಗಳೂರು ಬ್ಲಾಸ್ಟರ್ಸ್
2. ಗುಲ್ಬರ್ಗ ಮಿಸ್ಟಿಕ್ಸ್
3. ಹುಬ್ಬಳ್ಳಿ ಟೈಗರ್ಸ್
4. ಮಂಗಳೂರು ಡ್ರಾಗನ್ಸ್
5. ಮೈಸೂರು ವಾರಿಯರ್ಸ್
6. ಶಿವಮೊಗ್ಗ ಲಯನ್ಸ್