
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಟೀಮ್ ಇಂಡಿಯಾಗೆ ಯುವ ಆಟಗಾರ ರಿಷಭ್ ಪಂತ್ ಅಲಭ್ಯತೆ ಬಹುವಾಗಿ ಕಾಡಲಿದೆ ಎಂದು ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಇಯಾನ್ ಚಾಪೆಲ್ ಹೇಳಿದ್ದಾರೆ. ರಿಷಭ್ ಪಂತ್ ಭಾರತ ತಂಡದಲ್ಲಿದ್ದರೆ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡದ ನಿದ್ದೆಗೆಡಿಸುತ್ತಿದ್ದರು ಎಂಬುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ ಚಾಪೆಲ್. ಮುಂದುವರಿದು ಮಾತನಾಡಿರುವ ಚಾಪೆಲ್ ಪಂತ್ ಇಲ್ಲದ ಹೊರತಾಗಿಯೂ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದಿದ್ದಾರೆ.
"ಭಾರತ ನಿಜಕ್ಕೂ ರಿಷಭ್ ಪಂತ್ ಅವರನ್ನು ಮಿಸ್ ಮಾಡಿಕೊಳ್ಳಲಿದೆ. ಆಸ್ಟ್ರೇಲಿಯಾ ತಂಡ ಬಹಳ ಖುಷಿಪಡುತ್ತದೆ. ಆತ ಪ್ರತಿದಾಳಿ ಮಾಡುವಂತಾ ಆಟಗಾರ. ವೇಗವಾಗಿ ರನ್ಗಳಿಸುವ ಸಾಮರ್ಥ್ಯವಿರುವ ಆತ ಒಂದೇ ಸೆಶನ್ನಲ್ಲಿ ಪಂದ್ಯದ ಗತಿಯನ್ನು ಬದಲಿಸಬಲ್ಲ ಆಟಗಾರ. ಪಂತ್ ನಿಜಕ್ಕೂ ಅಪರೂಪದ ಆಟಗಾರ" ಎಂದು ಟೀಮ್ ಇಂಡಿಯಾದ ಯುವ ಆಟಗಾರನ ಬಗ್ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಪ್ರತಿಕ್ರಿಯೆ ನೀಡಿದ್ದಾರೆ.
ಯುವ ಕ್ರಿಕೆಟಿಗ ರಿಷಭ್ ಪಂತ್ ಕಳೆದ ಡಿಸೆಂಬರ್ ತಿಂಗಳಾಂತ್ಯದಲ್ಲಿ ಭೀಕರ ಕಾರು ಅಪಘಾತಕ್ಕೆ ಒಳಗಾಗಿ ಭಾರೀ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ಪಂತ್ ಸದ್ಯ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಶ್ವಿನ್ ಬಗ್ಗೆ ಎಚ್ಚರಿಕೆ ಎಂದ ಚಾಪೆಲ್: ಇನ್ನು ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಇಯಾನ್ ಚಾಪೆಲ್ ಒಂದು ಪ್ರಮುಖ ಸಲಹೆಯನ್ನು ನೀಡಿದ್ದಾರೆ. ಆಸ್ಟ್ರೇಲಿಯಾ ತಂಡಕ್ಕೆ ಭಾರತದ ಸ್ಪಿನ್ನರ್ ಬಹಳ ದೊಡ್ಡ ಅಪಾಯವಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಹಾಗಾಗಿ ಆಸಿಸ್ ಆಟಗಾರರು ಅಶ್ವಿನ್ ವಿರುದ್ಧ ಹೆಚ್ಚು ರಕ್ಷಣಾತ್ಮಕವಾಗಿ ಆಡಬೇಕು ಎಂಬ ಸಲಹೆ ನೀಡಿದ್ದಾರೆ ಚಾಪೆಲ್.
"ಅಶ್ವಿನ್ ಯಾಕೆ ಅಪಾಯಕಾರಿ ಆಟಗಾರ? ಯಾಕೆಂದರೆ ಆತ ಚಾಣಾಕ್ಷ ಕ್ರಿಕೆಟಿಗ. ಅಶ್ವಿನ್ ಯಾವಾಗಲೂ ಅಪಾಯಕಾರಿ ಯಾಗಬಲ್ಲ ಕ್ರಿಕೆಟಿಗ. ಆತ ಬೌಲಿಂಗ್ ಮಾಡುವ ರೀತಿಯಲ್ಲಿಯೇ ಬೌಲಿಂಗ್ ಮಾಡಲು ಬಿಟ್ಟರೆ ನೀವು ಅಪಾಯಕ್ಕೆ ಸಿಲುಕುತ್ತೀರಿ. ಆತ ಆಸ್ಟ್ರೇಲಿಯಾಗೆ ದೊಡ್ಡ ಅಪಾಯವನ್ನುಂಡು ಮಾಡಬಲ್ಲ ಆಟಗಾರ. ಹಾಗಾಗಿ ಹೆಚ್ಚು ರಕ್ಷಣಾತ್ಮಕವಾಗಿರಬೇಕು" ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್.
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
ಇತ್ತಂಡಗಳ ಸ್ಕ್ವಾಡ್
ಆಸ್ಟ್ರೇಲಿಯಾ ತಂಡ ಹೀಗಿದೆ: ಪ್ಯಾಟ್ ಕಮ್ಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್ಕಾಂಬ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾ, ಸ್ಟೀವ್ ಸ್ಮಿತ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್
ಭಾರತದ ಸ್ಕ್ವಾಡ್ ಹೀಗಿದೆ(ಮೊದಲ 2 ಟೆಸ್ಟ್ ಪಂದ್ಯಗಳಿಗೆ): ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ , ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಸೂರ್ಯಕುಮಾರ್ ಯಾದವ್