ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಗಾಗಿ ಭಾರತ ತಂಡ ಭರ್ಜರಿಯಾಗಿ ತಯಾರಿ ನಡೆಸುತ್ತಿದೆ. ಮೊದಲನೇ ಪಂದ್ಯಕ್ಕೆ ತಯಾರಿಯ ಜೊತೆಯಲ್ಲೇ ಪ್ಲೇಯಿಂಗ್ XI ಅಂತಿಮಗೊಳಿಸುವ ಕೆಲಸದಲ್ಲಿದ್ದಾರೆ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್.
ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ತಂಡ ಬಹುತೇಕ ಅಂತಿಮವಾಗಿದೆ. ಆದರೆ, ಪಂತ್ ಸ್ಥಾನಕ್ಕೆ ಬದಲೀ ಆಟಗಾರ ಯಾರಾಗಬೇಕು ಎನ್ನುವ ಚಿಂತೆ ಭಾರತ ತಂಡವನ್ನು ಕಾಡುತ್ತಿದೆ. ಕೆಎಲ್ ರಾಹುಲ್ ವಿಕೆಟ್ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು.
SA 20: ಫಾಫ್ ಡುಪ್ಲೆಸಿಸ್ ನಾಯಕನ ಆಟ: ಜೋಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ಭರ್ಜರಿ ಜಯ
ಮೂಲಗಳ ಪ್ರಕಾರ ಕೆಎಲ್ ರಾಹುಲ್ಗೆ ವಿಕೆಟ್ ಕೀಪಿಂಗ್ ಹೊರೆಯನ್ನು ತಪ್ಪಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ತಂಡಕ್ಕೆ ಆಯ್ಕೆಯಾದರೂ ಒಂದೂ ಪಂದ್ಯವನ್ನಾಡದ ವಿಕೆಟ್ ಕೀಪರ್ ಕೆಎಸ್ ಭರತ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರತ್ ಆಡುವುದು ಬಹುತೇಕ ಖಚಿತವಾಗಿದೆ. ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ತೀರ್ಮಾನ ಮಾಡಿದ್ದು, ನಾಗ್ಪುರ ಟೆಸ್ಟ್ನಲ್ಲಿ ಭರತ್ ಭಾರತ ತಂಡದಲ್ಲಿ ಆಡಲಿದ್ದಾರೆ.
ಟೆಸ್ಟ್ ಪಂದ್ಯದಲ್ಲಿ ರಾಹುಲ್ ವಿಕೆಟ್ ಕೀಪಿಂಗ್ ಸೂಕ್ತವಲ್ಲ
ಕಳೆದ ಒಂದು ವರ್ಷದ ಅವಧಿಯಲ್ಲಿ ಕೆಎಲ್ ರಾಹುಲ್ ಹಲವು ಗಾಯಗಳಿಗೆ ತುತ್ತಾದ ಇತಿಹಾಸ ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ಅವರ ಮೇಲೆ ವಿಕೆಟ್ ಕೀಪಿಂಗ್ ಹೊರೆಯನ್ನು ಹೇರದಿರಲು ತೀರ್ಮಾನಿಸಲಾಗಿದೆ. ಟೆಸ್ಟ್ ಮಾದರಿಯಲ್ಲಿ ವಿಕೆಟ್ ಕೀಪರ್ ಆಗುವುದು ಅವರಿಗೆ ಸೂಕ್ತವಲ್ಲ.
ಟೆಸ್ಟ್ ಕ್ರಿಕೆಟ್ಗೆ ತಜ್ಞ ಕೀಪರ್ಗಳ ಅಗತ್ಯವಿದೆ. ಭರತ್ ಮತ್ತು ಇಶಾನ್ ಕಿಶನ್ ತಂಡದಲ್ಲಿರುವ ವಿಕೆಟ್ ಕೀಪರ್ ಗಳಾಗಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕೆಎಸ್ ಭರತ್ ಮೊದಲನೇ ಆಯ್ಕೆಯಾಗಿದ್ದಾರೆ.
1.5 ವರ್ಷಗಳ ಕಾಯುವಿಕೆ ಅಂತ್ಯ?
ಕಳೆದ ಒಂದೂವರೆ ವರ್ಷದ ಹಿಂದೆಯೇ ಕೆಎಸ್ ಭರತ್ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು. ರಿಷಬ್ ಪಂತ್ ಅದ್ಭುತ್ ಫಾರ್ಮ್ನಲ್ಲಿದ್ದ ಕಾರಣ ಭರತ್ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ, ಪಂತ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ಕಾರಣ ಭರತ್ಗೆ ಅವಕಾಶ ಸಿಗಲಿದೆ.
ಏಕದಿನ ಸರಣಿಯಲ್ಲಿ ವಿಫಲವಾಗಿರುವ ಇಶಾನ್ ಕಿಶನ್ರನ್ನು ಆಯ್ಕೆ ಮಾಡುವ ಸಾಧ್ಯತೆ ತೀರಾ ಕಡಿಮೆಯಿದೆ. ಕೆಎಲ್ ರಾಹುಲ್ ಕೂಡ ವಿಕೆಟ್ ಕೀಪರ್ ರೇಸ್ನಲ್ಲಿ ಇಲ್ಲದ ಕಾರಣ ಭರತ್ಗೆ ಬಹುದಿನದ ಕನಸು ನನಸಾಗುವ ದಿನ ಸನಿಹದಲ್ಲಿದೆ. ಫೆಬ್ರವರಿ 9ರಂದು ನಾಗ್ಪುರದಲ್ಲಿ ಮೊದಲನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.