
ಟೀಮ್ ಇಂಡಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾದ ಆಟಗಾರ ಉಸ್ಮಾನ್ ಖವಾಜ ಭಾರತ ತಡವಾಗಿ ಆಗಮಿಸಿದ್ದಾರೆ. ವೀಸಾ ಸಮಸ್ಯೆಯಾಗಿದ್ದ ಕಾರಣ ಆಸ್ಟ್ರೇಲಿಯಾದ ಇತರ ಆಟಗಾರರ ಜೊತೆಗೆ ಖವಾಜ ಆಗಮಿಸಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಸಮಸ್ಯೆ ಬಗೆಹರಿದು ಖವಾಜ ಭಾರತಕ್ಕೆ ಕಾಲಿಟ್ಟಿದ್ದು ಅಭ್ಯಾಸದಲ್ಲಿ ನಿರತವಾಗಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರ ಆರ್ ಅಶ್ವಿನ್ ಬಗ್ಗೆ ಖವಾಜ ವಿಶೇಷ ಮಾತುಗಳನ್ನಾಡಿದ್ದಾರೆ.
ಭಾರತದ ಆಲ್ರೌಂಡರ್ ಆರ್ ಅಶ್ವಿನ್ ಅವರನ್ನು ಉಸ್ಮಾನ್ ಖವಾಜ 'ಗನ್' ಎಂದು ಉಲ್ಲೇಖಿಸಿದ್ದಾರೆ. ಈ ಅನುಭವಿಯ ಸವಾಲನ್ನು ಎದುರಿಸುವುದು ನಿಜ ಅದ್ಭುತವಾದ ಪರೀಕ್ಷೆ ಎಂದಿರುವ ಖವಾಜ, ಸರಣಿಗೆ ಉತ್ಸುಕತೆಯಿಂದ ಕಾದಿರುವುದಾಗಿ ಹೇಳಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜ ಅದ್ಭುತ ಫಾರ್ಮ್ನಲ್ಲಿದ್ದು ಕಳೆದ ವರ್ಷ ಆಡಿರುವ 11 ಪಂದ್ಯಗಳಲ್ಲಿ 1080 ರನ್ಗಳನ್ನು ಗಳಿಸಿದ್ದಾರೆ.
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ಗೆ ನೀಡಿರುವ ಸಂದರ್ಶನದಲ್ಲಿ ಉಸ್ಮಾನ್ ಖವಾಜ ಭಾರತದ ಸ್ಪಿನ್ನರ್ ಆರ್ ಅಶ್ವಿನ್ ಬಗ್ಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಅಶ್ವಿನ್ ಬಂದೂಕು ಇದ್ದಂತೆ, ಆತ ಬಹಳ ಕೌಶಲ್ಯಯುತ ಆಟಗಾರ. ಆತನಲ್ಲಿ ಸಾಕಷ್ಟು ಕಠಿಣ ಅಸ್ತ್ರಗಳಿವೆ. ಆತ ಕ್ರೀಸನ್ನು ಕೂಡ ಅದ್ಭುತವಾಗಿ ಬಳಸಿಕೊಳ್ಳುತ್ತಾರೆ. ಈ ಬಗ್ಗೆ ನನ್ನಲ್ಲಿ ಕೆಲ ವರ್ಷಗಳ ಹಿಂದೆ ಕೇಳಿದ್ದರೆ ನನ್ನಲ್ಲಿ ಉತ್ತರಿಸಲು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ಆಫ್ ಸ್ಪಿನ್ನರ್ಗಳನ್ನು ಎದುರಿಸುವ ಕಲೆ ನನ್ನಲ್ಲಿ ಇರಲಿಲ್ಲ" ಎಂದಿದ್ದಾರೆ ಉಸ್ಮಾನ್ ಖವಾಜ.
"ಇದು ನಿಜಕ್ಕೂ ಅದ್ಭುತವಾದ ಸವಾಲು. ಇಲ್ಲಿ ಪಿಚ್ ಕೆಲ ಸಮಯಗಳ ಬಳಿಕ ತಿರುವು ಪಡೆಯಲು ಆರಂಭಿಸುತ್ತದೆ. ಅದು ಮೊದಲ ದಿನದಿಂದಲೇ ಆಗಿರಬಹುದು ಅಥವಾ ಮೂರು ಅಥವಾ ನಾಲ್ಕನೇ ದಿನದಿಂದ ಆಗಿರಬಹುದು. ಅಂಥಾ ಸಂದರ್ಭಗಳಲ್ಲಿ ಆತ ಬಹಳ ದೊಡ್ಡ ಸವಾಲಾಗಿರುತ್ತಾರೆ. ಸಾಕಷ್ಟು ಓವರ್ಗಳನ್ನು ಅಶ್ವಿನ್ ಎಸೆಯಲಿದ್ದು ಆತನ ವಿರುದ್ಧ ನಾನು ಹೇಗೆ ಆಡಲಿದ್ದೇನೆ, ಹೇಗೆ ರನ್ ಗಳಿಸಲಿದ್ದೇನೆ, ಆತ ಏನು ಮಾಡಬಹುದು ಎಂಬುದು ಮುಖ್ಯವಾಗುತ್ತದೆ. ಆತನ ವಿರುದ್ಧ ನೀವು ಸುದೀರ್ಘ ಕಾಲ ಆಡಲು ಸಾಧ್ಯವಾದರೆ ನಿಮ್ಮ ವಿರುದ್ಧಾತ ತನ್ನ ರಣತಂತ್ರವನ್ನು ಬದಲಾಯಿಸುತ್ತಾರೆ" ಎಂದಿದ್ದಾರೆ ಉಸ್ಮಾನ್ ಖವಾಜ.
ಇತ್ತಂಡಗಳ ಸ್ಕ್ವಾಡ್
ಆಸ್ಟ್ರೇಲಿಯಾ ತಂಡ ಹೀಗಿದೆ: ಪ್ಯಾಟ್ ಕಮ್ಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್ಕಾಂಬ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾ, ಸ್ಟೀವ್ ಸ್ಮಿತ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್
ಭಾರತದ ಸ್ಕ್ವಾಡ್ ಹೀಗಿದೆ(ಮೊದಲ 2 ಟೆಸ್ಟ್ ಪಂದ್ಯಗಳಿಗೆ): ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ , ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಸೂರ್ಯಕುಮಾರ್ ಯಾದವ್