IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಭಾರತದಲ್ಲಿ ಅಭ್ಯಾಸ ಪಂದ್ಯಗಳನ್ನು ಆಡುವ ಯೋಜನೆಯನ್ನು ತಿರಸ್ಕರಿಸಿದ ಪ್ರವಾಸಿ ಆಸ್ಟ್ರೇಲಿಯಾ ತಂಡ, ವಿಶಿಷ್ಟ ರೀತಿಯಲ್ಲಿ ಟೆಸ್ಟ್ ಸರಣಿ ಗೆಲುವಿಗಾಗಿ ಬೆಂಗಳೂರಿನ ಆಲೂರು ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದೆ. ಇನ್ನು ಭಾರತ ತಂಡ ಗುರುವಾರದಿಂದಲೇ ನಾಗ್ಪುರದಲ್ಲಿ ಅಭ್ಯಾಸ ನಡೆಸುತ್ತಿದೆ.
ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅತ್ಯಂತ ಕುತೂಹಲಕಾರಿ ಟೆಸ್ಟ್ ಸರಣಿಯನ್ನು ವೀಕ್ಷಿಸಲು ಕಣ್ಣರಳಿಸಿ ಕಾದು ಕುಳಿತಿದ್ದಾರೆ. ಫೆಬ್ರವರಿ 9ರಂದು ನಾಗ್ಪುರದಲ್ಲಿ ಪ್ರಾರಂಭವಾಗುವ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆಲ್ಲಲು ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡಕ್ಕೆ ಬೆಂಬಲಿಸಿದ್ದಾರೆ.
2015ರಿಂದ ಭಾರತ ತಂಡವನ್ನು ಟೆಸ್ಟ್ ಸರಣಿಯಲ್ಲಿ ಸೋಲಿಸಲು ಆಸ್ಟ್ರೇಲಿಯಾ ತಂಡಕ್ಕೆ ಸಾಧ್ಯವಾಗಿಲ್ಲ. ಕಳೆದ ಎಂಟು ವರ್ಷಗಳಿಂದ, ಬಾರ್ಡರ್-ಗವಾಸ್ಕರ್ ಟ್ರೋಫಿ ಮೇಲೆ ಭಾರತ ಪ್ರಾಬಲ್ಯ ಸಾಧಿಸಿದೆ. ತವರಿನಲ್ಲಿ ಮತ್ತು ಆಸೀಸ್ನಲ್ಲಿ ಸರಣಿ ಗೆದ್ದಿದೆ.

ಭಾರತದಲ್ಲಿ 1969, 2004ರಲ್ಲಿ ಮಾತ್ರ ಆಸ್ಟ್ರೇಲಿಯಾ ಗೆದ್ದಿದೆ
2017ರಲ್ಲಿ ಭಾರತಕ್ಕೆ ಆಸ್ಟ್ರೇಲಿಯಾದ ಕೊನೆಯ ಪ್ರವಾಸವಾಗಿತ್ತು. ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಭಾರತ ತಂಡವನ್ನು ಸೋಲಿಸಿದರೂ, ನಂತರ ಆಸ್ಟ್ರೇಲಿಯಾ ತಂಡ ಟೆಸ್ಟ್ ಸರಣಿಯನ್ನು 2-1ರಲ್ಲಿ ಸೋತಿತು. ಆಗಲೂ ಆಸ್ಟ್ರೇಲಿಯಾ ತಂಡ ಬಲಿಷ್ಠವಾಗಿತ್ತು. ವಾಸ್ತವ ವಿಷಯವೆಂದರೆ, 1969 ಮತ್ತು 2004ರಲ್ಲಿ ಮಾತ್ರ ಆಸ್ಟ್ರೇಲಿಯಾ ತಂಡ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿದೆ.
ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಪ್ರಸ್ತುತ ಐಸಿಸಿ ಟೆಸ್ಟ್ ತಂಡಗಳ ಶ್ರೇಯಾಂಕದಲ್ಲಿ ಅಗ್ರ ಎರಡು ಸ್ಥಾನಗಳನ್ನು ಹೊಂದಿವೆ. ಅಲ್ಲದೇ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿಯೂ ಮೊದಲೆರಡು ಸ್ಥಾನದಲ್ಲಿದ್ದಾರೆ. ಜೂನ್ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ತಲುಪಲು ಇತ್ತಂಡಗಳು ಹೋರಾಡುತ್ತಿವೆ.

ಭಾರತೀಯ ಬ್ಯಾಟ್ಸ್ಮನ್ಗಳು ಹೇಗೆ ಎದುರಿಸುತ್ತಾರೆ ನೋಡಬೇಕಿದೆ
"ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ಮಧ್ಯೆ ಯಾವಾಗಲೂ ಉತ್ತಮ ಸರಣಿಯಾಗಿರುತ್ತದೆ. ಭಾರತದ ಪರಿಸ್ಥಿತಿಗಳು ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳು ಅದನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ. ಅದೇ ರೀತಿ ಆಸೀಸ್ ತಂಡ ಉತ್ತಮ ಬೌಲಿಂಗ್ ವಿಭಾಗವನ್ನು ಹೊಂದಿದೆ, ಇದನ್ನು ಭಾರತೀಯ ಬ್ಯಾಟ್ಸ್ಮನ್ಗಳು ಹೇಗೆ ಎದುರಿಸುತ್ತಾರೆ ಎಂಬುದನ್ನು ನೋಡಲು ಕುತೂಹಲಕಾರಿಯಾಗಿದೆ," ಎಂದು ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಅಭಿಪ್ರಾಯಪಟ್ಟರು.
"ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಯಾವ ತಂಡವು ಹೇಗೆ ಪ್ರಾರಂಭಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸರಣಿಯಲ್ಲಿ ಯಾರು ಆವೇಗವನ್ನು ಹೊಂದಿರುತ್ತಾರೋ ಅವರು ಪಂದ್ಯಗಳನ್ನು ಗೆಲ್ಲುತ್ತಾರೆ," ಎಂದು ಮಹೇಲಾ ಜಯವರ್ಧನೆ ಅವರು ದಿ ಐಸಿಸಿ ರಿವ್ಯೂನ ಇತ್ತೀಚಿನ ಆವೃತ್ತಿಯಲ್ಲಿ ಹೇಳಿದರು.

ಯಾರು ಸರಣಿ ಗೆಲ್ಲಲಿದ್ದಾರೆ ಎಂದು ಊಹೆ ಮಾಡುವುದು ಕಷ್ಟ
"ಈ ಬಾರಿ ಯಾರು ಸರಣಿ ಗೆಲ್ಲಲಿದ್ದಾರೆ ಎಂದು ಊಹೆ ಮಾಡುವುದು ಕಷ್ಟ. ಆದರೆ ಶ್ರೀಲಂಕಾದವನಾಗಿ, ಆಸ್ಟ್ರೇಲಿಯಾ ತಂಡ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಳ್ಳಬಹುದು ನಾನು ಭಾವಿಸುತ್ತೇನೆ. ಬಹುಶಃ ಇದು ಕಠಿಣವಾಗಿರುತ್ತದೆ," ಎಂದು ಮಹೇಲಾ ಜಯವರ್ಧನೆ ತಿಳಿಸಿದರು.
"ಭಾರತದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅವರ ಇತ್ತೀಚಿನ ಫಾರ್ಮ್ ನೋಡಿದರೆ, ಆಸ್ಟ್ರೇಲಿಯಾ ಬೌಲಿಂಗ್ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸುವ ಭಾರತದ ಅವಕಾಶಗಳನ್ನು ಹೆಚ್ಚಿಸಿದೆ. ಶುಭ್ಮನ್ ಗಿಲ್ ಅವರ ಅತ್ಯುತ್ತಮ ಫಾರ್ಮ್ ಭಾರತಕ್ಕೆ ವೈಟ್-ಬಾಲ್ ಕ್ರಿಕೆಟ್ನಲ್ಲಿ ಗಮನಾರ್ಹ ಉತ್ತೇಜನವನ್ನು ನೀಡಿದೆ. ಅದೇ ಫಾರ್ಮ್ ಅನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಸಿದರೆ, ಭಾರತಕ್ಕೆ ಅನುಕೂಲವಾಗಲಿದೆ," ಎಂದು ಮಹೇಲಾ ಜಯವರ್ಧನೆ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications