
ಹೊಸದಿಲ್ಲಿ, ಜುಲೈ 14: ಹನ್ನೆರಡನೇ ಆವೃತ್ತಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎಂ.ಎಸ್ ಧೋನಿ ಅವರ ಪಾಲಿಗೆ ಕೊನೆಯ ವಿಶ್ವಕಪ್ ಟೂರ್ನಿಯಾಗಿದೆ. ಇನ್ನು ವಿಶ್ವಕಪ್ ಬಳಿಕ ಧೋನಿ ನಿವೃತ್ತಿ ಪ್ರಕಟಿಸುತ್ತಾರೆ ಎಂದೇ ನಿರೀಕ್ಷಿಸಲಾಗಿದೆ.
ಭಾರತೀ ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ಬಳಿಕ ಬಹುದೊಡ್ಡ ಸ್ಟಾರ್ ಆಗಿರುವ ಎಂ.ಎಸ್ ಧೋನಿ ತಮ್ಮ ನಾಯಕತ್ವದಲ್ಲಿ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ನಾಯಕ. ಹೀಗಾಗಿ ಸಹಜವಾಗಿಯೇ ಧೋನಿ ನಿವೃತ್ತಿ ಕುರಿತಾಗಿ ಎಲ್ಲರಿಗೂ ಕುತೂಹಲ ಹೆಚ್ಚಾಗಿದೆ.
ಟೀಮ್ ಇಂಡಿಯಾವನ್ನು ತಮ್ಮ ನಾಯಕತ್ವದ ಅಡಿಯಲ್ಲಿ ಯಶಸ್ಸಿನ ಅಲೆಯಲ್ಲಿ ತೇಲಿಸಿದ ಧೋನಿ ನಿವೃತ್ತಿ ನಂತರ ಏನು ಮಾಡುತ್ತಾರೆ ಎಂಬುದು ಕೂಡ ಇದೀಗ ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ ಬಿಜೆಪಿ ಮುಖಂಡ ಸಂಜಯ್ ಪಾಸ್ವಾನ್, 38 ವರ್ಷದ ಅನುಭವಿ ಕ್ರಿಕೆಟಿಗ ನಿವೃತ್ತಿ ನಂತರ ಏನು ಮಾಡಲಿದ್ದಾರೆ ಎಂಬುದರ ಸುಳಿವನ್ನು ನೀಡಿದ್ದಾರೆ.
"ಈ ವಿಚಾರವಾಗಿ ಬಹು ಸಮಯದಿಂದ ಚರ್ಚೆಯಾಗುತ್ತಿದೆ. ಆದರೂ ಇಂಥದ್ದೊಂದು ನಿರ್ಧಾರ ಅವರ ನಿವೃತ್ತಿ ಬಳಿಕವಷ್ಟೇ ಸಾಧ್ಯವಾಗಲಿದೆ. ಧೋನಿ ನನ್ನ ಸ್ನೇಹಿತರು. ವಿಶ್ವ ವಿಖ್ಯಾತ ಆಟವಾರ ಅವರು. ಹೀಗಾಗಿ ಅವರನ್ನು ಭಾರತೀಯ ಜನತಾ ಪಾರ್ಟಿಗೆ ಕರೆತರುವ ಕುರಿತಾಗಿ ಮಾತುಕತೆ ನಡೆಸಲಾಗುತ್ತಿದೆ," ಎಂದು ಸಂಜಯ್ ಪಾಸ್ವಾನ್ ಹೇಳಿದ್ದಾರೆ.
ಲೋಕ ಸಭೆ ಚುನಾವಣೆಗೂ ಮುನ್ನ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು ಕೈಗೊಂಡಿದ್ದ "ಸಂಪರ್ಕ್ ಫಾರ್ ಸಮರ್ಥನ್" ಯೋಜನೆ ವಿಚಾರವಾಗಿ ಧೋನಿ ಅವರನ್ನು ಭೇಟಿಯಾಗಿದ್ದರು. ಇನ್ನು ಜಾರ್ಖಂಡ್ನಲ್ಲಿ ಧೋನಿ ಅವರನ್ನು ಮುಖ್ಯ ಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವ ಕಡೆಗೆ ಬಿಜೆಪಿ ಆಲೋಚಿಸುತ್ತಿದೆ. ಅವರ ಜನಪ್ರಿಯತೆ ಮತ್ತು ಅಭಿಮಾನಿ ಬಳಗದ ಬೆಂಬಲದೊಂದಿಗೆ ಬಿಜೆಪಿ ದೊಡ್ಡ ಚುನಾವಣೆ ಗೆಲ್ಲುವ ಕಡೆಗೆ ಎದುರು ನೋಡುತ್ತಿದೆ.
2019ರ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಆಡಿದ 10 ಇನಿಂಗ್ಸ್ಗಳಲ್ಲಿ ಅವರ ಬ್ಯಾಟ್ನಿಂದ ಹರಿದುಬಂದಿದ್ದು 273 ರನ್ಗಳು ಮಾತ್ರ. ಇದರಲ್ಲಿ 2 ಅರ್ಧಶತಕಗಳು ಮಾತ್ರವೇ ಸೇರಿವೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ ತಂಡಕ್ಕೆ ಆಸರೆಯಾಗಿದ್ದ ಧೋನಿ ದುರದೃಷ್ಟವಶಾತ್ ರನ್ಔಟ್ಗೆ ಬಲಿಯಾದರು. ಪರಿಣಾಮ ಭಾರತ ತಂಡ 18 ರನ್ಗಳಿಂದ ಸೋತು ಸ್ಪರ್ಧೆಯಿಂದ ಹೊರಬಿದ್ದಿತು. ಇದಕ್ಕೂ ಮುನ್ನ ಜಡೇಜಾ ಅವರೊಟ್ಟಿಗೆ 7ನೇ ವಿಕೆಟ್ಗೆ 116 ರನ್ಗಳ ಅಮೋಘ ಜೊತೆಯಾಟವಾಡಿದ್ದರು.