
ಕೊಲಂಬೊ, ಜುಲೈ 25: ಭಾರತ ಅಂಧರ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧದ 5 ಪಂದ್ಯಗಳ ಟಿ20 ದ್ವಿಪಕ್ಷೀಯ ಸರಣಿಯಲ್ಲಿ 4-1 ಅಂತರದ ಗೆಲುವು ಸಾಧಿಸುವ ಮೂಲಕ ಸರಣಿ ಗೆದ್ದುಕೊಂಡಿದೆ. ಶ್ರೀಲಂಕಾದ ಕೊಲಂಬೋದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಪಾರಮ್ಯ ಮೆರೆಯಿತು.
ನಾಲ್ಕನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗವನ್ನು ಬಿಗಿಗೊಳಿಸಿದ ಭಾರತ, ಆತಿಥೇಯ ಶ್ರೀಲಂಕಾವನ್ನು 142 ರನ್ನಿಗೆ ಕಟ್ಟಿ ಹಾಕಿತು. ಆದರೆ ವಿಶ್ವ ಚಾಂಪಿಯನ್ ಭಾರತಕ್ಕೆ ಪಂದ್ಯದಲ್ಲಿ ದಂಡ ವಿಧಿಸಿ 149 ರನ್ ಗುರಿಯನ್ನು ನೀಡಲಾಗಿತ್ತು.
ಚೇಸಿಂಗ್ ಗೆ ಇಳಿದ ಭಾರತದಿಂದ ನಾಯಕ ಅಜಯ್ ರೆಡ್ಡಿ ಮತ್ತು ದುರ್ಗ ರಾವ್ ಅಮೋಘ ಪಾರ್ಟ್ನರ್ ಶಿಪ್ ಪ್ರದರ್ಶಿಸಲ್ಪಟ್ಟಿತು. ಈ ಜೋಡಿ 70 ರನ್ ಪೇರಿಸಿ ಭಾರತ 15.4 ಓವರ್ ಗಳಲ್ಲಿ ಗೆಲುವು ದಾಖಲಿಸಲು ನೆರವು ನೀಡಿತು.
ದಿನದ (ಜುಲೈ 25) ಎರಡನೇ ಪಂದ್ಯವಾಗಿ ನಡೆದ ಅಂತಿಮ ಪಂದ್ಯದಲ್ಲೂ ಟಾಸ್ ಗೆದ್ದ ಭಾರತ ಮತ್ತೆ ಫೀಲ್ಡಿಂಗ್ ಆಯ್ದುಕೊಂಡಿತು. ಈ ಬಾರಿ ಶ್ರೀಲಂಕಾ 190 ರನ್ ಬೃಹತ್ ಗುರಿ ನೀಡಿತ್ತು. ಆದರೆ ಬಲಿಷ್ಟ ಭಾರತಕ್ಕೆ ಆ ಗುರಿ ಅಂಥದ್ದೇನೂ ಸವಾಲೆನಿಸಲಿಲ್ಲ. 16 ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲ 190 ರನ್ ಪೇರಿಸಿ ಭಾರತ ಗೆಲುವನ್ನಾಚರಿಸಿತು.