ಸೆಲ್ಫಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದ ಪ್ರಭಾವಿ ಸಪ್ನಾ ಗಿಲ್ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆ ಭಾರತ ತಂಡದ ಕ್ರಿಕೆಟಿಗ ಪೃಥ್ವಿ ಶಾ ಅವರಿಗೆ ಬಾಂಬೆ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ.
ಫೆಬ್ರವರಿ 2023ರಲ್ಲಿ ಮುಂಬೈನ ನೈಟ್ಕ್ಲಬ್ನಲ್ಲಿ ಸಪ್ನಾ ಗಿಲ್ ವಿರುದ್ಧ ಹಲ್ಲೆ ನಡೆಸಿದ ಆರೋಪದ ಮೇಲೆ ಮುಂಬೈನ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಪೃಥ್ವಿ ಶಾ ದೂರು ದಾಖಲಿಸಿದ್ದರು.

ವೈಲ್ ಪಾರ್ಲೆ ಈಸ್ಟ್ನ ಬ್ಯಾರೆಲ್ ಮ್ಯಾನ್ಷನ್ ಕ್ಲಬ್ನಲ್ಲಿ ಸಪ್ನಾ ಗಿಲ್ ಮತ್ತು ಅವರ ಸ್ನೇಹಿತರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ಕ್ರಿಕೆಟಿಗ ಪೃಥ್ವಿ ಶಾ ನಿರಾಕರಿಸಿದ ನಂತರ ನಡು ಬೀದಿಯಲ್ಲಿಯೇ ಜಗಳವಾಗಿತ್ತು.
ಘಟನೆಯ ನಂತರ, ಸಪ್ನಾ ಗಿಲ್ ತನ್ನ ವಿರುದ್ಧದ ಎಫ್ಐಆರ್ ಅನ್ನು ರದ್ದುಪಡಿಸುವಂತೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದು ಗುರುವಾರ, ಏಪ್ರಿಲ್ 13ರಂದು ವಿಚಾರಣೆಗೆ ಬರಬೇಕಿತ್ತು. ಸಪ್ನಾ ಗಿಲ್ ಅರ್ಜಿಯ ನಂತರ, ಪೃಥ್ವಿ ಶಾ ಸೇರಿದಂತೆ 11 ಜನರ ವಿರುದ್ಧ ನೋಟೀಸ್ ನೀಡಲಾಗಿದೆ.
ಸಪ್ನಾ ಗಿಲ್ ತನ್ನ ದೂರಿನಲ್ಲಿ, ಪೃಥ್ವಿ ಶಾ ಮತ್ತು ಆತನ ಸ್ನೇಹಿತ ಸಾರ್ವಜನಿಕ ಸ್ಥಳದಲ್ಲಿ ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾಳೆ. ತನ್ನ ಸೆಲ್ಫೀ ಮನವಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಆಯುಧದಿಂದ ಮಾರಣಾಂತಿಕವಾಗಿ ದೈಹಿಕ ಹಲ್ಲೆ ಮಾಡಿದ್ದಾರೆ. ಈ ಜಗಳದ ವೇಳೆ ಕ್ರಿಕೆಟಿಗ ಪೃಥ್ವಿ ಶಾ ತನ್ನನ್ನು ಅನುಚಿತ ರೀತಿಯಲ್ಲಿ ಸ್ಪರ್ಶಿಸಿ ದೂರ ತಳ್ಳಿದ್ದಾನೆ ಎಂದು ಸಪ್ನಾ ಗಿಲ್ ಆರೋಪಿಸಿದ್ದಾಳೆ.

ಪೃಥ್ವಿ ಶಾ ಮಾತ್ರವಲ್ಲದೆ, ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಪೃಥ್ವಿ ಶಾ ಅವರ ಕೆಲವು ಸ್ನೇಹಿತರಿಗೆ ಬಾಂಬೆ ಹೈಕೋರ್ಟ್ ನೋಟೀಸ್ ನೀಡಿದೆ. ಪೃಥ್ವಿ ಶಾ ಮತ್ತು ಸಪ್ನಾ ಗಿಲ್ ನಡುವಿನ ಜಗಳದ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗಿತ್ತು. ಅದರಲ್ಲಿ ಇಬ್ಬರೂ ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು.
ಘಟನೆಯ ನಂತರ, ಪೃಥ್ವಿ ಶಾ ಅವರು ಕಿರುಕುಳದ ಆರೋಪದ ಮೇಲೆ ದೂರು ದಾಖಲಿಸಿದ್ದರು. ಇದಕ್ಕಾಗಿ ಸಪ್ನಾ ಗಿಲ್ ಅವರನ್ನು ಬಂಧಿಸಲಾಗಿತ್ತು. ನಂತರ ಫೆಬ್ರವರಿ 20ರಂದು ಅವರಿಗೆ ಜಾಮೀನು ನೀಡಲಾಗಿತ್ತು. ನಂತರ ಸಾಮಾಜಿಕ ಮಾಧ್ಯಮದ ಪ್ರಭಾವಿಯಾಗಿರುವ ಸಪ್ನಾ ಗಿಲ್ ಈ ಘಟನೆಗೆ ಸಂಬಂಧಿಸಿದಂತೆ ಅವರ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವರದಿಗಳ ಪ್ರಕಾರ, ಕ್ರಿಕೆಟಿಗ ಪೃಥ್ವಿ ಶಾ ಅವರು ಸೆಲ್ಫೀ ಫೋಟೋ ವಿನಂತಿಯನ್ನು ನಿರಾಕರಿಸಿದ ನಂತರ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತ ಶೋಭಿತ್ ಠಾಕೂರ್ ಅವರು ಪೃಥ್ವಿ ಶಾ ಮತ್ತು ಸ್ನೇಹಿತ ಆಶಿಶ್ ಯಾದವ್ ಅವರೊಂದಿಗೆ ಜಗಳಕ್ಕಿಳಿದಿದ್ದಾರೆ.
ಪೃಥ್ವಿ ಶಾ ಅವರ ಸೆಲ್ಫೀ ನಿರಾಕರಣೆಯಿಂದ ಕೋಪಗೊಂಡ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತರು ಕ್ರಿಕೆಟಿಗನ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಸಪ್ನಾ ಗಿಲ್ ಸ್ನೇಹಿತರೊಬ್ಬರು ಬೇಸ್ಬಾಲ್ ಬ್ಯಾಟ್ನಿಂದ ಕಾರಿನ ಹಿಂಬದಿಯ ವಿಂಡ್ಶೀಲ್ಡ್ ಅನ್ನು ಒಡೆದರು ಎಂದು ಮುಂಬೈ ಮೂಲದ ಕ್ರಿಕೆಟಿಗ ಪೃಥ್ವಿ ಶಾ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.