
ಲಾಹೋರ್, ಮೇ 23: ಮೊದಲಿನಿಂದಲೂ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಬೌಲಿಂಗ್ ಬಹುದೊಡ್ಡ ಶಕ್ತಿಯಾಗಿದೆ, ಇದೀಗ ವಹಾಬ್ ರಿಯಾಝ್ ಮತ್ತು ಮೊಹಮ್ಮದ್ ಆಮಿರ್ ಸೇರ್ಪಡೆಯೊಂದಿಗೆ ಪಾಕ್ ವಿಶ್ವಕಪ್ ತಂಡದಲ್ಲಿ ಬೇಕಿದ್ದ ಸಮತೋಲನ ಲಭ್ಯವಾಗಿದೆ ಎಂದು ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ ಹೇಳಿದ್ದಾರೆ.
"ತಂಡದಲ್ಲಿ ಹಲವು ಪ್ರಯೋಗಗಳು ನಡೆದಿವೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ಈ ಮೂಲಕ ಯುವ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿತ್ತು,'' ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿರುವ ವಿಡಿಯೊ ಒಂದರಲ್ಲಿ ಅಫ್ರಿದಿ ಹೇಳಿದ್ದಾರೆ.
"ನಮ್ಮ ಬೌಲಿಂಗ್ ಕಳೆಗುಂದಲು ಅನುಭವದ ಕೊರತೆಯೇ ಕಾರಣ. ಇದೀಗ ವಹಾಬ್ ರಿಯಾಝ್, ಲೆಗ್ಸ್ಪಿನ್ನರ್ ಶದಾಬ್ ಖಾನ್ ಮತ್ತು ಮೊಹಮ್ಮದ್ ಆಮಿರ್ ಆಗಮನದಿಂದಾಗಿ ತಂಡದಲ್ಲಿ ಸಮತೋಲನ ಬಂದಂತಾಗಿದೆ. ಹೀಗಾಗಿ ಯಾವುದೇ ರೀತಿಯ ಸಬೂಬು ಹೇಳುವಂತಿಲ್ಲ,'' ಎಂದಿದ್ದಾರೆ.
ಪಾಕಿಸ್ತಾನ ತಂಡಕ್ಕೆ ವಿಶ್ವಕಪ್ ಟೂರ್ನಿ ವೇಳೆ ಹಿಂದೆಲ್ಲಾ ಬ್ಯಾಟಿಂಗ್ನದ್ದೇ ಬಹುದೊಡ್ಡ ಸಮಸ್ಯೆಯಾಗಿತ್ತು. ಆದರೀಗ ಪಾಕ್ ತಂಡದ ಬ್ಯಾಟಿಂಗ್ ಅತ್ಯುತ್ತಮವಾಗಿದೆ ಎಂದು ಅಫ್ರಿದಿ ಹೇಳಿದ್ದಾರೆ.
"ನಮ್ಮ ತಂಡ ಅತ್ಯುತ್ತಮ ಸಂಯೋಜನೆಯನ್ನು ಹೊಂದಿದೆ. ಬ್ಯಾಟಿಂಗ್ ನಮಗೆ ಸದಾ ಕಾಡುತ್ತಿದ್ದ ಸಮಸ್ಯೆ. ಆದರೆ ಈಗಿನ ಬ್ಯಾಟ್ಸ್ಮನ್ಗಳು ಅದ್ಭುತ ಲಯದಲ್ಲಿದ್ದಾರೆ. ಆದರೂ ಮೊದಲ ಎರಡು ಪಂದ್ಯಗಳಲ್ಲಿ ಗೆಲುವಿನ ಲಯ ಕಂಡುಕೊಳ್ಳುವುದು ಮುಖ್ಯ. ನಮ್ಮ ತಂಡದ ಯುವ ಪ್ರತಿಭೆಗಳು ವಿಶ್ವದ ಯಾವುದೇ ತಂಡವನ್ನು ಮಣಿಸುವ ಸಾಮರರ್ಥ್ಯ ಹೊಂದಿದ್ದಾರೆ,'' ಎಂದು 1992ರ ಚಾಂಪಿಯನ್ಸ್ ಪಾಕಿಸ್ತಾನ ತಂಡದ ಈಗಿನ ಬ್ಯಾಟಿಂಗ್ ವಿಭಾಗವನ್ನು ಅಫ್ರಿದಿ ಗುಣಗಾನ ಮಾಡಿದ್ದಾರೆ.
"ಪಾಕಿಸ್ತಾನ ತಂಡ ಈ ಬಾರಿ ಸೆಮಿಫೈನಲ್ಸ್ ಪ್ರವೇಶಿಸಲಿದೆ. ದೇವರ ಕೃಪೆ ಇದ್ದರೆ ಫೈನಲ್ ವರೆಗೂ ಮುನ್ನಡೆಯಲಿದೆ ಎಂಬ ವಿಶ್ವಾಸವಿದೆ. ಆದರೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒತ್ತಡ ಇದ್ದೇ ಇರುತ್ತದೆ. ಹೀಗಾಗಿ ಒಬ್ಬ ಟೆಸ್ಟ್ ಆಟಗಾರನಿಗೆ ಇರುವಂತಹ ಮಾನಸಿಕ ಶಕ್ತಿ ಇರಬೇಕು. ವಿಶ್ವಕಪ್ ಒಂದು ಬಹುದೊಡ್ಡ ವೇದಿಕೆ. ಇಲ್ಲಿ ನಿಮ್ಮನ್ನು ಇಡೀ ಜಗತ್ತೇ ವೀಕ್ಷಿಸುತ್ತಿರುತ್ತದೆ,'' ಎಂದು ಪಾಕ್ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಲು ಅಫ್ರಿದಿ ಸಂದೇಶ ರವಾನಿಸಿದ್ದಾರೆ.