ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ರೋಹಿತ್ ಶರ್ಮಾ ನಾಯಕತ್ವದಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಎಲ್ಲಾ ಎದುರಾಳಿಗಳನ್ನು ಕೂಡ ಏಕಪಕ್ಷೀಯವಾಗಿ ಸೋಲಿಸುವ ಮೂಲಕ ಅಬ್ಬರಿಸಿದ್ದು ಅಜೇಯವಾಗಿ ಈಗಾಗಲೇ ಸೆಮಿಫೈನಲ್ ಟಿಕೆಟ್ ಖಚಿತಪಡಿಸಿಕೊಂಡಿದೆ. ಕೇವಲ ನ್ಯೂಜಿಲೆಂಡ್ ತಂಡ ಮಾತ್ರವೇ ಈ ಟೂರ್ನಿಯಲ್ಲಿ ಭಾರತಕ್ಕೆ ಒಮದು ಹಂತದ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿತ್ತು.
ಇನ್ನೂ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಾ ಆಕ್ರಮಣಕಾರಿ ಆಟದ ಮೂಲಕ ಎದುರಾಳಿಗಳ ನಿದ್ದೆಗೆಡಿಸಿದ್ದ ತಂಡ ಎಂದರೆ ಅದು ದಕ್ಷಿಣ ಆಫ್ರಿಕಾ. ನೆದರ್ಲೆಂಡ್ಸ್ ಹೊರತುಪಡಿಸಿ ಉಳೀದೆಲ್ಲಾ ತಮಡಗಳ ವಿರುದ್ಧ ಬೃಹತ್ ಮೊತ್ತವನ್ನು ಕಲೆಹಾಕಿ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ತಂಡ ಎನಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ಭಾರತದ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಶರಣಾಗಿದೆ. ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ 83 ರನ್ಗಳಿಗೆ ಆಲೌಟ್ ಆಗುವ ಮೂಲಕ ಬರೊಬ್ಬರಿ 243 ರನ್ಗಳ ಅಂತರದಿಂದ ಭಾರತಕ್ಕೆ ಶರಣಾಗಿದೆ.

ಈ ಪ್ರದರ್ಶನದ ಬಳಿಕ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಪಿನ್ ಬೌಲರ್ ಬ್ರಾಡ್ ಹಾಗ್ ಕುತೂಹಲಕಾರಿ ಅಭಿಪ್ರಾಯವೊಂದನ್ನು ಹಂಚಿಕೊಂಡಿದ್ದಾರೆ. ಭಾರತದ ಅಬ್ಬರದ ಪ್ರದರ್ಶನವನ್ನು ಉಲ್ಲೇಖಿಸಿರುವ ಅವರು ಈ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪಂದ್ಯದ ಅಗತ್ಯವಿಲ್ಲ ಎಂದಿದ್ದು ಭಾರತ ತಂಡಕ್ಕೆ ವಿಶ್ವಕಪ್ ನೀಡಿ ಎಂದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದ ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
"ಕೊನೆಯ ಪಂದ್ಯವನ್ನು ನೋಡಿದ ಬಳಿಕ ಫೈನಲ್ ಪಂದ್ಯದ ಎಂದು ಭಾಸವಾಗುತ್ತಿದೆ. ರೆಸ್ಟ್ ಆಫ್ ದಿ ವರ್ಲ್ಡ್ಗೆ ಮಾತ್ರವೇ ಈ ಭಾರತ ತಂಡಕೆ ಪೈಪೋಟಿ ನೀಡಲು ಸಾಧ್ಯ. ಅವರು ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ" ಎಂದಿದ್ದಾರೆ ಆಸಿಸ್ ಸ್ಟಾರ್ ಕ್ರಿಕೆಟಿಗ.
ಟೀಮ್ ಇಂಡಿಯಾ ಈ ವಿಶ್ವಕಪ್ ಟೂರ್ನಿಯ ಅಭಿಯಾನವನ್ನು ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾದ ವಿರುದ್ಧ ಭಾರತವು ಅಕ್ಟೋಬರ್ 8 ರಂದು ಆರಂಭಿಸಿತು. ಈ ಪಂದ್ಯದಲ್ಲಿ ಭಾರತದ ಪ್ರಬಲ ಬೌಲಿಂಗ್ ಪ್ರದರ್ಶನವು ಆಸ್ಟ್ರೇಲಿಯಾವನ್ನು 199 ರನ್ಗಳಿಗೆ ಸೀಮಿತಗೊಳಿಸಿತು. ನಂತರ ಬ್ಯಾಟಿಂಗ್ನಲ್ಲಿ ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಸ್ಕೋರ್ ಮಾಡದೆ ನಿರ್ಗಮಿಸುವ ಮೂಲಕ ಭಾರತ ಆರಂಭಿಕ ಹಿನ್ನಡೆಗೆ ಕಾರಣವಾದರು. ಆದರೆ ವಿರಾಟ್ ಕೊಹ್ಲಿ ಅವರ 85 ರನ್ ಮತ್ತು ಕೆಎಲ್ ರಾಹುಲ್ ಅವರ ಅಜೇಯ 97 ರನ್ ಭಾರತವನ್ನು 52 ಎಸೆತಗಳು ಬಾಕಿ ಇರುವಂತೆಯೇ ಎಂಟು ವಿಕೆಟ್ಗಳ ಜಯಕ್ಕೆ ಕಾರಣವಾಯಿತು.
ಅದಾದ ಬಳಿಕ ಭಾರತ ಅಫ್ಘಾನಿಸ್ತಾನವನ್ನು ಎಂಟು ವಿಕೆಟ್ಗಳಿಂದ, ಪಾಕಿಸ್ತಾನವನ್ನು ಏಳು ವಿಕೆಟ್ಗಳಿಂದ ಮತ್ತು ನ್ಯೂಜಿಲೆಂಡ್ ಅನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸುವ ಮೂಲಕ ತಮ್ಮ ಗೆಲುವಿನ ಸರಣಿಯನ್ನು ಮುಂದುವರೆಸಿತು. ನಂತರ ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಮೊದಲು ಬ್ಯಾಟ್ ಮಾಡಿ ಹಾಲಿ ಚಾಂಪಿಯನ್ಗಳನ್ನು 100 ರನ್ಗಳಿಂದ ಸೋಲಿಸಿದರೆ ಶ್ರೀಲಂಕಾ ವಿರುದ್ಧ 302 ರನ್ಗಳ ದಾಖಲೆಯ ಅಂತರದ ಗೆಲುವು ಸಾಧಿಸಿತು.
ಭಾರತದ ಕೊನೆಯ ಲೀಗ್ ಪಂದ್ಯ ನವೆಂಬರ್ 12 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ನೆದರ್ಲೆಂಡ್ಸ್ ಈ ಪಂದ್ಯ ನಡೆಯಲಿದ್ದು ಲೀಗ್ ಹಂತದ ಅಂತಿಮ ಪಂದ್ಯವೂ ಇದೇ ಆಗಿದೆ.