ಮುಂಬರುವ ದಿನಗಳು ಭಾರತ ಕ್ರಿಕೆಟ್ ತಂಡಕ್ಕೆ ಬ್ಯುಸಿ ದಿನಗಳಾಗಿರಲಿವೆ. ನಿರಂತರ ಸರಣಿ ಸೇರಿದಂತೆ ಪ್ರಮುಖ 2023ರ ಏಷ್ಯಾ ಕಪ್ ಮತ್ತು ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಳು ನಡೆಯಲಿವೆ.
2023ರ ಏಷ್ಯಾ ಕಪ್ ಪಂದ್ಯಾವಳಿ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿದ್ದರೆ, 2023ರ ವಿಶ್ವಕಪ್ ಪಂದ್ಯಾವಳಿಯು ಭಾರತದಲ್ಲಿಯೇ ನಿಗದಿಯಾಗಿದೆ. ಈಗಾಗಲೇ ಎರಡೂ ಟೂರ್ನಿಗಳಿಗೆ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಭಾಗವಹಿಸುವ ತಂಡಗಳು ಪೂರ್ವತಯಾರಿ ಆರಂಭಿಸಿವೆ.

ಭಾರತ ತಂಡದ ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟರ್ಗಳಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಫಿಟ್ನೆಸ್ ಕುರಿತು ಅನಿಶ್ಚಿತತೆ ಈಗಲೂ ಕಾಡುತ್ತಿದೆ. ಇನ್ನು ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಬಗ್ಗೆ ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಗೊತ್ತಾಗಲಿದೆ.
ಇದೀಗ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಅವರು ಏಕದಿನ ವಿಶ್ವಕಪ್ಗೆ ತೆರಳುತ್ತಿರುವ ಭಾರತ ತಂಡಕ್ಕೆ ಎರಡು ಪರಿಹಾರಗಳನ್ನು ಸೂಚಿಸಿದ್ದಾರೆ. ರಾಹುಲ್ ಮತ್ತು ಅಯ್ಯರ್ ಇಬ್ಬರೂ ಪ್ರಸ್ತುತ ಎನ್ಸಿಎನಲ್ಲಿ ಪುನರ್ವಸತಿಗೆ ಒಳಗಿದ್ದಾರೆ ಮತ್ತು ಅವರ ಅನುಪಸ್ಥಿತಿಯು ಭಾರತದ ಮಧ್ಯಮ ಕ್ರಮಾಂಕದಲ್ಲಿ ಭಾರಿ ಹಿನ್ನಡೆ ಉಂಟುಮಾಡಿದೆ.

ಭಾರತ ತಂಡವು ಮಧ್ಯಮ ಕ್ರಮಾಂಕದ ಸಮಸ್ಯೆಯನ್ನು ಪರಿಹರಿಸಲು ವಿಭಿನ್ನ ಸಂಯೋಜನೆಗಳನ್ನು ಪ್ರಯತ್ನಿಸಿದರೂ, ಯಾವುದೇ ಆಟಗಾರರು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರನ್ನು ಮೆಚ್ಚಿಸಲು ಯಶಸ್ವಿಯಾಗಲಿಲ್ಲ ಎನ್ನುವುದು ಗಮನಾರ್ಹ.
ಇಶಾನ್ ಕಿಶನ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ, ಆದರೆ ಭಾರತ ತಂಡವು ರೋಹಿತ್ ಶರ್ಮಾರೊಂದಿಗೆ ಇನ್ನಿಂಗ್ಸ್ ಆರಂಭಿಸಲು ಕಿಶನ್ರನ್ನು ಅಗ್ರಸ್ಥಾನದಲ್ಲಿ ಬಳಸಿಕೊಳ್ಳಬಹುದು ಎಂದು ಬ್ರಾಡ್ ಹಾಗ್ ಸಲಹೆ ನೀಡಿದರು. ಇದೇ ವೇಳೆ ಯುವ ಬ್ಯಾಟರ್ ತಿಲಕ್ ವರ್ಮಾ ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸುವಂತೆ ಸಲಹೆ ನೀಡಿದರು.
"ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಫಿಟ್ ಆಗಿಲ್ಲದಿದ್ದರೆ, ನಮಗೆ ಈ ತಂಡದಲ್ಲಿ ವಿಕೆಟ್ ಕೀಪರ್ ಅಗತ್ಯವಿದೆ. ಇಶಾನ್ ಕಿಶನ್ ಅವರು ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು ಎಂದು ನಾನು ಭಾವಿಸುವುದಿಲ್ಲ. ಅವರು ಮುಖ್ಯವಾಗಿ ಇನ್ನಿಂಗ್ಸ್ ಆರಂಭಿಸಬೇಕು ಎಂದು ನಾನು ಭಾವಿಸುತ್ತೇನೆ," ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಇನ್ಸ್ಟಾಗ್ರಾಮ್ನಲ್ಲಿ ಹೇಳಿದ್ದಾರೆ.
ಆದಾಗ್ಯೂ, 52 ವರ್ಷದ ಬ್ರಾಡ್ ಹಾಗ್ ಅವರು ಸಂಜು ಸ್ಯಾಮ್ಸನ್ ರೂಪದಲ್ಲಿ ಮತ್ತೊಂದು ಪರಿಹಾರವನ್ನು ನೀಡಿದರು. ಅವರ ಪ್ರಕಾರ, ಭಾರತ ತಂಡವು ಶುಭ್ಮನ್ ಗಿಲ್ ಮತ್ತು ರೋಹಿತ್ ಅವರ ಆರಂಭಿಕ ಸಂಯೋಜನೆಯೊಂದಿಗೆ ಹೋಗಲು ನಿರ್ಧರಿಸಿದರೆ ಸಾಧಾರಣವಾದದ್ದನ್ನು ನೀಡಬಹುದು ಎಂದರು.
"ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಅಗ್ರ ಕ್ರಮಾಂಕದಲ್ಲಿ ಹೋದರೆ ಸಂಜು ಸ್ಯಾಮ್ಸನ್ 4ನೇ ಕ್ರಮಾಂಕದಲ್ಲಿ ಭಾರತೀಯ ವಿಕೆಟ್ ಕೀಪರ್ ಆಗಿ ವಿಶ್ವಕಪ್ಗೆ ಹೋಗಬೇಕು. ಅವರು ಆ ಸ್ಥಾನದಲ್ಲಿ ಉತ್ತಮವಾದದ್ದನ್ನು ನೀಡಬಹುದು ಎಂದು ನಾನು ಭಾವಿಸುತ್ತೇನೆ," ಎಂದು ಬ್ರಾಡ್ ಹಾಗ್ ಹೇಳಿದರು.
ಭಾರತ ತನ್ನ ಏಕದಿನ ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಪ್ರಾರಂಭಿಸಲಿದೆ. ಇದಕ್ಕೂ ಮುನ್ನ ಭಾರತ ತಂಡ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಇದು ಏಕದಿನ ಮಾದರಿಯಲ್ಲಿ ನಡೆಯಲಿದೆ.
ಎರಡು ಪಂದ್ಯಾವಳಿಗಳ ನಡುವಿನ ಪೂರ್ವಸಿದ್ಧತಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದಾರೆ.