ಬೆಂಗಳೂರು, ಜೂ.30: ಐಪಿಎಲ್ ಸ್ಥಾಪಕ, ಮಾಜಿ ಚೇರ್ಮನ್ ಲಲಿತ್ ಮೋದಿ ಅವರು ಚೆನ್ನೈ ಸೂಪರ್ ಕಿಂಗ್ಸ್ ನ ಮೂವರು ಆಟಗಾರರ ಮೇಲೆ ಮಾಡಿದ ಆರೋಪಕ್ಕೆ ಬೆಲೆ ಇಲ್ಲದ್ದಂತಾಗಿದೆ. ಲಂಚ ಪ್ರಕರಣದಲ್ಲಿ ಸುರೇಶ್ ರೈನಾ, ರವೀಂದ್ರ ಜಡೇಜ ಹಾಗೂ ಬ್ರಾವೋಗೆ ಬಿಸಿಸಿಐ ಹಾಗೂ ಐಸಿಸಿ ಕ್ಲೀನ್ ಚಿಟ್ ನೀಡಿದೆ.
'ಲಲಿತ್ ಮೋದಿ ಅವರು ಐಸಿಸಿಗೆ ಪತ್ರ ಬರೆದಿದ್ದರು, ಹೀಗಾಗಿ ಐಸಿಸಿಯವರು ಪತ್ರದ ಬಗ್ಗೆ ಬಿಸಿಸಿಐಗೆ ತಿಳಿಸಿದರು. ಮೂವರೂ ಆಟಗಾರರು ಅಂತಾರಾಷ್ಟ್ರೀಯ ಮಟ್ಟದ ಆಟಗಾರರಾಗಿದ್ದು, ಅಂತಾರಾಷ್ಟ್ರೀಯ ವ್ಯಾಪ್ತಿಗೆ ಒಳಪಡುತ್ತಾರೆ. ಐಸಿಸಿಯಿಂದ ಈ ಆಟಗಾರರ ಬಗ್ಗೆ ಯಾವುದೇ ಮಾಹಿತಿ ಈವರೆಗೂ ಬಂದಿಲ್ಲ. ಇದು ಅವರಿಗೆ ಆಟವಾಡಲು ಕ್ಲೀನ್ ಚಿಟ್ ನೀಡುತ್ತದೆ' ಎಂದು ಠಾಕೂರ್ ಹೇಳಿದರು. [ಐಪಿಎಲ್ ಫಿಕ್ಸಿಂಗ್ ಭೂತ ಎಬ್ಬಿಸಿದ ಲಲಿತ್ ಮೋದಿ]
2013ರಲ್ಲಿ ಮೋದಿ ಅವರು ಐಸಿಸಿ ಸಿಇಒಗೆ ಡೇವ್ ರಿಚರ್ಡ್ ಸನ್ ಗೆ ಬರೆದ ಪತ್ರದ ಬಗ್ಗೆ ಬಿಸಿಸಿಐ ಕೂಡಾ ತನಿಖೆ ನಡೆಸಿತ್ತು. ಆದರೆ, ಪತ್ರದಲ್ಲಿ ಏನು ಆರೋಪ ಇರಲಿಲ್ಲ ಹಾಗೂ ಮೂವರು ಆಟಗಾರರ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ ಎಂದು ತಿಳಿದು ಬಂದಿದೆ.
ಮೂವರೂ ಆಟಗಾರರು ಅಂತಾರಾಷ್ಟ್ರೀಯ ಮಟ್ಟದ ಆಟಗಾರರಾಗಿದ್ದು, ಅಂತಾರಾಷ್ಟ್ರೀಯ ವ್ಯಾಪ್ತಿಗೆ ಒಳಪಡುತ್ತಾರೆ. ಐಸಿಸಿಯಿಂದ ಈ ಆಟಗಾರರ ಬಗ್ಗೆ ಯಾವುದೇ ಮಾಹಿತಿ ಈವರೆಗೂ ಬಂದಿಲ್ಲ. ಆರೋಪ ಮುಕ್ತಗೊಳಿಸಲು ಇಷ್ಟು ಸಾಕು ಎಂದು ಠಾಕೂರ್ ಹೇಳಿದ್ದಾರೆ. [ಲಮೋ ಲೆಟರ್ ಕಳಿಸಿದ್ದು ನಿಜ: ಐಸಿಸಿ]
2015ರ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲೂ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಆರೋಪ ಕೇಳಿ ಬಂದಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಅನುರಾಗ್ ಠಾಕೂರ್, ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ ಏನೂ ಹೇಳಲು ಬರುವುದಿಲ್ಲ ಎಂದಿದ್ದಾರೆ.
ಸಿಎಸ್ಕೆ ತಂಡದ ಈ ಮೂರು ಆಟಗಾರರಿಗೆ ಬುಕ್ಕಿ ಬಾಬಾ ದಿವಾನ್ನಿಂದ ಲಂಚದ ರೂಪದಲ್ಲಿ ಒಟ್ಟಾರೆ 20 ಕೋಟಿ ರೂ. ಮೊತ್ತದ ನಗದು ಮತ್ತು ಫ್ಲ್ಯಾಟ್ ಸಿಕ್ಕಿದೆ ಎಂದು ಆರೋಪಿಸಲಾಗಿದೆ. ಪ್ರತಿ ಪಂದ್ಯಕ್ಕೂ 50-110 ಕೋಟಿ ರು ಬೆಟ್ಟಿಂಗ್ ನಡೆಸಲಾಗುತ್ತದೆ ಎಂದು ಲಲಿತ್ ಮೋದಿ ಆರೋಪಿಸಿದ್ದರು.(ಪಿಟಿಐ)