
ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದೇ ಪರಿಗಣಿಸಲಾಗಿದೆ. ಟೀಮ್ ಇಂಡಿಯಾ ಕಂಡಂತೆ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಈ ವರ್ಷ ಸ್ವಾತಂತ್ಯ್ಯ ದಿನಾಚರಣೆ ದಿನದಂದೇ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಮೂಲಕ ತನ್ನೆಲ್ಲಾ ಅಭಿಮಾನಿಗಳಿಗೆ ಆಘಾತ ನೀಡಿದರು.
ಧೋನಿ, ಭಾರತ ತಂಡದಿಂದ ಹೊರನಡೆದ ಬಳಿಕ ಅವರ ಸ್ಥಾನವನ್ನು ತುಂಬಬಲ್ಲ ಮತ್ತೊಬ್ಬ ಆಟಗಾರ ಇನ್ನೂ ಲಭ್ಯವಾಗಲ್ಲ. ಏಕೆಂದರೆ ಭಾರತೀಯ ಕ್ರಿಕೆಟ್ನಲ್ಲಿ ಆತನ ಸಾಧನೆ ಅಂತದ್ದು. ಐಸಿಸಿ ಎಲ್ಲಾ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಆಗಿರುವ ಧೋನಿಯ ಸ್ಥಾನವನ್ನು ತುಂಬುವುದು ತುಂಬಾ ಕಷ್ಟ ಎಂದು ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
"ಟ್ರ್ಯಾಕ್ ರೆಕಾರ್ಡ್ನೊಂದಿಗೆ, ಅವರು (ಧೋನಿ) ನಮ್ಮ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿ ಇತಿಹಾಸದಲ್ಲಿ ಉಳಿದಿದ್ದಾರೆ. ಕೇವಲ ಕೀಪರ್ ಮತ್ತು ಬ್ಯಾಟ್ಸ್ಮನ್ ಅಷ್ಟೇ ಅಲ್ಲ ನಾಯಕನಾಗಿಯೂ ಅವರ ದಾಖಲೆ ಅಂತದ್ದು. ಅವರ ಸ್ಥಾನವನ್ನ ತುಂಬಬಲ್ಲ ವಿಚಾರವನ್ನು ಗಮನಿಸಿದರೆ ಕಪಿಲ್ ದೇವ್ ನಿವೃತ್ತಿ ಬಳಿಕ ಮತ್ತೆ ನಾವು ಇಲ್ಲಿಯವರೆಗೆ ಕಪಿಲ್ ದೇವ್ ಅವರನ್ನ ಪಡೆದಿದ್ದೀವಾ?'' ಎಂದು ಶಾಸ್ತ್ರಿ ಟೈಮ್ಸ್ ನೌಗೆ ತಿಳಿಸಿದರು.
ಮಾತನ್ನು ಮುಂದುವರಿಸಿದ ಶಾಸ್ತ್ರಿ "ನಾವು ಇನ್ನೊಬ್ಬ ಸಚಿನ್ರನ್ನ ಪಡೆಯಬಹುದೇ? ಈ ರೀತಿಯ ಆಟಗಾರರನ್ನು ಪಡೆಯುವುದು ಸುಲಭವಲ್ಲ, ಆದರೆ ದೇಶದಲ್ಲಿ ಸಾಕಷ್ಟು ಪ್ರತಿಭೆಗಳಿವೆ, ಮತ್ತು ಅವಕಾಶವನ್ನು ಪಡೆದುಕೊಳ್ಳುವುದು ಯುವಕರಿಗೆ ಬಿಟ್ಟದ್ದು, "ಎಂದು ಅವರು ಹೇಳಿದರು.
ಕೌಶಲ್ಯಗಳ ತೀವ್ರ ಸ್ಪರ್ಧೆ ಇರುವ ಜಗತ್ತಿನಲ್ಲಿ ಅವನು(ಧೋನಿ) ತಾನೇ ಮಾಡಿಕೊಂಡ ಹೆಸರು ಸಾಧಿಸುವುದು ತುಂಬಾ ಕಷ್ಟ. ಆತ ಆಟಗಾರರನ್ನು ನಂಬುವುದು, ಅವರ ಸಾಮರ್ಥ್ಯವನ್ನು ತಿಳಿದುಕೊಳ್ಳುವುದು, ಅವನ ಶಾಂತತೆಯನ್ನು ಕಾಪಾಡಿಕೊಳ್ಳುವುದು ಅವನನ್ನು ಎಲ್ಲರಿಗಿಂತ ವಿಭಿನ್ನ ಮತ್ತು ವಿಶಿಷ್ಟನನ್ನಾಗಿ ಮಾಡಿತು. ಮುಂದಿನ ವರ್ಷಗಳಲ್ಲಿ ಅದೇ ಪ್ರಮಾಣದ ಜವಾಬ್ದಾರಿಯನ್ನು ತೆಗೆದುಕೊಳ್ಳುವಾಗ ಯಾವುದೇ ಆಟಗಾರ ಅಥವಾ ನಾಯಕನಿಗೆ ಅವನು ಆಟವನ್ನು ನಿಭಾಯಿಸಿದ ರೀತಿ ಸವಾಲಿನ ಕೆಲಸವಾಗಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.