
ಶನಿವಾರ, ಫೆಬ್ರವರಿ 18ರಂದು ರಾಯ್ಪುರದ ವೀರ್ ನಾರಾಯಣ ಸ್ಟೇಡಿಯಂನಲ್ಲಿ ನಡೆದ 2023ರ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಪಂದ್ಯಾವಳಿ ಉದ್ಘಾಟನಾ ಪಂದ್ಯದಲ್ಲಿ ಪ್ರದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡವು ಬೆಂಗಾಲ್ ಟೈಗರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.
57 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕ ಬುಲ್ಡೋಜರ್ಸ್ ತಂಡವು ಎದುರಾಳಿ ಬೆಂಗಾಲ್ ಟೈಗರ್ಸ್ ವಿರುದ್ಧ 8 ವಿಕೆಟ್ಗಳ ಗೆಲುವಿನೊಂದಿಗೆ ಲೀಗ್ ಪ್ರಾರಂಭಿಸಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಕಿಚ್ಚ ಸುದೀಪ್ ಮಾರ್ಗದರ್ಶನವಿದ್ದರೆ, ಪ್ರದೀಪ್ ನಾಯಕತ್ವ ವಹಿಸಿದ್ದರು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬೆಂಗಾಲ್ ಟೈಗರ್ಸ್ ತಂಡ, ಉದಯ್ ಅವರ 26 ರನ್ ಹಾಗೂ ಬ್ಯಾನರ್ಜಿ ಅವರ 25 ರನ್ಗಳ ನೆರವಿನಿಂದ ನಿಗದಿತ 10 ಓವರ್ಗಳ ಮೊದಲ ಇನ್ನಿಂಗ್ಸ್ನಲ್ಲಿ 8 ವಿಕೆಟ್ಗೆ 73 ರನ್ ಗಳಿಸಿತು.

ಬೌಲಿಂಗ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಪರ ನಿರೂಪ್ ಭಂಡಾರಿ 16 ರನ್ಗೆ 3 ವಿಕೆಟ್ ಪಡೆದರೆ, ನಾಯಕ ಪ್ರದೀಪ್ 4 ರನ್ಗೆ 2 ವಿಕೆಟ್ ಮತ್ತು ಚಂದನ್ ಕುಮಾರ್ 1 ವಿಕೆಟ್ ಪಡೆದರು.
ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡ ನಾಯಕ ಪ್ರದೀಪ್ ಅವರ 51 ರನ್, ಡಾರ್ಲಿಂಗ್ ಕೃಷ್ಣ ಅವರ 15 ರನ್ ಮತ್ತು ರಾಜೀವ್ ಹನು ಅವರ 14 ರನ್ಗಳ ನೆರವಿನಿಂದ ನಿಗದಿತ 10 ಓವರ್ಗಳ ಮೊದಲ ಇನ್ನಿಂಗ್ಸ್ನಲ್ಲಿ 5 ವಿಕೆಟ್ಗೆ 93 ರನ್ ಕಲೆ ಹಾಕಿತು. ಈ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ ಅಮೂಲ್ಯ 20 ರನ್ಗಳ ಮುನ್ನಡೆ ಸಾಧಿಸಿತು.
ಬೌಲಿಂಗ್ನಲ್ಲಿ ಬೆಂಗಾಲ್ ಟೈಗರ್ಸ್ ತಂಡದ ಪರ ಸೌಗತ್, ಬ್ಯಾನರ್ಜಿ ಮತ್ತು ಜಿಶ್ಯು ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಬೆಂಗಾಲ್ ಟೈಗರ್ಸ್ ತಂಡ, ಜಿಶ್ಯು ಅವರ 22 ರನ್, ಬ್ಯಾನರ್ಜಿ ಅವರ 17 ರನ್ಗಳ ನೆರವಿನಿಂದ ನಿಗದಿತ 10 ಓವರ್ಗಳಲ್ಲಿ 6 ವಿಕೆಟ್ಗೆ 76 ರನ್ ಗಳಿಸಿತು.

ಬೌಲಿಂಗ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರ ಗೋಲ್ಡನ್ ಸ್ಟಾರ್ ಗಣೇಶ್ 5 ರನ್ಗಳಿಗೆ 2 ವಿಕೆಟ್, ಜಯರಾಮ್ ಕಾರ್ತಿಕ್ 9 ರನ್ಗಳಿಗೆ 2 ವಿಕೆಟ್ ಮತ್ತು ನಿರೂಪ್ ಭಂಡಾರಿ 1 ವಿಕೆಟ್ ಪಡೆದರು.
ಅಂತಿಮ ಇನ್ನಿಂಗ್ಸ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಗೆಲುವಿಗೆ 56 ರನ್ಗಳು ಬೇಕಾಗಿದ್ದಾಗ, ರಾಜೀವ್ ಹನು 23 ರನ್, ಕಿಚ್ಚ ಸುದೀಪ್ 15 ರನ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ 10 ರನ್ ಬಾರಿಸಿ ಗೆಲುವಿನ ಗಡಿ ಮುಟ್ಟಿಸಿದರು.