ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಈ ತಂಡ ದಾಖಲೆಯ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಹಲವು ಆಟಗಾರರು ಕಾರಣರಾಗಿದ್ದಾರೆ. ತಂಡದ ಯಶಸ್ಸಿನಲ್ಲಿ ದಶಕಗಳ ಕಾಲ ಟೊಂಕ ಕಟ್ಟಿ ನಿಂತ ಆಟಗಾರರ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಅವರಿಗೂ ಸ್ಥಾನ. ಹಳದಿ ಜೆರ್ಸಿಯಲ್ಲಿ ರವೀಂದ್ರ ಜಡೇಜಾ ಮೈದಾನಕ್ಕೆ ಇಳಿದರೆ, ತಂಡದಲ್ಲೂ ಹೊಸ ಜೋಶ್ ಬರುತ್ತಿತ್ತು. ಆದರೆ ಮುಂದಿನ ಆವೃತ್ತಿಯಲ್ಲಿ ರವೀಂದ್ರ ಜಡೇಜಾ ಹಳದಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ತಮ್ಮ ಹಳೆಯ ತಂಡ ರಾಜಸ್ಥಾನ ರಾಯಲ್ಸ್ ಪರ ಕಣಕ್ಕೆ ಇಳಿಯಲಿದ್ದಾರೆ.
ರವೀಂದ್ರ ಜಡೇಜಾ ಅವರು ರಾಜಸ್ಥಾನ ರಾಯಲ್ಸ್ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ನಿಜಕ್ಕೂ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಆದರೆ ಮ್ಯಾನೇಜ್ಮೆಂಟ್ ಬದಲಾವಣೆ ಬಯಸಿದೆ. ಈ ಬಗ್ಗೆ ಸಿಎಸ್ಕೆ ಸಿಎಒ ವಿಶ್ವನಾಥನ್ ಈ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.

ನಿಜಕ್ಕೂ ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನಕ್ಕೆ ಕಳುಹಿಸುವುದು ಬೇಸರದ ಸಂಗತಿ. ನಮ್ಮ ತಂಡದಲ್ಲೂ ನಾವು ಬದಲಾವಣೆ ಬಯಸಿದ್ದೆವು. ನಾವು ಟಾಪ್ ಆರ್ಡರ್ ಭಾರತೀಯ ಬ್ಯಾಟರ್ ಹುಡುಕಾಟ ನಡೆಸಿದ್ದೆವು. ಟ್ರೇಡ್ ಮೂಲಕ ಭಾರತದ ಟಾಪ್ ಆರ್ಡರ್ ಬ್ಯಾಟರ್ ನಮ್ಮ ತಂಡ ಸೇರಿರುವುದು ಸಂತಸದ ಸಂಗತಿ. ಸಿಎಸ್ಕೆ ಮ್ಯಾನೇಜ್ಮೆಂಟ್ ತೆಗೆದುಕೊಂಡು ದೊಡ್ಡ ನಿರ್ಧಾರಗಳಲ್ಲಿ ಇದು ಒಂದಾಗಿತ್ತು. ಬದಲವಾಣೆಗಾಗಿ ನಾವು ಈ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಭವಿಷ್ಯದ ತಂಡವನ್ನು ಕಟ್ಟುವುದು ಸಿಎಸ್ಕೆ ಜವಾಬ್ದಾರಿಯಾಗಿದೆ ಎಂದು ಸಿಎಒ ತಿಳಿಸಿದ್ದಾರೆ.
ರವೀಂದ್ರ ಜಡೇಜಾ ಐಪಿಎಲ್ನ ಅನುಭವಿ ಆಟಗಾರರಲ್ಲಿ ಒಬ್ಬರು. ಇವರು ಈಗಾಗಲೇ ಐಪಿಎಲ್ನಲ್ಲಿ 254 ಪಂದ್ಯಗಳನ್ನು ಆಡಿದ್ದು, 27ರ ಸರಾಸರಿಯಲ್ಲಿ 3260 ರನ್ ಕಲೆ ಹಾಕಿದ್ದಾರೆ. ಈ ವೇಳೆ 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇವರು ಬೌಲಿಂಗ್ನಲ್ಲೂ ಬಿಗುವಿನ ದಾಳಿ ನಡೆಸಿ 170 ವಿಕೆಟ್ ಕಬಳಿಸಿದ್ದಾರೆ. ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ರಾಜಸ್ಥಾನ ಪರ ಆಡಿದ್ದ ಜಡ್ಡು, ಈಗ ಮತ್ತೆ ಅದೇ ತಂಡ ಸೇರಲಿದ್ದಾರೆ.